ಕಲಬುರ್ಗಿ: ಲಂಚ ಕೇಳಿದ ಅಧಿಕಾರಿಯನ್ನೇ ಬಲೆಗೆ ಬೀಳಿಸಿದ ರೈತ
ಲಂಚ ಕೇಳಿದ ಅಧಿಕಾರಿಯನ್ನೇ ಈ ರೈತ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಕಟ್ಟಿಸಂಗಾವಿ ಗ್ರಾಮ ಲೆಕ್ಕಿಗ ಸೂರ್ಯಕಾಂತ್ ಜಮಾದಾರ್ ನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ರೆಡ್ ಹ್ಯಾಂಡ್ ಹಿಡಿದಿದ್ದಾರೆ.
ಕಲಬುರ್ಗಿ, ಫೆಬ್ರವರಿ 10: ಲಂಚ ಕೇಳಿದ ಅಧಿಕಾರಿಯನ್ನೇ ಈ ರೈತ ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ರೈತನಿಂದ ಲಂಚ ಸ್ವೀಕರಿಸುತ್ತಿದ್ದ ಜೀವರ್ಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮ ಲೆಕ್ಕಿಗ ಸೂರ್ಯಕಾಂತ್ ಜಮಾದಾರ್ ನನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ರೆಡ್ ಹ್ಯಾಂಡ್ ಹಿಡಿದಿದ್ದಾರೆ. ದಾಳಿ ವೇಳೆ ಜಮಾದಾರ್ 9 ಸಾವಿರ ಲಂಚ ಸ್ವೀಕರಿಸುತ್ತಿದ್ದ.
ಕಲಬುರ್ಗಿ ಜಿಲ್ಲೆಯ ಜೀವರ್ಗಿ ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ರೈತರೊಬ್ಬರು ತಮ್ಮ 2 ಎಕರೆ ಜಮೀನಿನ ಪರಭಾರೆ ಮಾಡಿಕೊಡುವ ಸಂಬಂಧ ತಹಸೀಲ್ದಾರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಇದನ್ನು ಮಾಡಿಕೊಡಲು ಕಟ್ಟಿಸಂಗಾವಿ ಗ್ರಾಮ ಲೆಕ್ಕಿಗ ಸೂರ್ಯಕಾಂತ್ ಜಮಾದಾರ್ ರೂ. 15000/- ಲಂಚದ ಬೇಡಿಕೆ ಇಟ್ಟಿದ್ದ. ಅದರಂತೆ ಈ ರೈತ ಮೊದಲ ಕಂತಿನಲ್ಲಿ ರೂ. 6,000/- ಹಣವನ್ನು ನೀಡಿದ್ದಾರೆ. ಹಣ ನೀಡಿ ಇತ್ತ ಬಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದಾರೆ. [ಕಲಬುರಗಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ]
ರೈತ ನೀಡಿದ ದೂರಿನ ಮೇಲೆ ಇಂದು (ಫೆ. 10) ಪೊಲೀಸರು ಮಫ್ತಿಯಲ್ಲಿ ಹೋಗಿದ್ದಾರೆ. ಈ ವೇಳೆ ಸೂರ್ಯಕಾಂತ್ ಜಮಾದಾರ್ ರೈತರಿಂದ ರೂ. 9,000/- ಲಂಚದ ಹಣವನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇದೀಗ ಅಧಿಕಾರಿನ್ನು ದಸ್ತಗಿರಿ ಮಾಡಲಾಗಿದ್ದು 'ಭ್ರಷ್ಟಾಚಾರ ತಡೆ ಕಾಯ್ದೆ-1988' ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಸಿಬಿ ಕಲಬುರ್ಗಿ ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಈ ಕುರಿತು ತನಿಖೆ ಮುಂದುವರೆದಿದೆ. [ಕಲಬುರಗಿ: ಹೆಣ್ಮಕ್ಳ ಗರ್ಭಕ್ಕೆ ಕತ್ತರಿ ಹಾಕಿದ ಆಸ್ಪತ್ರೆಗಳನ್ನು ಮುಚ್ಚುವಂತೆ ಆಗ್ರಹ]
ಹೀಗೆ ಭ್ರಷ್ಟ ಅಧಿಕಾರಿಯನ್ನು ಪೊಲೀಸರಿಗೆ ಹಿಡಿದುಕೊಡುವ ಮೂಲಕ ಕಲಬುರ್ಗಿಯ ರೈತರೊಬ್ಬರು ಮೆಚ್ಚುವ ಕೆಲಸ ಮಾಡಿದ್ದಾರೆ.