ಭಾರತದ ಮೇಲೆ ದಾಳಿಗೆ ಹಫೀಜ್ ತಹತಹ : ಗುಪ್ತಚರ
ಇಸ್ಲಾಮಾಬಾದ್, ಡಿ 18: ಮಾನವೀಯತೆ ಮರೆತು ನೂರಾರು ಮಕ್ಕಳನ್ನು ಮಾರಣಹೋಮ ನಡೆಸಿದ ಉಗ್ರರ ಕೃತ್ಯಕ್ಕೆ ಭಾರತದ ಕುಮ್ಮುಕ್ಕೇ ಕಾರಣವೆಂದು ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ವಿಷ ಕಕ್ಕಿದ್ದಾನೆ.
ಭಯೋತ್ಪಾದನೆ ಮಟ್ಟ ಹಾಕಲು ಭಾರತ ಪಾಕಿಸ್ತಾನಕ್ಕೆ ಸಂಪೂರ್ಣ ಸಹಕರಿಸಲಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ ಬೆನ್ನಲ್ಲೇ, ಹಫೀಜ್ ಪಾಕಿಸ್ತಾನದ ರಾಷ್ಟೀಯ ಸುದ್ದಿವಾಹಿನಿಯ ಮೂಲಕ 'ಪೇಶಾವರ ದಾಳಿಗೆ ಭಾರತ ಕಾರಣ' ಎಂದು ಪಾಕ್ ಜನತೆಗೆ ವಿಷ ಬೀಜ ಬಿತ್ತಿದ್ದಾನೆ.
ಭಾರತದ ಮೋಸ್ಟ್ ವಾಂಟೆಡ್ ಉಗ್ರ ಹಫೀಜ್ ವಾಹಿನಿಯೊಂದಿಗೆ ಮಾತನಾಡುತ್ತಾ, ಈ ದಾಳಿಗೆ ನಾವು ಪ್ರತೀಕಾರ ತೀರಿಸುತ್ತೇವೆ. ಭಾರತದ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಳ್ಳುತ್ತೇವೆ ಎಂದು ಕಿಡಿಕಾರಿದ್ದಾನೆ. (ಇವರೇ ಮುಗ್ದ ಮಕ್ಕಳನ್ನು ಹತ್ಯೆಗೈದ ರಕ್ಕಸರು)
ವಿಷಾದದ ವಿಚಾರವೇನಂದರೆ, ಹಫೀಜ್ ಈ ಹೇಳಿಕೆಗೆ ಪಾಕಿಸ್ತಾನದ ಯಾವನೇ ಒಬ್ಬ ರಾಜಕಾರಣಿ ಅಥವಾ ಪಾಕ್ ಸರಕಾರ ವಿರೋಧ ವ್ಯಕ್ತ ಪಡಿಸದೇ ಇದ್ದದ್ದು.
ಲಷ್ಕರ್-ಇ-ತೊಯ್ಬಾದ ಸಂಸ್ಥಾಪಕನಾಗಿರುವ ಹಫೀಜ್, ಭಾರತ ಮತ್ತು ಪ್ರಧಾನಿ ಮೋದಿ ವಿರುದ್ದ ಕಿಡಿಕಾರುತ್ತಲೇ ಇರುತ್ತಾನೆ. ಈ ಸಂಘಟನೆಯನ್ನು ಪಾಕಿಸ್ತಾನ ಸರಕಾರ ಅಧಿಕೃತವಾಗಿ ನಿಷೇಧಿಸಿದ್ದರೂ, ಈ ಉಗ್ರ ಸಂಘಟನೆ ಪಾಕಿಸ್ತಾನದ ಮಿಲಿಟರಿ ಜೊತೆ ನಿಕಟ ಸಂಬಂಧ ಹೊಂದಿರುವುದು ಪಾಕಿಸ್ತಾನದ ಆಂತರಿಕ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಭಾರತ ಸರಕಾರ ಅಮೆರಿಕ ಮಿಲಿಟರಿಗೆ ಬೆಂಬಲ ನೀಡಲು ತನ್ನ ಸೈನ್ಯವನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದರೆ, ನಾವು ನಮ್ಮ ಸೈನ್ಯವನ್ನು ಕಾಶ್ಮೀರಕ್ಕೆ ಕಳುಹಿಸುತ್ತೇವೆ. ಕಾಶ್ಮೀರದಲ್ಲಿರುವ ನಮ್ಮ ಸಹೋದರರನ್ನು ರಕ್ಷಿಸುವುದು ನಮ್ಮ ಕರ್ತ್ಯವ್ಯ ಎಂದು ಜಮಾತ್ - ಉದ್- ದವಾ ಸಂಘಟನೆಯ ಮುಖ್ಯಸ್ಥನೂ ಆಗಿರುವ ಹಫೀಜ್ ಸಯೀದ್, ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.
ಪರ್ವೇಜ್ ಮುಷರಫ್ : ಪೇಶಾವರದಲ್ಲಿನ ಉಗ್ರರ ಕೃತ್ಯಕ್ಕೆ ಭಾರತವೇ ಕಾರಣವೆಂದು ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ರಾಷ್ಟ್ರಪತಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿಕೆ ನೀಡಿದ್ದಾರೆ.
ಮೌಲಾನಾ ಫಜುಲ್ಲಾ 'ತೆಹ್ರಿಕ್ - ಇ- ತಾಲಿಬಾನ್' ಸಂಘಟನೆಯ ಕಮಾಂಡರ್. ಇವನು ಅಫ್ಘಾನಿಸ್ತಾನದಲ್ಲಿ ನೆಲೆಸಿರುತ್ತಾನೆ. ಈತನಿಗೆ ಕರ್ಜಾಯಿ ಸರಕಾರದ ಬೆಂಬಲವಿದೆ. (ದೆಹಲಿಗೆ ಉಗ್ರ ಹಫೀಜ್ ನಿಂದ ದಾಳಿ ಬೆದರಿಕೆ)
ಜೊತೆಗೆ, ಭಾರತದ 'ರಾ' (RAW, Resarch and Analysis Wing) ಪಾಕಿಸ್ತಾನದಲ್ಲಿ ವಿಧ್ವಂಸಕ ಕೃತ್ಯ ನಡೆಸುವಂತೆ ಆದೇಶ ನೀಡುತ್ತದೆ. ಇವನು ಅದನ್ನು ಪಾಲಿಸುತ್ತಾನೆಂದು ಮುಷರಫ್, ಭಾರತವನ್ನು ಟೀಕಿಸಿದ್ದಾರೆ.
ಗುಪ್ತಚರ ಇಲಾಖೆಯ ಕಟ್ಟೆಚ್ಚರ : ಉಗ್ರರು ಮುಂಬೈ ಮಾದರಿಯಲ್ಲಿ ದಾಳಿ ನಡೆಸುವ ಸಾಧ್ಯತೆಯಿದ್ದು, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕೆಂದು ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳ ಗೃಹ ಸಚಿವರಿಗೆ ತುರ್ತು ಸಂದೇಶ ರವಾನಿಸಿದೆ ಎಂದು ವರದಿಯಾಗಿದೆ.