'ಪಾಕ್ ಸೇನಾ ನೆರವು ನೀಡಿದರೆ ಉಪಖಂಡದ ನಕ್ಷೆಯೇ ಬದಲು'
ನವದೆಹಲಿ, ಅಕ್ಟೋಬರ್ 21: ಭಾರತದಿಂದ ಜಮ್ಮು-ಕಾಶ್ಮೀರವನ್ನು ಕಿತ್ತುಕೊಳ್ಳುವುದಕ್ಕೆ ಪಾಕಿಸ್ತಾನ 'ಸೇನೆ ನೆರವು' ಸಹ ನೀಡಬೇಕು ಎಂದು ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸೈಯದ್ ಸಲಾಹುದ್ದೀನ್ ಒತ್ತಾಯಿಸಿದ್ದಾನೆ. ಮಾತುಕತೆಯಿಂದ, ಯಾವುದೇ ಪರಿಹಾರ ಸೂತ್ರಗಳಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಆತ ಹೇಳಿದ್ದಾನೆ.
ಮುಜಾಹಿದೀನ್ ಗೆ ಪಾಕಿಸ್ತಾನ ಸೇನೆ ನೆರವನ್ನು ನೀಡುವ ಮೂಲಕ ಕಾಶ್ಮೀರಿಗಳನ್ನು ಬೆಂಬಲಿಸಬೇಕು. ಒಂದು ವೇಳೆ ಮುಜಾಹಿದೀನ್ ಗೆ ಸೇನೆ ಬೆಂಬಲ ದೊರೆತರೆ ಕಾಶ್ಮೀರ ಸ್ವತಂತ್ರಗೊಳುವುದಷ್ಟೇ ಅಲ್ಲ, ಉಪಖಂಡದ ನಕ್ಷೆಯೇ ಬದಲಾಗುತ್ತದೆ ಎಂದು ಯುನೈಟೆಡ್ ಜಿಹಾದ್ ಕೌನ್ಸಿಲ್ ನ ಅಧ್ಯಕ್ಷ ನೂ ಆಗಿರುವ ಆತ ಹೇಳಿದ್ದಾನೆ.[ಟೂರಿಸಂ ಮೇಲೆ ಟೆರರಿಸಂ, ಟಾರ್ಗೆಟ್ ಕೊಡೈಕೆನಾಲ್ !]
ಜಮ್ಮು-ಕಾಶ್ಮೀರದ ಉಗ್ರಗಾಮಿಗಳಿಗೆ ಯಾವ ರೀತಿಯ ಮಿಲಿಟರಿ ನೆರವು ಬೇಕು ಎಂದು ವಿಸ್ತೃತವಾಗಿ ತಿಳಿಸಲು ಅತ ನಿರಾಕರಿಸಿದ್ದಾನೆ. 1989ರಿಂದ ಪ್ರತ್ಯೇಕತಾವಾದಿಗಳ ಅಭಿಯಾನ ಹೆಚ್ಚಾದ ನಂತರ ಸಾವಿರಾರು ಮಂದಿ ಕಣಿವೆ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನವು ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ತರಬೇತಿ, ಹಣ ಹಾಗೂ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ ಎಂಬುದು ಭಾರತದ ಆರೋಪ.
ಆದರೆ, ಕ್ರಾಂತಿಕಾರಿಗಳಿಗೆ ನಮ್ಮದೇನಿದ್ದರೂ ರಾಜಕೀಯ ಹಾಗೂ ಪ್ರಜಾಸತ್ತಾತ್ಮಕ ಬೆಂಬಲ ಅಷ್ಟೇ ಎನ್ನುತ್ತದೆ ಪಾಕಿಸ್ತಾನ. 'ನಮಗೀಗ ಶಸ್ತ್ರಾಸ್ತ್ರ ಹೋರಾಟವೊಂದೇ ದಾರಿ' ಎಂದು ಹೇಳಿದ್ದಾನೆ ಹಲವು ವರ್ಷಗಳಿಂದ ಪಾಕಿಸ್ತಾನದಲ್ಲೇ ಇರುವ ಸಲಾಹುದ್ದೀನ್.[ಸೇನೆಯ ಭಾರೀ ಕಾರ್ಯಾಚರಣೆ: 44 ಶಂಕಿತ ಲಷ್ಕರ್ ಉಗ್ರರ ಬಂಧನ]
ಸಲಾಹುದ್ದೀನ್ ಮೂಲತಃ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಂ ಜಿಲ್ಲೆಯವನು. 1987ರಲ್ಲಿ ಕಣಿವೆ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಸೋಲನುಭವಿಸಿದ ನಂತರ ಪಾಕಿಸ್ತಾನಕ್ಕೆ ಹೊರಟುಹೋದ. ಪ್ರತ್ಯೇಕತಾವಾದಿಗಳ ಗುಂಪೆಲ್ಲ ಒಟ್ಟು ಸೇರಿ ಮಾಡಿಕೊಂಡಿರುವ ಯುನೈಟೆಡ್ ಜಿಹಾದ್ ಕೌನ್ಸಿಲ್ ಗೆ ಈತನದೇ ನೇತೃತ್ವ.