ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ವಿಮೆ
ನವದೆಹಲಿ, ಜು. 19: ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ ಕಟ್ಟಡ ಕೆಲಸಗಾರರಿಗೆ ವೈದ್ಯಕೀಯ ವಿಮೆ ನೀಡಲು ಮುಂದಾಗಿದೆ.
ಸದ್ಯ ರಿಯಲ್ ಎಸ್ಟೇಟ್ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ವೈದ್ಯಕೀಯ ವಿಮೆ ಒದಗಿಸಲಾಗುತ್ತಿದೆ. ಇದರೊಂದಿಗೆ ಇಎಸ್ ಐ ದಿನದ 24 ಗಂಟೆಯ ಸಹಾಯವಾಣಿಯನ್ನು ತೆರೆಯಲು ನಿರ್ಧಾರ ಮಾಡಿದೆ.[ವಿಮೆ ಮತ್ತು ಪಿಂಚಣಿ ಯೋಜನೆ ಬಗ್ಗೆ ತಿಳಿದುಕೊಳ್ಳಿ]
ಮಳೆಗಾಲದ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗಲಿದ್ದು ಲಕ್ಷಾಂತರ ಜನರಿಗೆ ಸೌಲಭ್ಯ ನೆರವು ನೀಡಲಿದೆ. ಎಲ್ಲ ವರ್ಗದ ಕಾರ್ಮಿಕರಿಗೆ ಸಂಪೂರ್ಣ ಆರೋಗ್ಯ ಸೌಲಭ್ಯ ಪಡೆಯಲು ಕಾಯ್ದೆ ಅನುವು ಮಾಡಿಕೊಡಲಿದೆ.
ಹೊಸ ಇಎಸ್ಐಸಿ ನಿಯಮಗಳು 10 ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುವ ಸ್ಥಳಗಳಲ್ಲಿ ಅನ್ವಯವಾಗಲಿದೆ. ಮಾಸಿಕ 15 ಸಾವಿರ ರು. ಪಡೆಯುವ ಕಾರ್ಮಿಕರು ಇದಕ್ಕೆ ಅರ್ಹರಾಗಲಿದ್ದಾರೆ. ನೋಂದಣಿಯಾದ ದಿನದಿಂದಲೇ ಕಾರ್ಮಿಕ ಮತ್ತು ಅವರ ಕುಟುಂಬಕ್ಕೆ ವಿಮೆ ಜಾರಿಗೊಳಿಸಲಾಗಿದೆ. ಆರೋಗ್ಯ ಸೌಲಭ್ಯ ಪಡೆಯಲು ಯಾವುದೇ ಮಿತಿ ಹೇರಿಕೆ ಮಾಡಿಲ್ಲ. ಕಾಯಿಲೆ ಭತ್ಯೆಯಾಗಿ ಒಂದು ವರ್ಷದಲ್ಲಿ 91 ದಿನ ಅವರು ಪಡೆಯುವ ವೇತನದಲ್ಲಿ ಶೇ.70ರಷ್ಟು ನೀಡಲಾಗುವುದು. ಶೇ.90ರಷ್ಟು ಅಂಗವೈಕಲ್ಯ ಸೌಲಭ್ಯ, ಶೇ.90ರಷ್ಟು ಅವಲಂಬಿತರ ಸೌಲಭ್ಯ ನೀಡಲಾಗುವುದು ಎಂದು ತಿಳಿಸಲಾಗಿದೆ.[ಪ್ರಧಾನಮಂತ್ರಿ ಜನಧನ ಯೋಜನೆ ಎಂದರೇನು?]
ವಿಮೆಗೆ ಒಳಪಟ್ಟ ವ್ಯಕ್ತಿ ಮೃತಪಟ್ಟರೆ ಅಂತ್ಯ ಸಂಸ್ಕಾರ ಹಣವಾಗಿ 10 ರು. ಸಾವಿರ ನೀಡಲಾಗುವುದು. ಜನಧನ ಯೋಜನೆ ನಂತರ ಕೇಂದ್ರ ಸರ್ಕಾರ ಅಸಂಘಟಿತ ವಲಯದ ನೆರವಿಗೆ ತೆಗೆದುಕೊಂಡ ಮತ್ತೊಂದು ಪ್ರಮುಖ ಯೋಜನೆ ಇದಾಗಿದೆ ಎಂದು ಹೇಳಬಹುದಾಗಿದೆ.