ದುಬೈನಲ್ಲಿ ಅ.18ರಂದು ಸ್ನೇಹ ಮಿಲನ ಸಮಾವೇಶ
ದುಬೈ, ಅ.14 : ಭಾರತದ 71 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಕರ್ನಾಟಕ ಕಲ್ಚರಲ್ ಫೌಂಡೇಶನ್, ದುಬೈ ವತಿಯಿಂದ "ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ಘೋಷ ವಾಕ್ಯದೊಂದಿಗೆ ಸರ್ವಧರ್ಮೀಯರ 'ಸ್ನೇಹಮಿಲನ' ಸಮಾವೇಶ ಆಯೋಜಿಸಲಾಗಿದೆ.
2013ನೇ ಫೆಬ್ರವರಿ ತಿಂಗಳಲ್ಲಿ ಸ್ಥಾಪನೆಯಾದ ಅನಿವಾಸಿ ಕನ್ನಡಿಗರ ಸಾಂಸ್ಕೃತಿಕ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ಜಿಸಿಸಿ ಹಾಗೂ ಮಲೇಷ್ಯಾ ಲಂಡನ್ ರಾಷ್ಟ್ರಗಳಲ್ಲಿ ಹದಿಮೂರು ಸಾವಿರಕ್ಕಿಂತಲೂ ಅಧಿಕ ಸದಸ್ಯರನ್ನು ಒಳಗೊಂಡಿದೆ.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟ ನಡೆಸಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ವೀರಯೋಧರನ್ನು ಸ್ಮರಿಸುವ ಉದ್ದೇಶದಿಂದ ರಾಷ್ಟ್ರದ ಜಾತ್ಯಾತೀತ ನಿಲುವಿನ ಉಳಿವಿಗಾಗಿ ಕಳೆದ ಮೂರು ವರ್ಷಗಳಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ದೇಶಪ್ರೇಮ, ಸ್ನೇಹಸಂಗಮಗಳನ್ನುನಡೆಸುತ್ತಾ ಬಂದಿದೆ.
ಈ ಬಾರಿಯ ಸ್ನೇಹ ಮಿಲನ ಕಾರ್ಯಕ್ರಮ ಆಗಸ್ಟ್ 18 ರಂದು ದೇರಾ ಸಿಟಿ ಸೆಂಟರ್ ಸಮೀಪದ ಸಿಟಿ ಸೂಟ್ ಹೋಟೆಲಿನ ಸಭಾಂಗಣದಲ್ಲಿ ನಡೆಯಲಿದೆ. ಈ ವರ್ಷವು 'ದೇಶ ಉಳಿಸಿ ದ್ವೇಷ ಅಳಿಸಿ' ಎಂಬ ಘೋಷಣೆಯೊಂದಿಗೆ ಸರ್ವಧರ್ಮೀಯರನ್ನು ಆಹ್ವಾನಿಸಿ ಸ್ನೇಹಮಿಲನ ಕಾರ್ಯಕ್ರಮವನ್ನು ಆಯೋಜಿಸಿದೆ.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಅನೇಕ ಜನಪರ ಸೇವೆಗಳನ್ನು ಸಲ್ಲಿಸಿದ ಕೆಸಿಎಫ್ ಸಂಘಟನೆಯ ಮುಖವಾಣಿ "ಗಲ್ಫ್ ಇಶಾರ" ಕನ್ನಡ ಮಾಸಪತ್ರಿಕೆಯನ್ನು ಹೊರತರುವ ಮೂಲಕ ರಾಷ್ಟ್ರದ ಹೊರಗೆ ಆವೃತ್ತಿ ಹೊಂದಿರುವ ಕನ್ನಡದ ಏಕೈಕ ಪತ್ರಿಕೆ ಎಂಬ ಹೆಗ್ಗಳಿಕೆ ಪಡೆದಿದೆ.
ಸಾಮಾಜಿಕ ಮುಂದಾಳು ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ರವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಅಂತರಾಷ್ಟ್ರೀಯ ಮಹಾ ಕಾರ್ಯದರ್ಶಿ ಹಾಜಿ ಶೇಕ್ ಭಾವ ಮಂಗಳೂರು ಸಮಾರಂಭವನ್ನು ಉದ್ಘಾಟಿಸುವರು. ಎಸ್.ಎಸ್. ಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಹಜ್ ಸಮಿತಿ ಸದಸ್ಯ ಕೆ.ಎಂ.ಅಬೂಬಕರ್ ಸಿದ್ದೀಕಿ ಮೋಂಟುಗೋಳಿ ಸಂದೇಶ ಭಾಷಣ ಮಾಡುವರು.
ರಾಜ್ಯ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಕೆಸಿಎಫ್ ಯುಎಇ ಅಧ್ಯಕ್ಷ ಅಬ್ದುಲ್ ಹಮೀದ್ ಸೈಯದಿ, ಕರ್ನಾಟಕ ಎನ್ ಆರ್ ಐ ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಉದ್ಯಮಿ ಕರ್ನಾಟಕ ಸಂಘ ಶಾರ್ಜಾ ಇದರ ಪೋಷಕರಾದ ಮಾರ್ಕ್ ಡೆನಿಸ್ ಡಿಸೋಜಾ, ದುಬಾಯಿ ಕರ್ನಾಟಕ ಸಂಘ ಉಪಾಧ್ಯಕ್ಷ ಕೆ ಆರ್ ತಂತ್ರಿ, ಮಂಗಳೂರು ಕೊಂಕಣ್ಸ್ ಇದರ ಜೇಮ್ಸ್ ಮೆಂಡೊನ್ಸಾ, ಹಾಗೂ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.