ಭಾರತ-ಪಾಕ್ ಮಧ್ಯೆ ಯುದ್ಧ ನಡೆಯುತ್ತೆ: ಮಾತಾ ಮಾಣಿಕೇಶ್ವರಿ ಭವಿಷ್ಯ
ಕಲಬುರಗಿ, ಅಕ್ಟೋಬರ್ 6: ಜಿಲ್ಲೆಯ ಪ್ರಸಿದ್ಧ ಕ್ಷೇತ್ರ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಭವಿಷ್ಯ ನುಡಿದಿದ್ದು, ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತದೆ. ಆ ನಂತರವೇ ಭಯೋತ್ಪಾದನೆ ಕೊನೆಗೊಳ್ಳಲಿದೆ ಎಂದಿದ್ದಾರೆ. ಬುಧವಾರ ಮಾಧ್ಯಮದವರ ಜತೆಗೆ ಅವರು ಮಾತನಾಡಿದರು.
ಭಾರತದ ಶಕ್ತಿ ಕಡಿಮೆ ಮಾಡುವ ಯತ್ನದಲ್ಲೇ ಪಾಕಿಸ್ತಾನ ತನ್ನ ನೆಲವನ್ನೇ ನಾಶ ಮಾಡಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಮುಸ್ಲಿಮರು ತಮ್ಮವರನ್ನೇ ಕೊಂದು ಅಧರ್ಮ ಮೆರೆಯುತ್ತಿದ್ದಾರೆ. ಭಾರತ-ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುವುದು ನಿಶ್ಚಿತ ಎಂದರು. ಇದೇ ವೇಳೆ ಕಾವೇರಿ ವಿವಾದದ ಬಗ್ಗೆಯೂ ಮಾತನಾಡಿದ ಅವರು, ಕಾವೇರಿ ವಿವಾದದಿಂದ ಎರಡೂ ರಾಜ್ಯಗಳ ಜನರು ಹೊಡೆದಾಡಿ ಸಾಯುತ್ತಾರೆ ಎಂದರು.[ನನ್ನ ಭವಿಷ್ಯ ಮತ್ತೆ ನಿಜವಾಯಿತು ನೋಡಿ: ಕೋಡಿಮಠದ ಶ್ರೀ]
ದೇಶದಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಬೇಕು ಎಂದು ಸಹ ಮಾತಾ ಮಾಣಿಕೇಶ್ವರಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ಸೇನಾ ದಾಳಿಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಬೇಡಿ ಎಂದಿದ್ದಾರೆ. ದಾಳಿಯ ಬಗ್ಗೆ ಮಾತನಾಡಲು ಯಾರಿಗೆ ಅಧಿಕಾರ ನೀಡಲಾಗಿದೆಯೋ ಅವರು ಮಾತ್ರ ಬಹಿರಂಗ ಹೇಳಿಕೆಗಳನ್ನು ನೀಡಬಹುದು. ಇತರರು ಅನಗತ್ಯ ಮಾತನಾಡಬಾರದು ಎಂದು ಸಂಪುಟ ಸಭೆಯಲ್ಲಿ ಹೇಳಿದ್ದಾರೆ.