ಜಾಧವ್ ಪ್ರಕರಣ: ಭಾರತದ 14ನೇ ಮನವಿಯನ್ನೂ ತಳ್ಳಿಹಾಕಿದ ಪಾಕ್
ಜಾಧವ್ ವಿಚಾರದಲ್ಲಿ ರಾಜತಾಂತ್ರಿಕ ಮಾತುಕತೆಗೆ ಅವಕಾಶ ನೀಡಬೇಕೆಂದು ಕೋರಿದ್ದ ಭಾರತದ 14ನೇ ಮನವಿಯನ್ನೂ ಪಾಕಿಸ್ತಾನ ತಿರಸ್ಕರಿಸಿದೆ.
ಕರಾಚಿ, ಏಪ್ರಿಲ್ 15: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾ ದಳದ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರ ವಿಚಾರದಲ್ಲಿ ರಾಜತಾಂತ್ರಿಕ ಮಾತುಕತೆ ನಡೆಸಬೇಕೆಂದು ಭಾರತ ಮಾಡಿರುವ ಮನವಿಯನ್ನು ಪಾಕಿಸ್ತಾನ ತಳ್ಳಿಹಾಕಿದೆ. ಜಾಧವ್ ವಿಚಾರದಲ್ಲಿ ಭಾರತದ ಮನವಿಯನ್ನು ಪಾಕಿಸ್ತಾನ ಹೀಗೆ ತಳ್ಳಿಹಾಕುತ್ತಿರುವುದು ಇದು 14ನೇ ಬಾರಿ.
ಜಾಧವ್ ಅವರಿಗೆ ಅಲ್ಲಿನ ಸೇನಾ ನ್ಯಾಯಾಲಯವು ಮರಣ ದಂಡನೆ ವಿಧಿಸಿ ಈಗ 7 ದಿನಗಳು ಕಳೆದಿವೆ. ಈ ಏಳು ದಿನಗಳಲ್ಲಿ ಭಾರತವು ಜಾಧವ್ ಅವರ ಬಿಡುಗಡೆಗೆ ತೀವ್ರ ಪ್ರಯತ್ನ ನಡೆಸುತ್ತಿದ್ದು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಪದೇ ಪದೇ ಮನವಿ ಮಾಡುತ್ತಲೇ ಬಂದಿದೆ. ಆದರೆ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ.[ಪಾಕ್ ಕಪಿಮುಷ್ಠಿಯಿಂದ ಪಾರಾದ ಆ ಮೂವರು ಗೂಢಾಚಾರರ ಗೋಳಿನ ಕಥೆ!]
ಶುಕ್ರವಾರ (ಏಪ್ರಿಲ್ 14) ಭಾರತದ ಪರವಾಗಿ, ಪಾಕಿಸ್ತಾನದಲ್ಲಿರುವ ಭಾರತೀಯ ಹೈ ಕಮೀಷನರ್ ಗೌತಮ್ ಬಂಬಾವಾಲೆ ಅವರು, ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ತೆಹ್ಮಿನಾ ಜಂಗುವಾ ಅವರನ್ನು ಭೇಟಿಯಾಗಿ, ಜಾಧವ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು.
ಅಲ್ಲದೆ, ಈ ವಿಚಾರವು ರಾಜತಾಂತ್ರಿಕ ಮಟ್ಟದಲ್ಲಿ ಚರ್ಚೆಯಾಗಲು ಅವಕಾಶ ನೀಡಬೇಕೆಂದು ಪಾಕಿಸ್ತಾನ ಸರ್ಕಾರವನ್ನು ಮನವಿ ಮಾಡಿದರು. ಆದರೆ, ಜಂಗುವಾ ಅವರು ಗೌತಮ್ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ, ಜಾಧವ್ ಅವರ ವಿಚಾರದಲ್ಲಿ ಭಾರತ ಅಸಹಾಯಕ ಪರಿಸ್ಥಿತಿ ತಲುಪಿದೆ ಎಂದು ಹೇಳಲಾಗಿದೆ.
ಆದರೂ, ಪಾಕಿಸ್ತಾನ ಕಾನೂನಿನ ಪ್ರಕಾರವೇ ಯೋಚಿಸುವುದಾದರೆ, ಜಾಧವ್ ಅವರು ತಮ್ಮ ಶಿಕ್ಷೆಯಿಂದ ಪಾರಾಗಲು ಕಾನೂನಾತ್ಮಕವಾಗಿ 3 ದಾರಿಗಳಿವೆ. ಮೊದಲನೆಯದಾಗಿ, ಸೇನಾ ಮುಖ್ಯಸ್ಥರಿಗೆ ಮನವಿ ಸಲ್ಲಿಸಿ ತಮಗೆ ಕ್ಷಮಾದಾನ ನೀಡುವಂತೆ ಆಗ್ರಹಿಸಬುದು.[ಕುಲಭೂಷಣ್ ಬೆಂಬಲಕ್ಕೆ ನಿಂತ ಬಿಲಾವಲ್ ಭುಟ್ಟೋ]
ಎರಡನೆಯದಾಗಿ, ಅವರು ಸೇನಾ ನ್ಯಾಯಾಲಯ ತಮ್ಮ ವಿರುದ್ಧ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು.
ಮೂರನೆಯದಾಗಿ, ಅವರು ಪಾಕಿಸ್ತಾನ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ತಮಗೆ ಕ್ಷಮಾದಾನ ನೀಡುವಂತೆ ಕೋರಬಹುದು.