ರಾಯಚೂರು: ಟ್ರ್ಯಾಕ್ಟರ್ ಪಲ್ಟಿ, ಇಬ್ಬರ ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
ರಾಯಚೂರು, ಮೇ 24 : ಕೂಲಿ ಕಾರ್ಮಿಕರನ್ನು ಕರೆದ್ಯೂಯ್ಯುತ್ತಿದ್ದ ಟ್ರ್ಯಾಕ್ಟರ್ ಚಾಲಕ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಜವಳಗೇರಾ ಬಳಿ ಬುಧವಾರ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಟ್ರ್ಯಾಕ್ಟರ್ ಚಾಲಕ 30 ವರ್ಷದ ಹುಸೇನ್ ಭಾಷಾ, 28 ವರ್ಷದ ಕೂಲಿ ಕಾರ್ಮಿಕ ಮಹಿಳೆ ಮುತ್ತಮ್ಮ ಮೃತ ದುರ್ದೈವಿಗಳು.
ಘಟನೆಯಲ್ಲಿ 20 ಜನರಿಗೆ ಗಾಯಗಳಾಗಿವೆ. ಗಾಯಗೊಂಡರ ಪೈಕಿ 6 ಜನರ ಸ್ಥಿತಿ ಗಂಭೀರವಾಗಿದ್ದು ಇವರನ್ನು ರಾಯಚೂರಿನ ರಿಮ್ಸ್ ಹಾಗೂ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನು ಸಣ್ಣಪುಟ್ಟ ಗಾಯಾಗೊಂಡವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕೆಲಸಕ್ಕೆ ಜವಳಗೇರಾ ಸೆಂಟ್ರಲ್ ಫಾರ್ಮಗೆ ಸುಮಾರು 54ಕ್ಕೂ ಅಧಿಕ ಕೂಲಿ ಕಾರ್ಮಿಕರನ್ನು ಕರೆದ್ಯೂಯ್ಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ ಹೊಡೆದು ಟಿಎಲ್ ಬಿಸಿ ಕಾಲುವೆ ನಂಬರ್ 54ಕ್ಕೆ ಉರುಳಿ ಬಿದ್ದಿದೆ. ಈ ಬಗ್ಗೆ ಬಳಗಾನೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.