ಯಾರದೋ ಕರುಣೆಯಲ್ಲಿ ಬದುಕುವ ಅನಿವಾರ್ಯ ನನಗಿಲ್ಲ: ವಿಜಯ್ ಮಲ್ಯ
ಚುನಾವಣೆ ಇದೆ ಅನ್ನೋ ಕಾರಣಕ್ಕೆ ಭಾರತದ ಎರಡು ಪ್ರಮುಖ ಪಕ್ಷಗಳು ನನ್ನನ್ನು ಫುಟ್ ಬಾಲ್ ನಂತೆ ಮಾಡಿಕೊಂಡಿವೆ. ಅವರ ಬಳಿ ಸಾಕ್ಷ್ಯಗಳಿದ್ದರೆ ತರಲಿ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ ಲಂಡನ್ ನಲ್ಲಿರುವ ಮದ್ಯದ ದೊರೆ ವಿಜಯ್ ಮಲ್ಯ
ಲಂಡನ್, ಫೆಬ್ರವರಿ 23: "ನಾನು ರಾಜಕಾರಣಿಗಳ ಪಾಲಿನ ಫುಟ್ ಬಾಲ್ ಆಗಿದ್ದೀನಿ"- ಇದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿಕೆ. ಮಲ್ಯನನ್ನು ಹಸ್ತಾಂತರಿಸುವಂತೆ ಭಾರತವು ಯುನೈಟೆಡ್ ಕಿಂಗ್ ಡಮ್ ನನ್ನು ಮನವಿ ಮಾಡಿದೆ. ಚುನಾವಣೆ ನಡೆಯುತ್ತಿರುವುದರಿಂದ ಭಾರತದ ಎರಡು ರಾಜಕೀಯ ಪಕ್ಷಗಳ ಪಾಲಿಗೆ ನಾನು ಫುಟ್ ಬಾಲ್ ನಂತೆ ಆಗಿದ್ದೇನೆ ಎಂದು ಮಲ್ಯ ಹೇಳಿದ್ದಾರೆ.
ನನ್ನ ವಿರುದ್ಧ ಏನೆಲ್ಲ ಸಾಕ್ಷ್ಯಗಳಿವೆಯೋ ಅವುಗಳನ್ನು ತರಲಿ. ಅವರ ಬಳಿ ಯಾವುದೇ ಸಾಕ್ಷ್ಯಗಳಿರುವುದೇ ನನಗೆ ಅನುಮಾನ ಎಂದು ಮಲ್ಯ ಹೇಳಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅವರ ಬಳಿ ಸಾಕ್ಷ್ಯಗಳಿದ್ದರೆ ಕಾನೂನು ಅದರ ರೀತಿಯಲ್ಲೇ ಕ್ರಮ ಕೈಗೊಳ್ಳುತ್ತದೆ. ಯುಕೆ ಕಾನೂನಿನಡಿ ನಾನು ಸುರಕ್ಷಿತವಾಗಿದ್ದೇನೆ ಎಂದು ಕೂಡ ಹೇಳಿದ್ದಾರೆ.[ಮಲ್ಯ, ಲಲಿತ್ ಮೋದಿ, ಟೈಗರ್ ಮೆನನ್ ಹಸ್ತಾಂತರಕ್ಕೆ ಬ್ರಿಟನ್ ಸಮ್ಮತಿ?]
ಕ್ಷಮೆ ಕೇಳುವಂಥ ಪರಿಸ್ಥಿತಿ ಎದುರಿಸುವುದಕ್ಕಿಂತ ಸುರಕ್ಷಿತವಾಗಿರಲು ಬಯಸುತ್ತೇನೆ. ಜತೆಗೆ ಯಾರದೋ ಕರುಣೆಯಲ್ಲಿ ಬದುಕುವ ಅನಿವಾರ್ಯ ನನಗಿಲ್ಲ ಎಂದು ಮಲ್ಯ ಹೇಳಿದ್ದಾರೆ. ಭಾರತ ಹಾಗೂ ಯುಕೆ ಅಧಿಕಾರಿಗಳ ಮಧ್ಯೆ ಮಲ್ಯ ಹಸ್ತಾಂತರದ ಬಗ್ಗೆ ಮಾತುಕತೆ ನಡೆದ ಎರಡು ದಿನಗಳ ನಂತರ ಮದ್ಯದ ದೊರೆ ಈ ಹೇಳಿಕೆ ನೀಡಿದ್ದಾರೆ.[ಮಲ್ಯ-ಯುಕೆಯಿಂದ ಕೋರ್ಟಿನ ಕಟಕಟೆಗೆ ಈಗ ಸಾಧ್ಯ!]
ವಿಜಯ್ ಮಲ್ಯ ವಿಚಾರವಾಗಿಯೇ ಮಾತುಕತೆ ನಡೆಯಿತೇ ಎಂದು ಒನ್ಇಂಡಿಯಾ ವಿಚಾರಿಸಿದಾಗ, ಯಾವುದೇ ಪ್ರತಿಕ್ರಿಯೆ ನೀಡಲು ಅಧಿಕಾರಿಗಳು ನಿರಾಕರಿಸಿದರು. ಯುಕೆಯಲ್ಲಿರುವ ಭಾರತಕ್ಕೆ ಬೇಕಾದ ಶಂಕಿತರ ಹಸ್ತಾಂತರಕ್ಕೆ ಬೇಕಾದ ಕಾನೂನು ಪ್ರಕ್ರಿಯೆ ಸರಳಗೊಳಿಸಲು ಮಾತುಕತೆ ನಡೆದಿದೆ ಮತ್ತು ಅದು ಫಲಪ್ರದವಾಗಿದೆ ಎಂದು ತಿಳಿದುಬಂದಿದೆ.