ಬಿಎಸ್ ವೈ ಗೆ ಬೈ ಕಾಂಗ್ರೆಸ್ ಗೆ ಜೈ ಎಂದ ಕೆಜಿಪಿ ಶಾಸಕ ಬಿಆರ್ ಪಾಟೀಲ್
ಕಲಬುರಗಿ, ಜನವರಿ. 16 : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರಾಗಿದ್ದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಮುಂದಿನ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ.
ಈ ಬಗ್ಗೆ ಕಲಬುರಗಿಯಲ್ಲಿ ಮಾತನಾಡಿದ ಬಿ.ಆರ್.ಪಾಟೀಲ್ " ಜಾತ್ಯಾತೀತತೆ ಉಳಿಬೇಕಾದರೆ ಬಿಜೆಪಿಯೇತರ ಪಕ್ಷಗಳ ಒಗ್ಗೂಡುವಿಕೆಯ ಅಗತ್ಯವಿದೆ, ಜೆಡಿಎಸ್'ಗೆ ಮರಳುವುದು ಕನಸಿನ ಮಾತು.
ಇನ್ನು ಬಿಜೆಪಿ ಒಡೆದ ಮನೆಯಾಗಿದೆ ಹಾಗಾಗಿ ಬದಲಾವಣೆ ಬಯಸಿ ರಾಜಕೀಯಕ್ಕೆ ಬಂದ ತಮಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಅನಿವಾರ್ಯವಿದೆ ಎಂದು ಹೇಳುವ ಮೂಲಕ ತಾವೂ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಉತ್ಸುಕವಾಗಿರುವುದಾಗಿ ಆಳಂದ ಕ್ಷೇತ್ರದ ಕೆಜೆಪಿ ಶಾಸಕ ಬಿ.ಆರ್.ಪಾಟೀಲ್ ಬಹಿರಂಗಪಡಿಸಿದ್ದಾರೆ.
ಕಾಂಗ್ರೆಸ್ ಮನೆ ಕದತಟ್ಟಿರುವ ಅವರು, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಇದಕ್ಕೆ ಕೈ ನಾಯಕರಿಂದ ಹಸಿರು ನಿಶಾನೆ ದೊರೆತಿದೆ ಎಂದು ಸ್ವತಃ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.
ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಇಬ್ಬಾಗವಾದಾಗ ಬಿ.ಎಸ್.ವೈ ಜತೆ ಗುರುತಿಸಿ ಕೊಂಡ ಬಿ.ಆರ್.ಪಾಟೀಲ್, 2013ರಲ್ಲಿ ಆಳಂದ ಕ್ಷೇತ್ರದಿಂದ ಕೆಜೆಪಿಯಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.
ಬಳಿಕ ಯಡಿಯೂರಪ್ಪ ಮತ್ತೆ ಬಿಜೆಪಿ ಸೇರಿದಾಗ ಇವರು ಅತಂತ್ರವಾಗಿ ಉಳಿದಿದ್ದರು. ಇದೀಗ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮುಂದಿನ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುಲು ಬಿ.ಆರ್. ಪಾಟೀಲ್ ಮುಂದಾಗಿದ್ದಾರೆ.
ಲೋಕಸಭೆ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಇವರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದರು.