ಅಪಘಾತ : ಚಿತ್ರದುರ್ಗದಲ್ಲಿ 4, ತುಮಕೂರಿನಲ್ಲಿ 1 ಸಾವು
ಕೋಲಾರ, ಫೆಬ್ರವರಿ 15 : ಮಂಗಳವಾರ ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ 5 ಜನರು ಮೃತಪಟ್ಟಿದ್ದು 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೋಲಾರದಲ್ಲಿ ಕೆಎಸ್ಆರ್ಪಿಯ ಪೇದೆಗಳು ಸಾಗುತ್ತಿದ್ದ ಬಸ್ ಉರುಳಿ ಬಿದ್ದು 14 ಮಂದಿ ಗಾಯಗೊಂಡಿದ್ದಾರೆ.
ಕೋಲಾರ : ಶ್ರೀನಿವಾಸಪುರ ಬಳಿ ಕೆಎಸ್ಆರ್ಪಿ ಪೊಲೀಸರು ಸಂಚರಿಸುತ್ತಿದ್ದ ಬಸ್ ಉರುಳಿ ಬಿದ್ದಿದ್ದು ಅಪಘಾತದಲ್ಲಿ 14 ಪೊಲೀಸರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕೋಲಾರ ಜಿಲ್ಲೆಯ ಶ್ರೀನಿವಾರಪುರ ತಾಲೂಕಿನ ತೂಪಲ್ಲಿ ಬಳಿ ಸೋಮವಾರ ಮುಂಜಾನೆ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ಚರಂಡಿಗೆ ಬಿದ್ದಿದೆ. ರಾಯಲ್ಪಾಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಅಪಘಾತದಿಂದಾಗಿ ಬಸ್ಸಿನಲ್ಲಿದ್ದ 14 ಪೊಲೀಸರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಚಿತ್ರದುರ್ಗದಲ್ಲಿ 4 ಸಾವು : ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿ ಇಂದು ಮುಂಜಾನೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಬಳ್ಳಾರಿಯ ಲೋಕೋಪಯೋಗಿ ಇಲಾಖೆ ನೌಕರರಾದ ರಾಘವೇಂದ್ರ, ಈರಬಸಯ್ಯ, ರಮೇಶ್ ಮತ್ತು ವಿರೇಶ ಗೌಡ ಎಂದು ಗುರುತಿಸಲಾಗಿದೆ. ದಾವಣಗೆರೆಯಿಂದ ಮದುವೆ ಸಮಾರಂಭ ಮುಗಿಸಿಕೊಂಡು ಬಳ್ಳಾರಿಗೆ ವಾಪಸ್ ಆಗುವಾಗ ಇನ್ನೋವಾ ಕಾರು ಲಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ತುಮಕೂರು : ಬೈಕ್ನಲ್ಲಿ ತೆರಳುತ್ತಿದ್ದ ದಂಪತಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪತಿ ಸಾವನ್ನಪ್ಪಿ ಪತ್ನಿ ಗಂಭೀರವಾಗಿ ಗಾಯಗೊಂಡ ಘಟನೆ ಬೂತನಹಳ್ಳಿ ಕ್ರಾಸ್ ಬಳಿ ನಡೆದಿದೆ. ಮೃತಪಟ್ಟವರನ್ನು ಹೆಬ್ಬೂರು ನಿವಾಸಿ ಮದೀನ್ (45) ಎಂದು ಗುರುತಿಸಲಾಗಿದೆ. ಇವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.