ಕಲಬುರಗಿ: ಹೆಣ್ಮಕ್ಳ ಗರ್ಭಕ್ಕೆ ಕತ್ತರಿ ಹಾಕಿದ ಆಸ್ಪತ್ರೆಗಳನ್ನು ಮುಚ್ಚುವಂತೆ ಆಗ್ರಹ
ಕಲಬುರಗಿ, ಫೆಬ್ರವರಿ. 07 : ವೈದ್ಯರ ಹಣದ ದಾಹಕ್ಕೆ ಈ ವರೆಗೆ ಕಲಬುರಗಿ ಜಿಲ್ಲೆಯ ಸುಮಾರು 2,200 ಹೆಣ್ಣು ಮಕ್ಕಳ ಗರ್ಭಕೋಶಕ್ಕೆ ಕತ್ತರಿ ಹಾಕಿರುವ ವೈದ್ಯ ಮತ್ತು ಆಸ್ಪತ್ರೆಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಲಂಬಾಣಿ, ದಲಿತ ಮಹಿಳೆಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು. ಇದಕ್ಕೆ ಹಲವು ಸಂಘನೆಗಳು ಬೆಂಬಲ ನೀಡಿದವು.
ಕಾಯಿಲೆಗಳು ಬಂದಾಗ ನಮ್ಮ ಪಾಲಿಗೆ ವೈದ್ಯರೇ ದೇವರೆಂದು ನಂಬಿಕೊಂಡು ಖಾಸಗಿ ಆಸ್ಪತ್ರೆಗಳಿಗೆ ಹೋಗುವರ ಹೆಣ್ಣು ಮಕ್ಕಳಿಗೆ ನಿಮಗೆ ಗರ್ಭಕೋಶದ ಸೊಂಕಿದೆ ಅದನ್ನು ತೆಗೆಯುವುದು ಅನಿವಾರ್ಯತೆ ಇದೆ ಎಂದು ನಂಬಿಸಿ ಹಣದಾಸೆಗೆ ಪಾಪ ಬಡಪಾಯಿ ಹೆಣ್ಮಕ್ಳ ಗರ್ಭಕ್ಕೆ ನೀಚ ವೈದ್ಯರು ಕತ್ತರಿ ಹಾಕಿದ್ದಾರೆ.
ಈ ವರೆಗೆ ಕಲಬುರ್ಗಿ ನಗರದ 25 ಆಸ್ಪತ್ರೆಗಳಲ್ಲಿ 2,200ಕ್ಕೂ ಅಧಿಕ ಗರ್ಭಕೋಶ ಶಸ್ತ್ರಚಿಕಿತ್ಸೆಗಳು ನಡೆದಿವೆ. ತಾವು ಭೇಟಿ ನೀಡಿದ ಆಸ್ಪತ್ರೆಗಳು ಕಾನೂನು, ವೈದ್ಯವೃತ್ತಿಯ ನೈತಿಕತೆಯನ್ನೆಲ್ಲ ಗಾಳಿಗೆ ತೂರಿವೆ. ದಾಖಲೆಗಳನ್ನೂ ಇಟ್ಟಿಲ್ಲ' ಎಂದು 2015ರ ಅಕ್ಟೋಬರ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಜ್ಞರ ಸಮಿತಿಯು ವರದಿ ನೀಡಿದೆ.
ಹಣಕ್ಕೆ ಆಸೆಪಟ್ಟು ಹೊಟ್ಟೆನೋವೆಂದು ಆಸ್ಪತ್ರೆಗೆ ಬರುತ್ತಿದ್ದ ಗರ್ಭಿಣಿ ಮಹಿಳೆಯರ ಗರ್ಭಕ್ಕೆ ಕತ್ತರಿ ಹಾಕುತ್ತಿದ್ದ ಕೃತ್ಯ ಅಗಸ್ಟ್ 2015ರಲ್ಲಿ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಜ್ಞರ ಸಮಿತಿಯೊಂದನ್ನು ರಚಿಸಿತ್ತು.
ಈ ಪ್ರರಣವನ್ನು ಭೇಧಿಸಲು ಬೆನ್ನಟ್ಟದ್ದ ತಂಡ ಹಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ತನಿಖೆ ನಡೆಸಿ ಅಕ್ಟೋಬರ್ 2015ನಲ್ಲಿ ಜಿಲ್ಲೆಯ ಕೆಲ ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದುಗೊಳಿಸಿತ್ತು.