ಹಾವೇರಿ: 17 ವರ್ಷ ಹಿಂದಿನ ಘಟನೆಯಿಂದ ಇಂದಿಗೂ ಪರದಾಡುತ್ತಿರುವ ಜನ
ಹಾವೇರಿ, ಜೂನ್ 29: 'ಸಿಟ್ಟಿನ ಕೈಯಲ್ಲಿ ಬುದ್ದಿ ಕೊಡಬಾರದು' ಎಂಬುದು ನಮ್ಮ ಉತ್ತರ ಕರ್ನಾಟಕದ ಹಿರಿಯರು ಹೇಳುವ ಕಿವಿ ಮಾತು. ಈ ಕಿವಿ ಮಾತು ಈಗ ಯಾಕೆ ಅಂತಿರಾ? ಈ ಮುಂದಿನ ಘಟನೆ ಕೇಳಿದರೆ ನಿಮಗೆ ಅರ್ಥವಾಗುತ್ತದೆ.
ಏಪ್ರಿಲ್ 29, 2000ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿ ತಹಶೀಲ್ದಾರ್ ಕಚೇರಿ ಎದುರಿನಲ್ಲಿ ಕುಡಿಯುವ ನೀರಿಗಾಗಿ ನಡೆದಿದ್ದ ಪ್ರತಿಭಟನೆಯೊಂದರಲ್ಲಿ ಭಾಗವಹಿಸಿದ್ದ ಪ್ರತಿಭಟನಾಕಾರರು ಆಕ್ರೋಶಗೊಂಡು ಕಚೇರಿಯ ಒಂದು ಕೊಠಡಿಗೆ ಬೆಂಕಿ ಇಟ್ಟಿದ್ದರು. ಇದರಿಂದ ಕೊಠಡಿಯಲ್ಲಿದ್ದ ಸವಣೂರು ಹೋಬಳಿ ವ್ಯಾಪ್ತಿಯ ಜನರ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಂಪೂರ್ಣ ಸುಟ್ಟು ಹೋಗಿದ್ದವು.
ಹೀಗೆ ಸಿಟ್ಟಿನ ಕೈಯಲ್ಲಿ ತಮ್ಮ ಬುದ್ದಿ ಕೊಟ್ಟು ಮಾಡಿದ ಅವಾಂತರಕ್ಕೆ ಈ ಹೋಬಳಿಯ 33 ಗ್ರಾಮಗಳ ಜನರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಸಿಗದೇ ಇಂದಿಗೂ ಪರದಾಡುತ್ತಿದ್ದಾರೆ.
ಮುಖ್ಯವಾಗಿ ಇವರು ತಮ್ಮ ಜಮೀನಿನ ಮೇಲೆ ಬ್ಯಾಂಕಿನಿಂದ ಪಡೆದ ಸಾಲ ತೀರಿದ್ದರೂ ಪಹಣಿ ಪತ್ರದಲ್ಲಿ ಅದರ ಭೋಜಾ ತೆಗೆಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬ್ಯಾಂಕಿನಲ್ಲಿ ಹೊಸ ಸಾಲ ಪಡೆಯದೇ ರೈತರು ಪರದಾಡುವಂತಾಗಿದೆ.
10 ಸಾವಿರಕ್ಕೂ ಅಧಿಕ ರೈತರ ದಾಖಲೆ ನಾಶ
ಘಟನೆಯಲ್ಲಿ ಸವಣೂರು ಕಸಬಾ ಹೋಬಳಿ ವ್ಯಾಪ್ತಿಯ 33 ಕಂದಾಯ ಗ್ರಾಮಗಳಿಗೆ ಸೇರಿದ ಸುಮಾರು 2 ಸಾವಿರಕ್ಕೂ ಹೆಚ್ಚು ಸರ್ವೇ ನಂಬರ್ ಗಳ ವ್ಯಾಪ್ತಿಯಲ್ಲಿನ 10 ಸಾವಿರಕ್ಕೂ ಹೆಚ್ಚು ರೈತರ ಜಮೀನಿನ ಮೂಲ ದಾಖಲೆಗಳು ನಾಶವಾಗಿದ್ದವು. ಇದರಿಂದಾಗಿ ಕಳೆದ 17 ವರ್ಷಗಳಿಂದ ಆ ವ್ಯಾಪ್ತಿಯ ರೈತರು ಕಂದಾಯ ಕಚೇರಿಗೆ ಅಲೆದಾಡುವುದು ತಪ್ಪಿಲ್ಲ. ಆರ್.ಟಿ.ಸಿಯಲ್ಲಿ ತಿದ್ದುಪಡಿ, ಪೋಡಿ ಮಾರ್ಪಾಟು, ಷರತ್ತು ತಿದ್ದುಪಡಿ ಯಾವುದೂ ಆಗುತ್ತಿಲ್ಲ. ಮೂಲ ಕಡತ ಇಲ್ಲದಿರುವುದರಿಂದ ತಹಸೀಲ್ದಾರ ಕಚೇರಿಯಲ್ಲಿ ಯಾವ ತಿದ್ದುಪಡಿಗೂ ಅವಕಾಶ ನೀಡದೇ ರೈತರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ದೂರು ನೀಡಿ ಕೈ ತೊಳೆದುಕೊಂಡ ಅಧಿಕಾರಿಗಳು
ದಾಖಲೆಗಳ ಕೋಣೆಗೆ ಬೆಂಕಿ ಇಟ್ಟ ಘಟನೆ ನಡೆದು 16 ವರ್ಷವೇ ಕಳೆದಿದೆ. ಒಂದೇ ಹೋಬಳಿಗೆ ಸೇರಿದ ಕಡತಗಳು ಸುಟ್ಟಿರುವುದರಿಂದ ಘಟನೆ ಹಿಂದೆ ಯಾವುದೋ ಒಳ ಸಂಚು ಇರುವ ಶಂಕೆ ವ್ಯಕ್ತಪಡಿಸಿ ಅಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಕುರಿತು ಸ್ಥಳೀಯ ಠಾಣೆಯಲ್ಲಿ ಘಟನೆ ಕುರಿತು ಪ್ರಕರಣ ದಾಖಲಾಗಿದೆ. ಆದರೆ, ಇದುವರೆಗೆ ಮುಂದಿನ ಯಾವ ಕ್ರಮವೂ ಆಗಿಲ್ಲ. ಆದರೆ, ಘಟನೆಯಲ್ಲಿ ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟು ದಾಖಲೆಗಳನ್ನು ಸುಟ್ಟಿದ್ದರಿಂದ ಜನ ಈಗಲೂ ಪರದಾಡುವಂತಾಗಿದೆ