ಬ್ರುಸೆಲ್ಸ್ ನಲ್ಲಿ ಸ್ಫೋಟ: ಇನ್ಫೋಸಿಸ್ ಟೆಕ್ಕಿ ರಾಘವೇಂದ್ರ ನಾಪತ್ತೆ!
ಬೆಂಗಳೂರು, ಮಾರ್ಚ್ 23: ಬೆಲ್ಜಿಯಂನ ಬ್ರುಸೆಲ್ಸ್ ದಲ್ಲಿ ಸಂಭವಿಸಿದ ಅವಳಿ ಸ್ಫೋಟದ ನಂತರ ಬೆಂಗಳೂರಿನ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ನ ಉದ್ಯೋಗಿ ರಾಘವೇಂದ್ರನ್ ಗಣೇಶನ್ ನಾಪತ್ತೆಯಾಗಿದ್ದಾರೆ ಎಂದು ಬುಧವಾರ ಕುಟುಂಬಸ್ಥರು ತಿಳಿಸಿದ್ದಾರೆ.
ರಾಘವೇಂದ್ರನ್ ಗಣೇಶನ್ ಅವರ ನಾಪತ್ತೆಯಾಗಿರುವುದನ್ನು ದೃಢಪಡಿಸುರುವ ಬ್ರುಸೆಲ್ಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ರಾಘವೇಂದ್ರನ್ ಅವರ ಪತ್ತೆಗಾಗಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಮಂಗಳವಾರ ನಡೆದ ದುರ್ಘಟನೆಯಲ್ಲಿ 34 ಜನ ಸಾವನ್ನಪ್ಪಿದ್ದು, 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.[ಬ್ರುಸೆಲ್ಸ್ ನಂತರ ಇನ್ನಷ್ಟು ದಾಳಿ ಮಾಡ್ತೇವೆ: ಐಎಸ್ಐಎಸ್]
ಭಾರತದ ಎರಡನೇ ಅತಿದೊಡ್ಡ ಐಟಿ ಸಂಸ್ಥೆ ಇನ್ಫೋಸಿಸ್ ಉದ್ಯೋಗಿಯಾಗಿರುವ ರಾಘವೇಂದ್ರನ್ ಅವರು ಬೆಲ್ಜಿಯಂನ ಬ್ರುಸೆಲ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ರಾಘವೇಂದ್ರನ್ ಗಣೇಶನ್ ಅವರನ್ನು ಸಂರ್ಪಸಲು ಮಂಗಳವಾರ ಸಂಜೆಯಿಂದ ಪ್ರಯತ್ನಿಸಲಾಗುತ್ತಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಬೆಲ್ಜಿಯಂನ ಭಾರತೀಯ ರಾಯಭಾರಿ ಮಂಜೀವ್ ಪುರಿ ಹೇಳಿದ್ದಾರೆ.[ಬ್ರುಸೆಲ್ಸ್ ಅವಳಿ ಸ್ಫೋಟ, ಸಹಾಯವಾಣಿ ಸಂಖ್ಯೆಗಳು]
ಈ ಬಗ್ಗೆ ಇನ್ಫೋಸಿಸ್ ಸಂಸ್ಥೆ ಕೂಡಾ ಪ್ರತಿಕ್ರಿಯಿಸಿದ್ದು, ಬ್ರುಸೆಲ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಭಾರತೀಯ ಉದ್ಯೋಗಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಆದರೆ, ರಾಘವೇಂದ್ರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ, ಅವರ ಕುಟುಂಬದವರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ರಾಘವೇಂದ್ರ ಅವರ ಹುಡುಕಾಟಕ್ಕಾಗಿ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದೆ.[ಇನ್ಫಿ ಟೆಕ್ಕಿ ರಾಘವೇಂದ್ರ ನಾಪತ್ತೆ, ತಾಯಿಯ ಅಳಲು]
ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಸಹ ಬ್ರಸ್ಸೆಲ್ಸ್ ಸ್ಪೋಟದ ನಂತರ ನಾಪತ್ತೆಯಾಗಿರುವ ಭಾರತೀಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಜೆಟ್ ಏರ್ ವೇಸ್ ನ ಸಿಬ್ಬಂದಿಗಳಲ್ಲಿ ಇಬ್ಬರು ಗಾಯಾಳುಗಳಾಗಿದ್ದು, ಇಬ್ಬರಿಗೂ ಚಿಕಿತ್ಸೆ ಕೊಡಿಸಲಾಗಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.
(ಐಎಎನ್ಎಸ್)