ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ
ಬೆಂಗಳೂರು, ಏಪ್ರಿಲ್, 01: ದ್ವಿತೀಯ ಪಿಯಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ಬೆಂಗಳೂರಿನ ಮಲ್ಲೇಶ್ವರಂ ಪಿಯು ಬೋರ್ಡ್ ಎದುರು ನಡೆಯುತ್ತಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ತಹಬದಿಗೆ ತರಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಏಪ್ರಿಲ್ 12 ಕ್ಕೆ ಮರುಪರೀಕ್ಷೆ ಮಾಡುತ್ತೇನೆ ಎಂದು ಹೇಳಿತ್ತು. ಆದರೆ ವಿದ್ಯಾರ್ಥಿಗಳು ನಾವು ಮತ್ತೆ ಪರೀಕ್ಷೆ ಬರೆಯುವುದಿಲ್ಲ. ಸರ್ಕಾರ ಮಾಡಿದ ತಪ್ಪಿಗೆ ನಾವು ಹೊಣೆಗಾರರಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.[ಪಿಯುಸಿ ಪ್ರತಿಭಟನೆ ಚಿತ್ರಗಳು]
ರಸಾಯನಶಾಸ್ತ್ರ ಪರೀಕ್ಷೆ ರದ್ದಾದ ನಂತರ ಪಿಯು ಬೋರ್ಡ್ ಗೆ ಸಾಗರೋಪಾದಿಯಲ್ಲಿ ನುಗ್ಗಿದ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಗುರುವಾರ ಸ್ಥಳಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಮುಖಂಡರಾದ ಸುರೇಶ್ ಕುಮಾರ್, ಆರ್. ಅಶೋಕ್, ಸಿಟಿ ರವಿ ಭೇಟಿ ನೀಡಿ ನಾವು ವಿದ್ಯಾರ್ಥಿಗಳ ಪರವಾಗಿ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.
ಎರಡನೇ ಬಾರಿ ಪರೀಕ್ಷೆ
ನಿಗದಿಯಂತೆ ಮಾರ್ಚ್ 31ರಂದು ನಡೆಯಬೇಕಿದ್ದ ಪರೀಕ್ಷೆ ಪತ್ರಿಕೆ ಸೋರಿಕೆಯಾದ ಕಾರಣ ರದ್ದಾಗಿತ್ತು. ಹಿಂದೆ ಒಮ್ಮೆ ವಿದ್ಯಾರ್ಥಿಗಳು ಕೆಮೆಸ್ಟ್ರಿ ಪರೀಕ್ಷೆ ಬರೆದಿದ್ದರೂ ಆ ಪತ್ರಿಕೆ ಸಹ ಲೀಕ್ ಎಂದು ಹೇಳಿ ರದ್ದು ಮಾಡಲಾಗಿತ್ತು.
ವಿದ್ಯಾರ್ಥಿಗಳ ಬಂಧನ
ಆಕ್ರೋಶಗೊಂಡ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎಬಿವಿಪಿ ಕಾರ್ಯಕರ್ತರನ್ನು ಸಹ ಬಂಧಿಸಲಾಗಿದ್ದು ಪಿಯು ಬೋರ್ಡ್ ಗೆ ಮತ್ತು ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಲಾಠಿ ಚಾರ್ಜ್
ಕೆರಳಿದ ವಿದ್ಯಾರ್ಥಿಗಳು ಮತ್ತು ಪಾಲಕರು ಮಲ್ಲೇಶ್ವರಂನ ಪಿಯು ಬೋರ್ಡ್ ಗೆ ನುಗ್ಗಿ ಆಕ್ರೋಶ ಹೊರ ಹಾಕುತ್ತಿದ್ದ ವೇಳೆ ಪರಿಸ್ಥಿತಿ ನಿಯಂತ್ರಣ ಮಾಡಲು ಲಾಠಿ ಚಾರ್ಜ್ ಮಾಡಲಾಗಿದೆ. ಇನ್ನೊಂದೆಡೆ ಪತ್ರಿಕೆ ಸೋರಿಕೆ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ.
ಮುಗಿಯದ ಗೊಂದಲ
ಒಂದೆಡೆ ಸರ್ಕಾರ ಇನ್ನೊಮ್ಮೆ ಪರೀಕ್ಷೆ ಮಾಡಲು ಸಿದ್ಧವಾಗಿದೆ. ಎರಡು ಬಾರಿ ಪರೀಕ್ಷೆಗೆ ಸಿದ್ಧರಾಗಿ ಬೇಸರಗೊಂಡಿರುವ ವಿದ್ಯಾರ್ಥಿಗಳು ಯಾವ ಕಾರಣಕ್ಕೂ ಪರೀಕ್ಷೆ ಬರೆಯಲ್ಲ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯಕ್ಕೆ ಯಾವ ಗೊಂದಲಗಳು ಬಗೆಹರಿಯುವ ಲಕ್ಷಣ ಕಾಣುತ್ತಿಲ್ಲ.