ರಾಯಚೂರು: ಮತ್ತೆ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ?
ಕಾಮರ್ಸ್ ವಿಷಯಕ್ಕೆ ಸೇರಿದ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಇಂದು ರಾಯಚೂರು ವಿದ್ಯಾರ್ಥಿಗಳ ಮೊಬೈಲುಗಳಲ್ಲಿ ಓಡಾಡಿವೆ. ಈ ವಿಚಾರ ಬೆಳಿಗ್ಗೆ 12 ಗಂಟೆ 30 ನಿಮಿಷಕ್ಕೆ ರಾಯಚೂರು ಜಿಲ್ಲಾಧಿಕಾರಿ ಚೇತನ್ ಗಮನಕ್ಕೆ ಬಂದಿದೆ.
ಬೆಂಗಳೂರು, ಮಾರ್ಚ್ 13: ರಾಯಚೂರಿನಲ್ಲಿ ದ್ವಿತೀಯ ಪದವಿಪೂರ್ವ ಪರೀಕ್ಷೆಯ ಕಾಮರ್ಸ್ ಪ್ರಶ್ನೆ ಪತ್ರಿಕೆ ಸೋರಿಕೆಯಾದ ವರದಿಗಳು ಬರುತ್ತಿವೆ.
ಕಾಮರ್ಸ್ ವಿಷಯಕ್ಕೆ ಸೇರಿದ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಇಂದು ರಾಯಚೂರು ವಿದ್ಯಾರ್ಥಿಗಳ ಮೊಬೈಲುಗಳಲ್ಲಿ ಓಡಾಡಿವೆ. ಈ ವಿಚಾರ ಬೆಳಿಗ್ಗೆ 12 ಗಂಟೆ 30 ನಿಮಿಷಕ್ಕೆ ರಾಯಚೂರು ಜಿಲ್ಲಾಧಿಕಾರಿ ಗಮನಕ್ಕೆ ಬಂದಿದೆ. ಅಂದರೆ 10:30 ಗೆ ಪರೀಕ್ಷೆ ಆರಂಭವಾದ 2 ಗಂಟೆಗಳ ನಂತರ ಈ ವಿಚಾರ ಗೊತ್ತಾಗಿದೆ.[ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ : 10 ಪ್ರಮುಖ ಬೆಳವಣಿಗೆಗಳು]
ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಹಾಲಿಗೆ 10: 15ಕ್ಕೆ ಪ್ರವೇಶಿಸುವಾಗ ಈ ಪ್ರಶ್ನೆ ಪತ್ರಿಕೆ ಲೀಕ್ ಆಗಿರಲಿಲ್ಲ. ಒಮ್ಮೆ ಒಳಗೆ ಬಂದ ನಂತರ ವಿದ್ಯಾರ್ಥಿಗಳನ್ನು ಹೊರಗೆಯೂ ಬಿಟ್ಟಿಲ್ಲ. ಇದರ ಮಧ್ಯದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಎಲ್ಲಾ ಪುಟಗಳೂ ಲೀಕ್ ಆಗಿಲ್ಲ. ಕೇವಲ ಒಂದು ಪುಟವಷ್ಟೇ ವಾಟ್ಸಪ್ ನಲ್ಲಿ ಬಂದಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಶಿಖಾ ಹೇಳಿದ್ದಾರೆ.
"ಸದ್ಯ ರಾಯಚೂರು ಎಸ್ಪಿ ಚೇತನ್ ಸಿಂಗ್ ರಾಥೋಡ್ ಈ ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ನಡೆಸುತ್ತಿದ್ದಾರೆ. ಇದು ಕಿಡಿಗೇಡಿಗಳ ದುಷ್ಕೃತ್ಯ. ನಾವು ಆರೋಪಿಗಳನ್ನು ಪತ್ತೆ ಹಚ್ಚಿಯೇ ಹಚ್ಚುತ್ತೇವೆ. ವಿದ್ಯಾರ್ಥಿಗಳು ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ," ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.[ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ, ಇಬ್ಬರು ಆರೋಪಿಗಳಿಗೆ ಜಾಮೀನು]
2016ರಲ್ಲಿ ಇದೇ ರೀತಿ ಎರಡೆರಡು ಬಾರಿ ರಸಾಯನ ಶಾಸ್ತ್ರ (ಕೆಮೆಸ್ಟ್ರಿ) ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಕೊನೆಗೆ ಎರಡು ಬಾರಿ ಮರು ಪರೀಕ್ಷೆ ನಡೆಸಲಾಗಿತ್ತು. ಈ ನೆನಪುಗಳಿನ್ನೂ ಮಾಸುವ ಮುನ್ನವೇ ಇದೀಗ ದ್ವಿತೀಯ ಪಿಯುಸಿಯ ಪ್ರಶ್ನೆ ಪತ್ರಿಕೆ ಸೋರಿಕೆಯ ಸುದ್ದಿಗಳು ಮತ್ತೆ ಕೇಳಿ ಬರುತ್ತಿವೆ.