ರಾಮಸಮುದ್ರದಲ್ಲಿ ಅಪಘಾತ, 9 ಸಾವು, 40ಕ್ಕೂ ಹೆಚ್ಚು ಮಂದಿಗೆ ಗಾಯ
ಯಾದಗಿರಿ ಜಿಲ್ಲೆ ರಾಮಸಮುದ್ರದಲ್ಲಿ ಸಂಭವಿಸಿದ ಎರಡು ಲಾರಿಗಳ ಮಧ್ಯದ ಮುಖಾಮುಖಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿ, ಕನಿಷ್ಠ ನಲವತ್ತು ಮಂದಿ ಗಾಯಗೊಂಡಿದ್ದಾರೆ. ಆ ವೇಳೆ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಹಲವರಿಗೆ ಕೈ-ಕಾಲು ಮುರಿದಿವೆ.
ಯಾದಗಿರಿ, ಫೆಬ್ರವರಿ 21: ಯಾದಗಿರಿ ಜಿಲ್ಲೆಯ ರಾಮಸಮುದ್ರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂಬತ್ತು ಜನ ಸಾವನ್ನಪ್ಪಿದ್ದು, ನಲವತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ರಾಮಸಮುದ್ರದ ಶಾಲೆ ಹತ್ತಿರ ಇರೋ ತಿರುವಿನಲ್ಲಿ ಬೂದಿ ತುಂಬಿಕೊಂಡು ಬರುತ್ತಿದ್ದ ಲಾರಿ ಹಾಗೂ ಜನರನ್ನು ಕರೆದೊಯ್ಯುತ್ತಿದ್ದ ಡಿಸಿಎಂ ಲಾರಿಗೆ ಡಿಕ್ಕಿಯಾಗಿ, ಈ ದುರ್ಘಟನೆ ಸಂಭವಿಸಿದೆ.
ಚಾಲಕ ರುದ್ರಪ್ಪ ಗಾಜರಕೋಟ, ಶಂಕ್ರಮ್ಮ, ತಿಪ್ಪಣ್ಣ, ಬನ್ನಪ್ಪ, ಲಕ್ಷ್ಮಿ, ಅಫ್ರಿನ್, ಸಾಬಣ್ಣ ಮೇಸ್ತ್ರಿ, ವಿಷ್ಣು ಎಂಬುವರು ಸ್ಥಳದಲ್ಲೇ ಮೃತಪಟ್ಟರೆ, ರಾಯಚೂರಿನ ಆಸ್ಪತ್ರೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಅಪಘಾತದ ನಂತರ ಸ್ಥಳೀಯರು ಲಾರಿಯೊಳಗೆ ಸಿಕ್ಕಿಕೊಂಡವರನ್ನು ಹೊರಕ್ಕೆ ಎಳೆದಿದ್ದಾರೆ. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲೂ ನೆರವು ನೀಡಿದ್ದಾರೆ.[ನೆಲಮಂಗಲದ ಬಳಿ ಹೊತ್ತಿ ಉರಿದ ಕೆಎಸ್ ಆರ್ ಟಿಸಿ ಬಸ್]
ಇನ್ನು ಹತ್ತು ನಿಮಿಷದಲ್ಲಿ ಊರು ಸೇರಿಕೊಂಡು ಬಿಡ್ತಿದ್ವಿ. ಅಷ್ಟರಲ್ಲಿ ಈ ಅನಾಹುತ ಆಯಿತು. ದೊಡ್ಡ ಶಬ್ದ ಕೇಳಿತು. ಅದೇನು ಆಯಿತು ಅಂತ ತಿಳಿದುಕೊಂಡದ್ದು ಆಸ್ಪತ್ರೆಯಲ್ಲೇ. ನಾವು ಬದುಕಿ ಉಳಿದಿದ್ದು ಕೂಡ ಪವಾಡವೇ ಎಂದು ಮಾಧ್ಯಮದವರ ಜತೆಗೆ ಧಾವಂತದಿಂದಲೇ ಹೇಳಿಕೊಂಡವರು ಅಪಘಾತದ ಗಾಯಾಳುಗಳಲ್ಲಿ ಒಬ್ಬರು.[ಮೈಸೂರಿನಲ್ಲಿ ಜರ್ಮನಿ ಮಹಿಳೆಯ ಮುಖ, ಎದೆ ಕಚ್ಚಿ, ಪರಾರಿಯಾದ ಕಾಮುಕ]
ಲಾರಿಯಲ್ಲಿ ಮಕ್ಕಳೂ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಹಳ ಮಂದಿಗೆ ಕೈ-ಕಾಲು ಮುರಿದಿವೆ, ಕೆಲವರಿಗೆ ತಲೆಗೆ ಗಂಭೀರ ಪೆಟ್ಟಾಗಿದೆ. ಒಟ್ಟಾರೆ ಅಪಘಾತದಲ್ಲಿ ಬದುಕುಳಿದವರು ಇನ್ನೂ ಆಘಾತದಿಂದ ಹೊರಬಂದಿಲ್ಲ.