ಕುಲಭೂಷಣ್ ಬೆಂಬಲಕ್ಕೆ ನಿಂತ ಬಿಲಾವಲ್ ಭುಟ್ಟೋ
ಕುಲಭೂಷಣ್ ಅವರ ಪ್ರಕರಣವೇನು, ಅವರನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂಬುದರ ಸ್ಪಷ್ಟವಾದ ದಾಖಲೆಗಳ ಮೂಲಕ ಸಾಬೀತುಪಡಿಸದ ಷರೀಫ್ ಸರ್ಕಾರ: ಬಿಲಾವಲ್ ಕಿಡಿ
ಕರಾಚಿ, ಏಪ್ರಿಲ್ 11: ಭಾರತದ ಗೂಢಾಚಾರಿಯೆಂದು ಹೇಳಲಾದ, ಸದ್ಯಕ್ಕೆ ಪಾಕಿಸ್ತಾನದ ಸೆರೆಯಲ್ಲಿರುವ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸರ್ಕಾರ ಗಲ್ಲು ಶಿಕ್ಷೆ ನೀಡಿರುವುದನ್ನು ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ (ಪಿಪಿಪಿ) ಅಧ್ಯಕ್ಷ ಹಾಗೂ ಆ ದೇಶದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಟೀಕಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕುಲಭೂಷಣ್ ಅವರು ಗೂಢಚಾರಿಯಾಗಿದ್ದರೋ ಇಲ್ಲವೋ ಎಂಬುದು ಇನ್ನೂ ಸಾಬೀತಾಗಿಲ್ಲ. ಅವರ ಪಾತ್ರವೇನು ಎಂಬುದೇ ಒಂದು ವಿವಾದವಾಗಿದೆ. ಹಾಗಿರುವಾಗ, ಪಾಕಿಸ್ತಾನ ಸರ್ಕಾರ ಅವರಿಗೆ ಹೇಗೆ ಗಲ್ಲು ಶಿಕ್ಷೆ ವಿಧಿಸಲು ಸಾಧ್ಯ'' ಎಂದು ಪ್ರಶ್ನಿಸಿದರು.[ಜಾಧವ್ ಗೆ ಮರಣದಂಡನೆಯಾದರೆ ಪರಿಣಾಮ ನೆಟ್ಟಗಿರಲ್ಲ: ಪಾಕ್ ಗೆ ಸುಷ್ಮಾ ವಾರ್ನಿಂಗ್]
ಇದೇ ವೇಳೆ, ನವಾಜ್ ಷರೀಫ್ ಸರ್ಕಾರದ ವಿರುದ್ದ ಕಿಡಿ ಕಾರಿದ ಅವರು, ''ಕುಲಭೂಷಣ್ ಅವರ ಪ್ರಕರಣವೇನು, ಅವರನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ ಎಂಬುದರ ಸ್ಪಷ್ಟವಾದ ದಾಖಲೆಗಳನ್ನು ನೀಡಿ, ಆರೋಪವನ್ನು ವಿಶ್ವದ ಮುಂದೆ ಸಾಬೀತುಪಡಿಸುವಲ್ಲಿ ಷರೀಫ್ ಸರ್ಕಾರ ವಿಫಲವಾಗಿದೆ ಎಂದರು.
ಅಲ್ಲದೆ, ಭಾರತದಲ್ಲೇನಾದರೂ ಪಾಕಿಸ್ತಾನದ ಬೇಹುಗಾರ ಸಿಕ್ಕಿಬಿದ್ದಿದ್ದರೆ, ಅದು ಮೊದಲು ತನ್ನ ಆರೋಪವನ್ನು ಸಾಬೀತುಪಡಿಸುತ್ತಿತ್ತು'' ಎಂದು ಹೇಳಿದ್ದಾರೆ.