ಭಾರತದ ಅಲ್ಪಸಂಖ್ಯಾತರಿಗೆ ನರೇಂದ್ರ ಮೋದಿಯೇ ಶತ್ರು: ಮುಷರಫ್
ಇಸ್ಲಾಮಾಬಾದ್, ಅಕ್ಟೋಬರ್ 2: ಭಾರತ ದೇಶ ಹೆದರಿಸುವುದಕ್ಕೆ ಮಾತ್ರ ಸರಿ. ಆ ದೇಶದ ವಿರುದ್ಧ ಪಾಕಿಸ್ತಾನ ಸೇನೆ ಏನಾದರೂ ಮಾಡಬೇಕು ಎಂದುಕೊಂಡರೆ ಪ್ರತಿಕ್ರಿಯೆ ಹೆಚ್ಚು ವಾಸ್ತವಿಕವಾಗಿರುತ್ತದೆ ಎಂದು ಆಲ್ ಪಾಕಿಸ್ತಾನ್ ಮುಸ್ಲಿಂ ಲೀಗ್ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.
ಪಕ್ಷದ ಸಂಸ್ಥಾಪನಾ ದಿನಾಚರಣೆ ವೇಳೆ ದೂರವಾಣಿಯಲ್ಲಿ ಮಾತನಾಡಿದ ಅವರು, ಭಾರತದ ಧೋರಣೆಯನ್ನು ಟೀಕಿಸಿದ್ದಾರೆ. ತನ್ನ ದೇಶದಲ್ಲಿರುವ ಅಲ್ಪಸಂಖ್ಯಾತರಿಗೆ ಪ್ರಧಾನಿ ನರೇಂದ್ರ ಮೋದಿ ಶತ್ರುವಾಗಿದ್ದಾರೆ ಎಂದಿದ್ದಾರೆ.
ಭಾರತ ತಿಳಿದುಕೊಳ್ಳಲಿ, ಪಾಕಿಸ್ತಾನ ಅಂದರೆ ಭೂತಾನ್ ಅಲ್ಲ. ಪ್ರತಿ ಸಲ ಅವರ ಮಣ್ಣಿನಲ್ಲಿ ಯಾವುದೇ ದಾಳಿ ನಡೆದರೂ ಅದಕ್ಕೆ ಪಾಕಿಸ್ತಾನವೇ ಕಾರಣ ಎನ್ನುವುದನ್ನು ರೂಢಿ ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.[ನಿವೃತ್ತಿಗೂ ಮುನ್ನ ಭಾರತದ ವಿರುದ್ದ ರಕ್ತಾಕ್ಷರ: ಪಾಕ್ ಸೇನಾ ಮುಖ್ಯಸ್ಥನ ಚಿಂತನೆ?]
ಪಾಕಿಸ್ತಾನ ಸರಕಾರದ ತಪ್ಪಾದ ನೀತಿಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿದೆ. ಪಾಕಿಸ್ತಾನ 35 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ತೆಗೆದುಕೊಂಡು, ಖರ್ಚು ಕೂಡ ಮಾಡಿದೆ. ಯಾವುದೇ ಒಂದು ಬೃಹತ್ ಯೋಜನೆ ಕೂಡ ಅದರಿಂದ ಆಗಿಲ್ಲ. ಅದರ ಬದಲು ಸರಕಾರದ ಭ್ರಷ್ಟಾಚಾರದಿಂದ ಜನರು ನರಳುವಂತಾಗಿದೆ ಎಂದಿದ್ದಾರೆ.
ನಾನು ಪಾಕಿಸ್ತಾನಕ್ಕೆ ವಾಪಸ್ ಬರಬೇಕು ಅಂತಿದ್ದೀನಿ. ಆದರೆ ಈಗ ಅಲ್ಲಿಗೆ ಬರುವುದರಿಂದ ಏನೂ ಪ್ರಯೋಜನವಿಲ್ಲ ಎಂದಿರುವ ಮುಷರಫ್, ನನ್ನ ಬೆನ್ನು ಮೂಳೆಯಲ್ಲಿ ಸಮಸ್ಯೆಯಾಗಿದೆ. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಈಗ ಪಾಕ್ ಗೆ ವಾಪಸ್ ಬಂದರೂ ಎಲ್ಲ ಕಡೆ ಸಲೀಸಾಗಿ ಓಡಾಡಕ್ಕೆ ಆಗಲ್ಲ ಎಂದು ಹೇಳಿದ್ದಾರೆ.[ಸರ್ಜಿಕಲ್ ಸ್ಟ್ರೈಕ್ ಅಂದ್ರೇನು ಭಾರತಕ್ಕೆ ತೋರಿಸುತ್ತೇವೆ-ಹಫೀಜ್!]
ನನ್ನ ವಿರದ್ಧ ಪಾಕಿಸ್ತಾನದಲ್ಲಿರುವ ಪ್ರಕರಣಗಳೆಲ್ಲ ತಾತ್ವಿಕ ಅಂತ್ಯ ಕಂಡ ಮೇಲೆ ವಾಪಸ್ ಬರ್ತೀನಿ ಎಂದಿರುವ ಮುಷರಫ್, 2018ರಲ್ಲಿ ನಡೆಯುವ ಪಾಕಿಸ್ತಾನ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದ್ದು, ಯಾವ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಆಲೋಚನೆ ನಡೆದಿದೆ ಎಂದು ಹೇಳಿದ್ದಾರೆ.