ಕಲಬುರಗಿಯಲ್ಲಿ ಮಳೆರಾಯ ಮೊಕ್ಕಾಂ: ಬೆಳೆ ನಷ್ಟ, ಸೇತುವೆ ಮುಳುಗಡೆ
ಕಲಬುರಗಿ, ಸೆಪ್ಟೆಂಬರ್ 23: ಬಿಸಿಲನ್ನೇ ಹೊದ್ದು ಮಲಗುವ ಮತ್ತು ಸೂರ್ಯನನ್ನೇ ಆಪ್ತ ಸಖ ಆಗಿಸಿಕೊಂಡ ಕಲಬುರಗಿ ಜನರಿಗೆ ಮಳೆಯ ತಂಪಾದ ಹಸಿ ಅನುಭವ ನೀಡಲು ಮಳೆರಾಯ ಅಕ್ಷರಶಃ ಮೊಕ್ಕಾಂ ಹೂಡಿದ್ದಾನೆ. 15 ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದು, ಸೂರ್ಯನ ನೋಡದೇ ಅದೆಷ್ಟು ದಿನಗಳಾದವು ಎಂಬ ಭಾವ ಜನರಲ್ಲಿ ಮೂಡತೊಡಗಿದೆ. ಸುಡು ಸುಡು ಬಿಸಿಲಿಗೆ ಆವರಿಸಿಕೊಳ್ಳಲು ಮಳೆರಾಯ ಅವಕಾಶ ಮಾಡಿಕೊಟ್ಟಿಲ್ಲ.
ಜಲಾಶಯಗಳು ನಿರೀಕ್ಷೆಗೂ ಮೀರಿ ತುಂಬಿ ಹರಿದರೆ, ಸೇತುವೆಗಳು ಕಾಣದಂತೆ ನೀರಿನಲ್ಲಿ ಮುಳುಗಿವೆ. ರಸ್ತೆಗಳು ಕಾಣೆಯಾಗಿವೆ. ಕೆಲ ಗ್ರಾಮಗಳಂತೂ ಇತರ ಪ್ರದೇಶಗಳ ಜೊತೆ ಸಂಪರ್ಕವನ್ನೇ ಕಳೆದುಕೊಂಡಿವೆ. ಇಲ್ಲಿನ ಬಹುತೇಕ ಮಂದಿ ತಂಪು ವಾತಾವರಣಕ್ಕಿಂತ ಬಿಸಿಲನ್ನೇ ಹೆಚ್ಚು ಇಷ್ಟಪಡುವವರು. ನೆತ್ತಿ ಸುಡುವ ಬಿಸಿಲಿನಲ್ಲಿ ಬಿಸಿ ಚಹಾ ಸೇವಿಸಿದಾಗಲೇ ಸಮಾಧಾನ. ಬಹುತೇಕ ಮಂದಿ ಎಸಿ, ಫ್ಯಾನು ಕೂಡ ಬಳಸುವುದಿಲ್ಲ.[ಕಲಬುರಗಿಯಲ್ಲಿ ಮಳೆ-ಚಳಿಯ ಜುಗಲ್ ಬಂದಿ]
ಬಿಸಿಲಿನಲ್ಲಿ ಬೆಂದು, ದುಡಿದು ಬೆವರು ಸುರಿಸುವ ಜನರು ಕೆಲ ದಿನಗಳ ಮಟ್ಟಿಗಾದರೂ ತಂಪಾದ ಅನುಭೂತಿ ಎಂಬ ಕಾಳಜಿ ಮಳೆರಾಯನಿಗೆ ಇದ್ದಿರಬಹುದು. ಪ್ರತಿ ವರ್ಷ ಹೀಗೆಯೇ ಬರುತ್ತೇನೆ ಎಂಬ ಮುನ್ಸೂಚನೆಯೊಂದಿಗೆ ಸ್ನೇಹದ ಹಸ್ತ ಚಾಚಿರಬಹದು. ಒಟ್ಟಿನಲ್ಲಿ ಕಲಬುರಗಿಯನ್ನು ಬಹು ವರ್ಷಗಳ ಬಳಿಕ ಮಳೆರಾಯ ತನ್ನ ತಕ್ಕೆಗೆ ತೆಗೆದುಕೊಂಡಿದ್ದಾನೆ. ಬಿಸಿಲಿಗೆ ಛತ್ರಿ ಹಿಡಿಯದ ಜನರು ಮಳೆಗಾಗಿ ಛತ್ರಿ ಹಿಡಿಯುವುದು ಅನಿವಾರ್ಯವಾಗಿದೆ.[ಬೀದರ್, ಕಲಬುರಗಿಯಲ್ಲಿ ನಿರಂತರ ಮಳೆ, ಜನತೆ ತತ್ತರ]
ಸಾವಿರಾರು ಎಕರೆಯಲ್ಲಿ ಬೆಳೆದಿದ್ದ ಎಳ್ಳು, ತೊಗರಿ, ಶೇಂಗಾ ಬೆಳೆ ನಷ್ಟವಾಗಿದೆ. ಅನೇಕ ಕಡೆ ಸೇತುವೆ ಮುಳುಗಡೆಯಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ತೆಲಂಗಾಣದಲ್ಲೂ ಭಾರೀ ಮಳೆಯಾಗುತ್ತಿದ್ದು, ಸಾವು-ನೋವು ಸಂಭವಿಸಿದೆ.