ಪರೀಕ್ಷೆಯೇ ಬರೆಯದ ಕೇಂದ್ರ ಸರಕಾರಕ್ಕೆ ಅಂಕ ಕೊಡೋದೇನು: ಸಿಎಂ ಸಿದ್ದು
ಕಲಬುರಗಿ, ಮೇ 27: 'ಅವರು ಪರೀಕ್ಷೆಯನ್ನೇ ಬರೆದಿಲ್ಲ. ಇನ್ನು ಅಂಕ ಕೊಡೋದು ಏನು?' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸರಕಾರದ ಮೂರು ವರ್ಷದ ಆಡಳಿತದ ಬಗ್ಗೆ ಕಲಬುರಗಿಯಲ್ಲಿ ವ್ಯಂಗ್ಯವಾಡಿದ್ದಾರೆ. ಇಲ್ಲಿನ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಕೇಂದ್ರ ಸರಕಾರದ್ದು ಬಾಯಿ ಬಡಾಯಿ, ಸಾಧನೆ ಶೂನ್ಯ ಎಂದಿದ್ದಾರೆ.
ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಯು ಟರ್ನ್ ಸರಕಾರ ಎಂದು ಹೀಗಳೆದಿರುವ ಅವರು, ಯುಪಿಎ ಸರಕಾರ ಜಾರಿಗೆ ತಂದಿದ್ದ ಯೋಜನೆಗಳಿಗೆ ಹೆಸರು ಬದಲಾವಣೆ ಮಾಡಿದ್ದೇ ಈಗಿನ ಬಿಜೆಪಿ ಸರಕಾರದ ಸಾಧನೆ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.[ಸ್ವಚ್ಛ್ ಭಾರತ್ ಅಭಿಯಾನ ದೇಶದ ಅತಿ ದೊಡ್ಡ ಹಗರಣ: ಕೆಸಿ ವೇಣುಗೋಪಾಲ್]
ಇನ್ನು ರೈತರ ಸಾಲ ಮನ್ನಾ ವಿಚಾರವಾಗಿ ಯಡಿಯೂರಪ್ಪ ಅವರದು ಢೋಂಗಿತನ ಎಂದು ಆರೋಪಿಸಿದ ಸಿಎಂ, ಈಗೇನೋ ಸಾಲ ಮನ್ನಾ ಮಾಡಿ ಎಂದು ಅಬ್ಬರಿಸುತ್ತಿರುವ ಯಡಿಯೂರಪ್ಪ, ತಾನು ಮುಖ್ಯಮಂತ್ರಿ ಆಗಿದ್ದಾಗ ಸಾಲ ಮನ್ನಾ ಮಾಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು ಎಂಬುದನ್ನು ಸ್ಮರಿಸಿದರು.
ಅವರ ಮಾತುಗಳೆಲ್ಲ ವಿಧಾನಸಭೆ ನಡಾವಳಿಯಲ್ಲಿ ದಾಖಲಾಗಿದೆ. ಇನ್ನು ಆಹಾರ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಆಧಾರ ರಹಿತವಾದದ್ದು. ಅದಕ್ಕೆ ಸಂಬಂಧಿಸಿದ ಹಗೆ ಯಡಿಯೂರಪ್ಪ ಅವರ ಹತ್ತಿರ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.