ಕಲಬುರಗಿ: ಗೈಡ್, ಪ್ರಿಯಕರನ ಕಿರುಕುಳಕ್ಕೆ ಪಿಎಚ್ ಡಿ ವಿದ್ಯಾರ್ಥಿನಿ ಆತ್ಮಹತ್ಯೆ
ಕಲಬುರಗಿ, ಏಪ್ರಿಲ್ 16 : ಗೈಡ್ ಹಾಗೂ ಪ್ರಿಯಕನ ಕಿರುಕುಳದಿಂದ ಪಿಹೆಚ್ ಡಿ ವಿದ್ಯಾರ್ಥಿನಿಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ.
ಗುಲ್ಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಹೆಚ್ ಡಿ ಮಾಡುತ್ತಿದ್ದ 31 ವರ್ಷದ ಶ್ರೀದೇವಿ ಡೆತ್ ನೋಟ್ ಬರೆದಿಟ್ಟು ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೇ ಹಳಿ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಶ್ರೀದೇವಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪಿಹೆಚ್ ಡಿ ವಿದ್ಯಾರ್ಥಿನಿಯಾಗಿದ್ದರು. ಕಳೆದ ಎರಡು ದಿನಗಳಿಂದ ಈಕೆ ಸಾಯುವ ಮುನ್ನ ಮನೆಯಲ್ಲಿ ಡೆತ್ನೋಟ್ ಬರೆದಿಟ್ಟು ಕಾಣೆಯಾಗಿದ್ದು, ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಆತ್ಮಹತ್ಯೆಗೆ ಕಾರಣವೇನು?: ತಿಪ್ಪಣ್ಣ ಎಂಬ ವ್ಯಕ್ತಿ ತನಗೆ 5 ವರ್ಷಗಳಿಂದ ಪರಿಚಯವಿದ್ದು, ಮದುವೆಯಾಗುವುದಾಗಿ ಹೇಳಿ ಮೋಸ ಮಾಡಿದ್ದಾನೆ. ತುಂಬಾ ತೊಂದರೆ ಕೊಡುತ್ತಿದ್ದಾನೆ.
ನನ್ನ ಗೈಡ್ ಸಿದ್ದಪ್ಪ ಕೂಡ ದುಡ್ಡಿಗಾಗಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ ತಿಪ್ಪಣ್ಣ ಕಾರಣ ಎಂದೆಲ್ಲಾ ಡೆತ್ನೋಟ್ ನಲ್ಲಿ ಶ್ರೀದೇವಿ ಬರೆದಿದ್ದಾರೆ.
ಈ ಬಗ್ಗೆ ಕಲಬುರಗಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.