ಮಹಾಶಿವರಾತ್ರಿ ಪ್ರಯುಕ್ತ ಕಲಬುರಗಿಯಲ್ಲಿ ಮಾಂಸ ಮಾರಾಟ ನಿಷೇಧ
ಕಲಬುರಗಿ, ಫೆಬ್ರವರಿ. 22 : ಮಹಾಶಿವರಾತ್ರಿ ಅಂಗವಾಗಿ ಫೆಬ್ರವರಿ 24ರಂದು (ಶುಕ್ರವಾರ) ಕಲಬುರಗಿ ನಗರದಲ್ಲಿ ಮಾಂಸ ಮಾರಾಟ ನಿಷೇಧಿಸಲಾಗಿದೆ.
ನಗರದಲ್ಲಿರುವ ಎಲ್ಲ ಕಸಾಯಿ ಖಾನೆ ಮತ್ತು ಮಾಂಸ ಮಾರಾಟ ಮಾಡುವ ಅಂಗಡಿಗಳಲ್ಲಿ ಯಾವುದೇ ರೀತಿಯ ಪ್ರಾಣಿ ವಧೆ ಅಥವಾ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಿ ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ್ ಆದೇಶ ಹೊರಡಿಸಿದ್ದಾರೆ.['ಶೋಷಿತ ವರ್ಗಕ್ಕೆ ನ್ಯಾಯ ನೀಡಿದ ಮಹಾನ್ ಪುರುಷ ಡಾ.ಬಿ.ಆರ್.ಅಂಬೇಡ್ಕರ್']
ಒಂದು ವೇಳೆ ಈ ಆದೇಶ ಉಲ್ಲಂಘಿಸಿದಲ್ಲಿ ಕೆ.ಎಂ.ಸಿ. ಕಾಯ್ದೆ 1976ರ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತ ಪಿ. ಸುನೀಲಕುಮಾರ್ ತಿಳಿಸಿದ್ದಾರೆ.
ಫೆ.28ರೊಳಗಾಗಿ ಆಧಾರ ಸಂಖ್ಯೆ ಸಲ್ಲಿಸಲು ಸೂಚನೆ: ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಎಲ್ಲ ಫಲಾನುಭವಿಗಳು ತಮ್ಮ ವಾಸಸ್ಥಳ/ವಿಳಾಸ ಬದಲಾವಣೆ ಮಾಡಿದ್ದಲ್ಲಿ, ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ ಬದಲಾದ ವಿಳಾಸದ ಮಾಹಿತಿಯನ್ನು ಪಿಂಚಣಿ ಮಂಜೂರಾತಿ ನಿಯಮ 28ರನ್ವಯ ಕಡ್ಡಾಯವಾಗಿ ಸಲ್ಲಿಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಇಲಿಯಾಸ್ ಅಹ್ಮದ್ ಇಸಾಮದಿ ತಿಳಿಸಿದ್ದಾರೆ.
ಅದರಂತೆ ಕೇಂದ್ರ ಸರ್ಕಾರದ ನೇರ ಹಣ ಸಂದಾಯ ಯೋಜನೆ (ಡಿ.ಬಿ.ಟಿ.)ಯಡಿ ಪ್ರತಿ ಫಲಾನುಭವಿಯು ಸರ್ಕಾರದ ಸವಲತ್ತುಗಳನ್ನು ಪಡೆಯಲು ಆಧಾರ್ ಸಂಖ್ಯೆ, ಬ್ಯಾಂಕ್/ಅಂಚೆ ಖಾತೆ ಸಂಖ್ಯೆ ಮತ್ತು ಆಧಾರ್ ಜೋಡಣೆಗೆ ಒಪ್ಪಿಗೆ ನೀಡುವುದು ಕಡ್ಡಾಯವಾಗಿದೆ.
ತಮ್ಮ ವ್ಯಾಪ್ತಿಯ ಕಂದಾಯ ಅಧಿಕಾರಿಗಳಿಗೆ 2017ರ ಫೆಬ್ರವರಿ 28ರೊಳಗಾಗಿ ಖುದ್ದಾಗಿ ಸಲ್ಲಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಿಂಚಣಿ ಪಾವತಿಯನ್ನು ಸ್ಥಗಿತಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.