ಲಂಡನ್ ನಲ್ಲಿ ಬಸವೇಶ್ವರ ಪ್ರತಿಮೆಗೆ ಗೌರವ ಸಲ್ಲಿಸಿದ ಗೃಹಸಚಿವ ಪರಮೇಶ್ವರ
ಲಂಡನ್, ಮಾರ್ಚ್ 13: ರಾಜ್ಯದ ಗೃಹಸಚಿವ ಡಾ.ಜಿ.ಪರಮೇಶ್ವರ ಮಾರ್ಚ್ 12ರ ಭಾನುವಾರ ಲಂಡನ್ ನ ಥೇಮ್ಸ್ ನದಿ ತೀರಲ್ಲಿರುವ ಬಸವೇಶ್ವರ ಪ್ರತಿಮೆ ಹಾಗೂ ಅಂಬೇಡ್ಕರ್ ಉಳಿದುಕೊಂಡಿದ್ದ ಮನೆಗೆ ತೆರಳಿ ಗೌರವ ಸಲ್ಲಿಸಿದರು. ಈ ಕಾರ್ಯಕ್ರಮವನ್ನು ಯುಕೆನಲ್ಲಿರುವ ಬಸವೇಶ್ವರ ಫೌಂಡೇಷನ್ ಆಯೋಜಿಸಿತ್ತು.
ಅಲ್ಲಿನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್, ಕನ್ನಡ ಒಕ್ಕೂಟಗಳ ಅಧ್ಯಕ್ಷ ರಮೇಶ್ ಬಾಬು ಬ್ರಿಟಿಷ್ ಭಾರತೀಯ ಸಮುದಾಯದ ಪರವಾಗಿ ಪರಮೇಶ್ವರ ಅವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಕನ್ನಡ ಒಕ್ಕೂಟಗಳ ಸದಸ್ಯರು ಭಾಗವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ ಕನ್ನಡ ಕಲಿಕೆ ಕಾರ್ಯಕ್ರಮ ಪೂರ್ಣಗೊಳಿಸಿದವರಿಗೆ ಪರಮೇಶ್ವರ ಪ್ರಮಾಣ ಪತ್ರ ವಿತರಿಸಿದರು.
ಬಸವೇಶ್ವರ ಹಾಗೂ ಅಂಬೇಡ್ಕರ್ ಇಬ್ಬರೂ ಭಾರತೀಯ ಸಮಾಜದಲ್ಲಿ ಜಾತಿ ನಿರ್ಮೂಲನೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರು. ದುರದೃಷ್ಟ ಎಂದರೆ ಭಾರತದಲ್ಲಿ ಈಗಲೂ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಒಡಕಿದೆ. ಅದು ಕೊನೆಯಾಗಬೇಕು ಎಂದು ಡಾ.ಪಾಟೀಲ್ ಹೇಳಿದರು.[ಲಂಡನ್: ಬಸವಣ್ಣನ ಪ್ರತಿಮೆಗೆ ಮಹಾರಾಷ್ಟ್ರ ಮಂತ್ರಿ ಪುಷ್ಪ ನಮನ]
ಬಸವೇಶ್ವರರ ಪ್ರತಿಮೆಗೆ ಗೌರವ ಸಲ್ಲಿಸಿದ ನಂತರ ಮಾತನಾಡಿದ ಸಚಿವ ಪರಮೇಶ್ವರ, ಈ ಪ್ರತಿಮೆಯನ್ನು ಹಾಗೂ ಅಂಬೇಡ್ಕರ್ ವಾಸವಿದ್ದ ಮನೆಯನ್ನು ನೋಡುವುದಕ್ಕೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದರು.