ಕ್ಯಾಮೆರಾ ಬದಿಗಿಟ್ಟು ಮಕ್ಕಳನ್ನು ರಕ್ಷಿಸಿದ ಪತ್ರಿಕಾ ಛಾಯಾಗ್ರಾಹಕ
ಗಾಯಗೊಂಡವರ ನೆರವಿಗೆ ಧಾವಿಸಿ, ವೃತ್ತಿಪರತೆಗಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಸಾಬೀತುಪಡಿಸಿದ ಸಿರಿಯಾದ ಪತ್ರಕರ್ತ ಹಬಕ್.
ನವದೆಹಲಿ, ಏಪ್ರಿಲ್ 19: ಬಸ್ ನಿಲ್ದಾಣದ ಬಳಿ ಹತ್ತಾರು ಬಸ್ ಗಳು ನಿಂತಿದ್ದಾಗ ಯಾವನೋ ಒಬ್ಬ ತನ್ನ ಕಾರಿನಲ್ಲಿ ಬಂದು ಚಿಪ್ಸ್ ಪ್ಯಾಕೆಟ್ ಹಿಡಿದು ಬಸ್ ಗಳಿದ್ದ ಮಕ್ಕಳನ್ನು ಸೆಳೆದ.
ಆ ಚಿಪ್ಸ್ ಆಸೆಗೆ ಮರುಳಾದ ಮಕ್ಕಳು ಆ ಕಾರಿನ ಟಾಪ್ ಮೇಲೆ ಕುಳಿತಿದ್ದ ವ್ಯಕ್ತಿಯು ನೀಡುತ್ತಿದ್ದ ಚಿಪ್ಸ್ ಗಳನ್ನ ಕೊಳ್ಳಲು ಮುಗಿಬಿದ್ದರು. ಸುಮಾರು ಮಕ್ಕಳು ತಮ್ಮನ್ನು ಆವರಿಸಿದ ನಂತರ, ಇದನ್ನೇ ಕಾಯುತ್ತಿದ್ದ ಆ ವ್ಯಕ್ತಿ ತಕ್ಷಣವೇ ತನ್ನ ಜೇಬಿನಲ್ಲಿದ್ದ ರಿಮೋಟ್ ತೆಗೆದು ಕಾರಿನಲ್ಲಿದ್ದ ಬಾಂಬ್ ನೊಂದಿಗೆ ತನ್ನನ್ನೂ ತಾನು ಸ್ಫೋಟಿಸಿಕೊಂಡ.
ಪರಿಣಾಮ, ಆತನನ್ನು ಸುತ್ತಿಕೊಂಡಿದ್ದ ಮಕ್ಕಳೂ, ಹತ್ತಿರದಲ್ಲಿದ್ದ ಬಸ್ ಗಳಲ್ಲಿದ್ದ ಜನ... ಬರೋಬ್ಬರಿ 126 ಮಂದಿ ಆ ಬಾಂಬ್ ಸ್ಫೋಟಕ್ಕೆ ಸಾವನ್ನಪ್ಪಿದರು. ಕ್ಷಣಾರ್ಧದಲ್ಲಿ ಹೆಣಗಳ ರಾಶಿ ಚೆಲ್ಲಾಪಿಲ್ಲಿಯಾಗಿ ಸುತ್ತಲೂ ಬಿದ್ದವು. ಆ ಘಟನೆಯಲ್ಲಿ ಸತ್ತ ಮಕ್ಕಳ ಸಂಖ್ಯೆ 80.
ಇದಾಗಿದ್ದು, ಗಲಭೆ ಪೀಡಿತ ಸಿರಿಯಾದಲ್ಲಿನ ಅಲೆಪ್ಪೋ ನಗರದ ಪಶ್ಚಿಮ ಭಾಗದಲ್ಲಿ. ಕಳೆದ ವಾರ ಜರುಗಿತ್ತು ಈ ಘಟನೆ.
ಅಂದು, ಸ್ಫೋಟ ನಡೆದ ಸಮೀಪದಲ್ಲಿಯೇ ಇದ್ದ ಪತ್ರಿಕಾ ಛಾಯಾಗ್ರಾಹಕರ ದಂಡೊಂದು ತಕ್ಷಣ ಸ್ಥಳಕ್ಕೆ ಆಗಮಿಸಿ ಫೋಟೋ ತೆಗೆಯುವಲ್ಲಿ ನಿರತವಾಗಿದೆ. ಆದರೆ, ಆ ಗುಂಪಿನಲ್ಲಿದ್ದ ಅಬ್ದ್ ಅಲ್ಕದರ್ ಹಬಕ್ ಎಂಬ ಪತ್ರಿಕಾ ಛಾಯಾಗ್ರಾಹಕ ಪುಟಾಣಿಗಳ ದಯನೀಯ ಸ್ಥಿತಿಗಳನ್ನು ಕಂಡು ಕಣ್ಣೀರಾದ. ತನ್ನ ಕ್ಯಾಮೆರಾವನ್ನು ಬದಿಗಿಟ್ಟು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಕ್ಕಳ ರಕ್ಷಣೆಗೆ ಮುಂದಾದ.
ಅಷ್ಟರಲ್ಲಿ ಆಸ್ಪತ್ರೆಯ ಆ್ಯಂಬುಲೆನ್ಸ್ ಗಳು ಬಂದಿದ್ದು ಆಸ್ಪತ್ರೆಯ ಸಿಬ್ಬಂದಿ ಜತೆಗೆ ಕೈಜೋಡಿಸಿದ ಹಬಕ್, ಹೆಣಗಳ ರಾಶಿಗಳ ನಡುವೆ ಹೋಗಿ ಬದುಕುಳಿದ ಮಕ್ಕಳನ್ನು ದೊಡ್ಡವರನ್ನು ಪತ್ತೆ ಹಚ್ಚಿ ಅವರನ್ನು ಅಕ್ಷರಶಃ ಎತ್ತಿಕೊಂಡು ಬಂದು ಆ್ಯಂಬುಲೆನ್ಸ್ ಗೆ ತುಂಬುವ ಕೆಲಸ ಮಾಡಿದ.
ಅವನ ಈ ಮಾನವೀಯತೆಯನ್ನು ಮೊಹಮ್ಮದ್ ಅಬ್ರಾಜೆಬ್ ಎಂಬ ಮತ್ತೊಬ್ಬ ಪತ್ರಿಕಾ ಛಾಯಾಗ್ರಾಹಕ ಹಬಕ್ ನ ಮಾನವೀಯತೆಯನ್ನು ತನ್ನ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾನೆ. ಸ್ಫೋಟದ ತೀವ್ರತೆಗೆ ಆ ಮಕ್ಕಳು ಯಾವ ಮಟ್ಟಿಗೆ ಗಾಯಗೊಂಡಿದ್ದರೆಂದರೆ, ಅವು ಬದುಕುವುದು ಅಸಾಧ್ಯ ಎಂಬಂತಿದ್ದವು. ಆದರೂ, ಮುಂದಿನ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳದ ಆತ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ತಂದು ಆಸ್ಪತ್ರೆ ಸೇರಿಸಿದ್ದಾನೆ.
ಈ ರೀತಿ, ಗಾಯಗೊಂಡವರ ನೆರವಿಗೆ ಧಾವಿಸಿರುವ ಹಬಕ್, ವೃತ್ತಿಪರತೆಗಿಂತ ಮಾನವೀಯತೆಯೇ ದೊಡ್ಡದು ಎಂಬುದನ್ನು ಸಾಬೀತುಪಡಿಸಿದ್ದಾನೆ.
1993ರಲ್ಲಿ ಸುಡಾನ್ ನಲ್ಲಿ ತಗೆದಿದ್ದ ಆ ಚಿತ್ರ
ಹಬಕ್ ನ ಮಾನವೀಯತೆ ತಕ್ಷಣವೇ 1993ರಲ್ಲಿ ನಡೆದಿದ್ದೊಂದು ವರದಿಯ ಬಗ್ಗೆ ಗಮನ ಸೆಳೆಯುತ್ತದೆ. ಆ ವರ್ಷ, ವಿಶ್ವಸಂಸ್ಥೆಯ ಪ್ರಾಯೋಜಕತ್ವ ಪಡೆದಿದ್ದ ಕೆವಿನ್ ಕಾರ್ಟರ್ ಎಂಬ ಪತ್ರಿಕಾ ಛಾಯಾಗ್ರಾಹಕನೊಬ್ಬ ಸುಡಾನ್ ದೇಶದಲ್ಲಿ ಹಸಿನಿವಿಂದ ಕಂಗಾಲಾಗಿದ್ದ ಜನತೆಯನ್ನು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಹೋಗಿದ್ದ.
ಹೆಸರು ತಂದ ಛಾಯಾಚಿತ್ರ
ಅದೊಂದು ದಿನ ಫೋಟೋಗಳಿಗಾಗಿ ಅಲೆದಾಡುತ್ತಿದ್ದಾಗ, ಒಬ್ಬ ಪುಟಾಣಿ ಬಾಲಕಿ ಹಸಿವಿನಿಂದ ಕಂಗಾಲಾಗಿ, ಆಕೆಯ ಗುಡಿಸಲಿನ ಬಳಿಯಲ್ಲೇ ಇದ್ದ ಗಂಜಿ ಕೇಂದ್ರದ ಕಡೆಗೆ ನಡೆಯಲೂ ಸಾಧ್ಯವಾಗದೇ ತೆವಳುತ್ತಾ ಸಾಗಿದ್ದಳು. ಆದರೆ, ಕೆಲ ದೂರ ತೆವಳುತ್ತಿದ್ದಂತೆ ಆಕೆ ನಿಶಕ್ತಿಯಿಂದ ಆಕೆ ದೇಹ ಒಂದಿಚೂ ಅಲುಗಷ್ಟು ನಿತ್ರಾಣಗೊಂಡಿತು. ಅಷ್ಟರಲ್ಲಿ ಅದೆಲ್ಲಿತ್ತೋ ಆ ರಣಹದ್ದು, ಆ ಪುಟ್ಟ ಬಾಲಕಿ ಸಾಯುವುದನ್ನೇ ಕಾದು ಕುಳಿತುಬಿಟ್ಟಿತು. ಈ ದೃಶ್ಯವನ್ನು ವಿವಿಧ ಕೋನಗಳಿಂದ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಕಾರ್ಟರ್. ಆ ಚಿತ್ರ ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟಗೊಂಡು ವಿಶ್ವ ಪ್ರಸಿದ್ಧಿ ಪಡೆಯಿತು. ನಾನಾ ದೇಶಗಳ ನಾನಾ ಪತ್ರಿಕೆಗಳು ಈ ಫೋಟೋಗಳನ್ನು ಉಪಯೋಗಿಸಿದವು.
ಆದರೆ, ಫೋಟೋಗ್ರಾಫರ್ ಖುಷಿಗೊಳ್ಳಲಿಲ್ಲ
ಕಾರ್ಟರ್ ತೆಗೆದಿದ್ದ ಆ ಮನ ಕಲುಕುವ ಚಿತ್ರಕ್ಕೆ ವಿಶ್ವ ಪತ್ರಿಕಾ ರಂಗದ ಆಸ್ಕರ್ ಎಂದೇ ಖ್ಯಾತಿ ಪಡೆದಿರುವ ಪುಲಿಟ್ಜರ್ ಪ್ರಶಸ್ತಿಯೂ ಬಂತು. ಆದರೆ, ಅದಾಗಿ ಕೆಲ ವರ್ಷಗಳ ನಂತರ, ತಮ್ಮ 33ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಸುಡಾನ್ ನ ದಾರುಣ ಕಥೆ ಹೇಳುವ ಫೋಟೋ ತೆಗೆಯುವ ಭರದಲ್ಲಿ ಹಸಿದ ಕೂಸಿಗೆ ಯಾವುದೇ ಸಹಾಯ ಮಾಡಲಿಲ್ಲ ಎಂಬ ಖಿನ್ನತೆಯಿಂದ ಆತ ಆತ್ಮಹತ್ಯೆ ಮಾಡಿಕೊಂಡ ಅಂತ ಅನ್ನುವವರೂ ಇದ್ದಾರೆ.
