ಕಲಬುರಗಿ: ದೇವದಾಸಿ ಪದ್ಧತಿಗೆ ದೂಡಲ್ಪಟ್ಟಿದ ದಲಿತ ಬಾಲಕಿ ರಕ್ಷಣೆ
ಕಲಬುರಗಿ, ಜೂನ್ 16: 5 ವರ್ಷದ ಹಿಂದೆ ದೇವದಾಸಿ ಪದ್ಧತಿಗೆ ದೂಡಲ್ಪಟ್ಟಿದ್ದ 10ರ ಹರೆಯದ ದಲಿತ ಅಪ್ರಾಪ್ತ ಯುವತಿಯನ್ನು ಕಲಬುರಗಿಯಲ್ಲಿ ರಕ್ಷಣೆ ಮಾಡಲಾಗಿದೆ
ಕಲಬುರಗಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ಸಹಾಯವಾಣಿ ಮತ್ತು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸಿದ್ದಾರೆ.
ಯುವತಿ ಕಲಬುರಗಿಯ ಚಿತ್ತಾಪುರ ತಾಲೂಕಿನ ಮಾವಿನಸೂರ ಗ್ರಾಮದವಳು ಎಂದು ತಿಳಿದು ಬಂದಿದ್ದು ಸದ್ಯ 5ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆಯನ್ನು 5 ವರ್ಷದ ಕೆಳಗೆ ಬೇಡಸೂರ ಗ್ರಾಮದ ಸಾಮವ್ವ ದೇವಿಗೆ ದೇವದಾಸಿಯನ್ನಾಗಿ ಮಾಡಲಾಗಿತ್ತು.
ಈ ಕುರಿತು 'ದಿ ಹಿಂದೂ'ಗೆ ಪ್ರತಿಕ್ರಿಯೆ ನೀಡಿರುವ ಮಕ್ಕಳ ರಕ್ಷಣಾ ಅಧಿಕಾರಿ ಸಿವಿ ರಾಮನ್, "ಮಗುವಿನ ಪೋಷಕರು ಮತ್ತು ಸಾಮವ್ವ ದೇವಸ್ಥಾನದ ಅರ್ಚಕ ಶರಣಪ್ಪ ತಪ್ಪು ಒಪ್ಪಿಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ನಾನು ದೇವದಾಸಿ ಆಚರಣೆಗಳನ್ನು ನಡೆಸುತ್ತಿರುವುದಾಗಿ ಅರ್ಚಕ ಒಪ್ಪಿಕೊಂಡಿದ್ದು ಸುಮಾರು 1,000 ಯುವತಿಯರನ್ನು ದೇವದಾಸಿ ಪದ್ಧತಿಗೆ ದೂಡಿದ್ದಾನೆ. ಅರ್ಚಕ ಸಲಹೆ ಮೇರೆ ಮಗಳನ್ನು ಪೋಷಕರು ದೇವದಾಸಿ ಮಾಡಿದ್ದರು," ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ ಯುವತಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಸಂದರ್ಭ ಅರ್ಚಕರ ಬಳಿಗೆ ಕರೆದುಕೊಂಡು ಹೋದಾಗ ಅರ್ಚಕರು ಆಕೆಯನ್ನು ದೇವದಾಸಿ ಮಾಡಲು ಹೇಳಿದ್ದರು ಎನ್ನಲಾಗಿದೆ.
ಇನ್ನು ಘಟನೆ ಬಗ್ಗೆ ಗೊತ್ತಿದ್ದು ಇಬ್ಬರು ಶಾಲಾ ಶಿಕ್ಷಕರು ಈ ಬಗ್ಗೆ ಚಕಾರವೆತ್ತಿಲ್ಲ. ಹೀಗಾಗಿ ಎಫ್ಐಆರ್ ನಲ್ಲಿ ಅವರ ಹೆಸರನ್ನೂ ಆರೋಪಿಗಳ ಪಟ್ಟಿಯಲ್ಲಿ ಹಾಕಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಹೇಳಿದ್ದಾರೆ.