ಭಾರತದ ಮೂವರು RAW ಅಧಿಕಾರಿಗಳ ಬಂಧನ:ಪಾಕ್ ಹೇಳಿಕೆ
ಕೆಲ ದಿನಗಳ ಹಿಂದೆಯೇ ಈ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಈಗ ಅಧಿಕೃತವಾಗಿ ಪ್ರಕಟಿಸುತ್ತಿರುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿರುವುದು ಭಾರತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಇಸ್ಲಾಮಾಬಾದ್, ಏಪ್ರಿಲ್ 15: ಭಾರತದ ಗುಪ್ತಚರ ದಳಕ್ಕೆ (RAW)ಸೇರಿದ ಮೂವರು ಅಧಿಕಾರಿಗಳನ್ನು ಭಾರತ-ಪಾಕಿಸ್ತಾನ ಗಡಿ ಪ್ರದೇಶದಲ್ಲಿ ಬಂಧಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಹೇಳಿದೆ. ಕೆಲ ದಿನಗಳ ಹಿಂದೆಯೇ ಈ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಈ ಬಗ್ಗೆ ಈಗ ಅಧಿಕೃತವಾಗಿ ಪ್ರಕಟಿಸುತ್ತಿರುವುದಾಗಿ ಅದು ತಿಳಿಸಿದೆ.
ಈಗಾಗಲೇ ಪಾಕಿಸ್ತಾನದಲ್ಲಿ ಬಂಧಿಯಾಗಿ ಮರಣ ದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಅವರನ್ನು ಮತ್ತೆ ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಹರಸಾಹಸ ಮಾಡುತ್ತಿರುವ ಭಾರತಕ್ಕೆ ಪಾಕಿಸ್ತಾನ ಈಗ ಮತ್ತೊಂದು ಶಾಕ್ ನೀಡಿದೆ.[ಜಾಧವ್ ಪ್ರಕರಣ: ಭಾರತದ 14ನೇ ಮನವಿಯನ್ನೂ ತಳ್ಳಿಹಾಕಿದ ಪಾಕ್]
ಈ ಬಗ್ಗೆ ರಾ (RAW) ಇಲಾಖೆಯನ್ನು ಸಂಪರ್ಕಿಸಲಾಗಿದ್ದು, ಅಧಿಕಾರಿಗಳ ಬಂಧನದ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.[ಪಾಕ್ ಕಪಿಮುಷ್ಠಿಯಿಂದ ಪಾರಾದ ಆ ಮೂವರು ಗೂಢಾಚಾರರ ಗೋಳಿನ ಕಥೆ!]
ಏತನ್ಮಧ್ಯೆ, ಪಾಕಿಸ್ತಾನವು ನೇಪಾಳಕ್ಕೆ ಸರ್ಕಾರಿ ಕೆಲಸದ ನಿಮಿತ್ತ ತೆರಳಿದ್ದ ಪಾಕಿಸ್ತಾನದ ಐಎಸ್ಐ ಅಧಿಕಾರಿಯಾದ ಕರ್ನಲ್ ಜಾಹಿರ್ ಅವರನ್ನು ಭಾರತದ ಅಧಿಕಾರಿಗಳು ಬಂಧಿಸಿದ್ದಾರೆಂದು ಆರೋಪಿಸಿದೆ.
''ಅಧಿಕಾರಿ ಕಾಣೆಯಾಗಿರುವುದು ಪಾಕಿಸ್ತಾನ ಸರ್ಕಾರದ ಗಮನಕ್ಕೆ ಬಂದಿದ್ದು, ಭಾರತೀಯ ಅಧಿಕಾರಿಗಳೇ ಆತನನ್ನು ಬಂಧಿಸಿರುವುದೂ ತಿಳಿದುಬಂದಿದೆ. ಕರ್ನಲ್ ಜಾಹಿರ್ ಅವರ ಕುಟುಂಬವೂ ಭಾರತ ಸರ್ಕಾರದತ್ತಲೇ ಬೊಟ್ಟು ಮಾಡಿ ತೋರಿಸಿದೆ'' ಎಂದು ಹೇಳಿದೆ.