ವಾದಗಳೂ ಇವೆ
ಕಾರ್ಟರ್ ಅಂದು ಮಾಡಿರಬಹುದಾದ ತಪ್ಪಿಗೆ, ಪತ್ರಿಕಾ ಲೋಕದ ಸಮರ್ಥನೆಗಳೂ ಇವೆ. ಪತ್ರಕರ್ತರ ವೃತ್ತಿಪರತೆಯೇ ಹಾಗೆ. ಅದರಲ್ಲಿ ಕಾರ್ಟರ್ ತಪ್ಪೇನಿದೆ? ಮನಸ್ಸನ್ನು ಕಲಕುವ ಘಟನೆಗಳನ್ನು ಸೆರೆಹಿಡಿಯುವುದೆಂದರೆ ಸಾಮಾನ್ಯವಲ್ಲ. ತನ್ನ ಮುಂದೆ ವ್ಯಕ್ತಿಯೊಬ್ಬ ಸಾಯುತ್ತಿದ್ದರೂ ಅದರ ದಾರುಣತೆಯನ್ನು ಕಟ್ಟಿಕೊಡುವುದಷ್ಟೇ ಆತನ ಕೆಲಸ ಎಂದು ವಾದಿಸುವವರಿದ್ದಾರೆ.
ಹಾವೇರಿಯಲ್ಲೂ ಪತ್ರಕರ್ತ ಮನಸ್ಸು ಬದಲಿಸಬಹುದಿತ್ತು
ಇಂಥ ವಾದಗಳಿಂದಲೇ ಇಂದು ಮನುಷ್ಯನ ಮನಸ್ಥಿತಿಗಳು ಬದಲಾಗಿವೆ. ಕೆಲ ವರ್ಷಗಳ ಹಿಂದೆ ಹಾವೇರಿ ಗೋಲಿಬಾರ್ ನಲ್ಲಿ ಗುಂಡೇಟು ತಿಂದು ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದ ರೈತನನ್ನು ಚಿತ್ರೀಕರಿಸುತ್ತಿದ್ದ ವಾಹಿನಿಯೊಂದರ ಕ್ಯಾಮೆರಾ ಮ್ಯಾನ್ ಕೊಂಚ ಮಾನವೀಯತೆ ಮೆರೆದಿದ್ದರೆ ಅಂದು ಆ ರೈತನನ್ನು ಬದುಕಿಸಬಹುದಿತ್ತು.
ಮಾನವೀಯತೆ ನಲಿದಾಡಲಿ
ಇದು ಕೇವಲ ಪತ್ರಕರ್ತರಿಗಷ್ಟೇ ಅಲ್ಲ. ಇಂದಿನ ನಮ್ಮ ನಿಮ್ಮೆಲ್ಲರಿಗೂ ಅನ್ವಯವಾಗುವಂಥ ವಿಚಾರ. ನಡು ರಸ್ತೆಯಲ್ಲಿ ಅಪಘಾತಕ್ಕೀಡಾಗಿ ನರಳುತ್ತಾ ಬಿದ್ದಿದ್ದರೂ ಜೇಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು ಸಾಯುವವನ್ನು ಚಿತ್ರೀಕರಿಸುವ ವಿಕೃತ ಸ್ಥಿತಿಗಳಿಗೆ ಇಂದು ನಮ್ಮ ಮನಸ್ಸುಗಳು ಬಂದು ಮುಟ್ಟಿವೆ ಎಂದರೆ ನಾವೆಷ್ಟರ ಮಟ್ಟಿಗೆ ಮಾನವೀಯ ಸಂವೇದನೆಗಳನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ನಾವೇ ಊಹಿಸಿಕೊಳ್ಳಬಹುದು.