ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಕ್ಕೆ ಡಿ, 2017 ಗಡುವು
ವಿಮಾನ ನಿಲ್ದಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು 3 ಪ್ಯಾಕೇಜ್ಗಳ ರಚಿಸಲಾಗಿದೆ.3 ಪ್ಯಾಕೇಜ್ಗಳ ಕಾಮಗಾರಿಗಳನ್ನು ಏಕಕಾಲಕ್ಕೆ ಜೊತೆಯಾಗಿ ಪ್ರಾರಂಭಿಸಿ ಡಿ.2017ರ ವೇಳೆಗೆ ಪೂರ್ಣಗೊಳಿಸಬೇಕು ಎಂದು ಸಂಸದ ಖರ್ಗೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ
ಕಲಬುರಗಿ, ನ.04 : ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕಲಬುರಗಿ ವಿಮಾನ ನಿಲ್ದಾಣ ಕಾಮಗಾರಿಯನ್ನು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಪರೀಶಿಲಿಸಿ ಇನ್ನು ಒಂದು ವರ್ಷದೊಳಗೆ ಕಾಮಾಗಾರಿ ಪೂರ್ಣಗೊಳ್ಳಬೇಕೆಂದು ಅಧಿಕಾರಿಗಳಗೆ ಸೂಚಿಸಿದರು.
ಗುರುವಾರ ಕಲಬುರಗಿ ತಾಲೂಕಿನ ಶ್ರೀನಿವಾಸ ಸರಡಗಿ ಹತ್ತಿರ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿ, ಪೂರ್ಣಗೊಳಿಸಲು ಸರ್ಕಾರ 109 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ. 2017 ಡಿಸೆಂಬರ್ ವೇಳೆಗೆ ಕಾಮಾಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಂಸದ ಮಲ್ಲಿಕಾರ್ಜುನ ಖರ್ಗೆ ಖಡಕ್ ಎಚ್ಚರಿಕೆ ನೀಡಿದರು.
ಮುಂದಿನ ಒಂದು ವರ್ಷದೊಳಗಾಗಿ ವಿಮಾನ ನಿಲ್ದಾಣದ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ವಿಮಾನ ಹಾರಾಟ ಪ್ರಾರಂಭಿಸಬೇಕೆಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿಮಾನ ನಿಲ್ದಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲು ಮೂರು ಪ್ಯಾಕೇಜ್ಗಳನ್ನು ರಚಿಸಲಾಗಿದೆ. ಮೂರು ಪ್ಯಾಕೇಜ್ಗಳ ಕಾಮಗಾರಿಗಳನ್ನು ಏಕಕಾಲಕ್ಕೆ ಜೊತೆ ಜೊತೆಯಾಗಿ ಪ್ರಾರಂಭಿಸಿ ಆದಷ್ಟು ಬೇಗ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದರು.
ವಿಮಾನ ನಿಲ್ದಾಣದ ಮೊದಲನೇ ಪ್ಯಾಕೇಜ್
ವಿಮಾನ ನಿಲ್ದಾಣದ ಮೊದಲನೇ ಪ್ಯಾಕೇಜಿನಲ್ಲಿ ವಿಮಾನ ನಿಲ್ದಾಣದ ರನ್ ವೇ, ಆವರಣ ಗೋಡೆ, ಫೆನ್ಸಿಂಗ್ ಮತ್ತು ಡ್ರೈನೇಜ್ ಕಾಮಗಾರಿಗಳನ್ನು 85.46 ಕೋಟಿ ರೂ.ಗಳ ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದೆ. ಇವುಗಳನ್ನು 2017ರ ಜೂನ್ ಒಳಗಾಗಿ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಎರಡನೇ ಪ್ಯಾಕೇಜ್ ಗೆ 9 ತಿಂಗಳ ಅವಧಿ
ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ, ಎ.ಟಿ.ಸಿ.ಟವರ್ ಕಮ್ ತಾಂತ್ರಿಕ ಬ್ಲಾಕ್, ವಿದ್ಯುತ್ ಉಪ ಕೇಂದ್ರ, ಅಗ್ನಿಶಾಮಕ ಕೇಂದ್ರ ಹಾಗೂ ಪಂಪ್ ರೂಮ್ ಗಳನ್ನು ಒಳಗೊಂಡ 30 ಕೋಟಿ ರು.ವೆಚ್ಚದ ಎರಡನೇ ಪ್ಯಾಕೇಜ್ ಕಾಮಗಾರಿಗಳಿಗಾಗಿ ಟೆಂಡರ್ ಕರೆಯಲಾಗಿದೆ. ಇದಕ್ಕೆ ಒಂದು ವಾರದಲ್ಲಿ ಮಂಜೂರಾತಿ ನೀಡಲಾಗುವುದು. ಈ ಕಾಮಗಾರಿಯನ್ನು 9 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಅವರು ಅಧಿಕಾರಿಗಳಿಗೆ ಹೇಳಿದರು.
ಮೂರನೇ ಪ್ಯಾಕೇಜ್ ಕಾಮಾಗಾರಿ
ಮೂರನೇ ಪ್ಯಾಕೇಜಿನಲ್ಲಿ ವಿಮಾನ ನಿಲ್ದಾಣಕ್ಕೆ ಅವಶ್ಯಕವಿರುವ ವಿಶೇಷ ವ್ಯವಸ್ಥೆಯ ಉಪಕರಣಗಳು ಒಳಗೊಂಡಿವೆ. ಆದಷ್ಟು ಬೇಗ ಟೆಂಡರ್ ಕರೆಯಬೇಕು. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳಿಸಲು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶೇ.33 ರಷ್ಟು ಅಂದರೆ 33 ಕೋಟಿ ರುಗಳ ಅನುದಾನ ನೀಡಲಾಗುತ್ತಿದೆ. ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಲು ಸಧ್ಯ 15 ಕೋಟಿ ರು.ಗಳನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೇ ಸರ್ಕಾರದಿಂದ ಬರಬೇಕಾದ ಅನುದಾನವನ್ನು ಸಹ ಬಿಡುಗಡೆಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ನಕ್ಷೆ ವೀಕ್ಷಿಸಿದ ಖರ್ಗೆ
ವಿಮಾನ ನಿಲ್ದಾಣದ ಕಾಮಾಗಾರಿ ಎಲ್ಲಿಗೆ ಬಂದಿದೆ. ಮುಂದೇನು ಆಗಬೇಕು ಎಂಬುವುದನ್ನು ಸಂಸದ ಮಲ್ಲಿಕಾರ್ಜನ ಖರ್ಗೆ, ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರು ನಕ್ಷೆಯನ್ನು ವೀಕ್ಷಿಸಿದರು.
ಹಲವರು ಹಾಜರ್
ಖರ್ಗೆ ಕಾಮಾಗಾರಿ ಪರಿಶೀಲಿಸಲು ಆಗಮಿಸಲಿದ್ದಾರೆಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ ಉಜ್ವಲ್ ಕುಮಾರ ಘೋಷ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ, ನಾಗಾರ್ಜುನ ಕನ್ಸ್ ಟ್ರಕ್ಷನ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಪ್ರೇಮ ರೆಡ್ಡಿ, ರೈಟ್ಸ್ ಕಂಪನಿಯ ಅಬ್ದುಲ್ ಬಾರಿ, ಇ.ಎಸ್.ಐ.ಸಿ. ಮ್ಯಾನೇಜರ್ ಶಿವಣ್ಣ, ಲೊಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ್ ಮಾರುತಿ ಗೋಖಲೆ, ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಮಹಮ್ಮದ್ ಅಜಿಜುದ್ದೀನ್ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.