ನರೇಂದ್ರ ಮೋದಿಯ 'ಭಾರತ'ಕ್ಕೆ ಪಾಕಿಸ್ತಾನ ನೀಡಿದ ಎಚ್ಚರಿಕೆ
ಇಸ್ಲಮಾಬಾದ್, ಆಗಸ್ಟ್ 25: ಉಪಖಂಡದಲ್ಲಿ 'ಮೋದಿಯ ಭಾರತ' ತಾನೇ ಸೂಪರ್ ಪವರ್ ಅನ್ನೋ ಭ್ರಮೆಯಲ್ಲಿದೆ, ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆಂದು ನಮಗೆ ತಿಳಿದಿದೆ ಎಂದು ಪಾಕಿಸ್ತಾನದ ಪ್ರಧಾನಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಮ್ಮಲ್ಲೂ ನ್ಯೂಕ್ಲಿಯರ್ ಬಾಂಬ್ ಇದೆ. ಜೊತೆಗೆ, ಭಾರತದ 'ರಾ' ಸಂಸ್ಥೆ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಕುಮ್ಮುಕ್ಕು ನೀಡಿದ ಸಾಕ್ಷ್ಯಾಧಾರಗಳೂ ನಮ್ಮಲ್ಲಿವೆ. ಮೋದಿಯ ಭಾರತ ಇದನ್ನು ಮೊದಲು ಅರಿತುಕೊಳ್ಳಲಿ ಎಂದು ಅಜೀಜ್ ಹೇಳಿಕೆಯನ್ನು ಉಲ್ಲೇಖಿಸಿ ಡಾನ್ ಪತ್ರಿಕೆ ವರದಿ ಮಾಡಿದೆ.
ಉಪಖಂಡದಲ್ಲಿ ಶಾಂತಿ ನೆಲೆಸಬೇಕು ಎಂದು ಭಾರತ ನೀಡುತ್ತಿರುವ ಹೇಳಿಕೆಯಲ್ಲಿ ಹುರುಳಿಲ್ಲ. ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಮುರಿದುಬಿದ್ದ ನಂತರ, ತನ್ನ ಯಾವುದೇ ತಂತ್ರ ನಡೆಯುವುದಿಲ್ಲ ಎನ್ನುವುದು ಭಾರತಕ್ಕೆ ಮನದಟ್ಟಾಗಿದೆ ಎಂದು ಅಜೀಜ್ ಹೇಳಿದ್ದಾರೆ.
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಯಲ್ಲಿ 'ಪಾಕ್ ಆಕ್ರಮಿತ ಕಾಶ್ಮೀರ' ಭಾರತಕ್ಕೆ ಚರ್ಚೆಯ ವಿಚಾರವಲ್ಲವಾದರೆ, ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಸೈನಿಕರನ್ನು ಭಾರತ ಯಾಕೆ ನಿಯೋಜಿಸಿದೆ ಎಂದು ಅಜೀಜ್ ಪ್ರಶ್ನಿಸಿದ್ದಾರೆ.
ಭಾರತದ ವಿರುದ್ದ ಸರ್ತಾಜ್ ಅಜೀಜ್ ನೀಡಿರುವ ಕೆಲವೊಂದು ಹೇಳಿಕೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಕಾಶ್ಮೀರ ಭಾಗದಲ್ಲಿ ಸರ್ವೇ ನಡೆಸಲಿ
ಮೋದಿಯ ಭಾರತ ಸರಕಾರ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಕಾಶ್ಮೀರ ಭಾಗದಲ್ಲಿ ಜನತೆಯ ಅಭಿಪ್ರಾಯದ ಸರ್ವೇ ನಡೆಸಲಿ. ಅಲ್ಲಿನ ಜನರು ಯಾವ ದೇಶದೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಬೇಕೆಂದು ಬಯಸುತ್ತಾರೆ ಎನ್ನುವುದರ ಬಗ್ಗೆ ಸಮೀಕ್ಷೆ ನಡೆಸಿದರೆ ನಿಜಾಂಶ ಬಯಲಾಗಲಿದೆ.
ಪಾಕಿಸ್ತಾನದ ಹೆಸರಿಗೆ ಮಸಿ ಬಳಿಯುವ ಕೆಲಸ
ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಭಾರತ ಮಾಡುತ್ತಿದೆ, ಇದ್ಯಾವುದೂ ಭಾರತಕ್ಕೆ ಫಲಪ್ರದವಾಗುವುದಿಲ್ಲ. ಎರಡು ರಾಷ್ಟ್ರಗಳ ನಡುವಣ ಮಾತುಕತೆಯಲ್ಲಿ ಭಾರತ ಮೊದಲು ನಿಯತ್ತಾಗಿರುವುದನ್ನು ಕಲಿಯಲಿ.
ಭಾರತದ ವಿದೇಶಾಂಗ ಸಚಿವಾಲಯ
ಭಾರತದ ಜೊತೆಗಿನ ಮಾತುಕತೆಯನ್ನು ಪಾಕಿಸ್ತಾನ ಹಿಂದಕ್ಕೆ ಪಡೆದುಕೊಂಡಿತ್ತು. ಇದಕ್ಕೆ ಕಾರಣ, ರಾತ್ರೋರಾತ್ರಿ ಕಾಶ್ಮೀರದ ಮುಖಂಡರನ್ನು ಭೇಟಿಯಾಗಬಾರದೆಂದು ಭಾರತದ ವಿದೇಶಾಂಗ ಸಚಿವಾಲಯ ವಿಧಿಸಿದ ಷರತ್ತು.
ಪಾಕ್ ಉತ್ಸುಕವಾಗಿತ್ತು
ಉಗ್ರ ಚಟುವಟಿಕೆ ಹೊರತು ಪಡಿಸಿ ಭಾರತದೊಂದಿಗೆ ಹಲವು ವಿಚಾರದ ಬಗ್ಗೆ ಮಾತುಕತೆ ನಡೆಸಲು ಪಾಕಿಸ್ತಾನ ಮುಂದಾಗಿತ್ತು. ಮೀನುಗಾರರ ಬಿಡುಗಡೆ, ಧಾರ್ಮಿಕ ಯಾತ್ರಾಸ್ಥಳ, ಗಡಿಭಾಗದಲ್ಲಿ ಶಾಂತಿ ಹೀಗೆ ಹಲವು ವಿಚಾರದ ಬಗ್ಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಪಾಕ್ ಉತ್ಸುಕವಾಗಿತ್ತು.
ರದ್ದಾದ ಸಭೆ
ಭಾನುವಾರ (ಆ 23) ಎರಡು ರಾಷ್ಟಗಳ ನಡುವೆ ಭದ್ರತಾ ಸಲಹೆಗಾರರ ಮಟ್ಟದಲ್ಲಿ ಮಾತುಕತೆ ನಡೆಯಬೇಕಿತ್ತು. ಆದರೆ ಕಾಶ್ಮೀರದ ವಿಷಯದ ಪ್ರಸ್ತಾಪಕ್ಕೆ ಮಾಡಬಾರದೆಂದು ಭಾರತ ಷರತ್ತು ವಿಧಿಸಿದ್ದರಿಂದ ಪಾಕ್ ಮಾತುಕತೆಯನ್ನು ರದ್ದುಪಡಿಸಿತ್ತು.