ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ರಕ್ಷಣೆಗೆ ನಿಂತ ಕೇಂದ್ರ
ನವದೆಹಲಿ, ಆಗಸ್ಟ್, 01: ಸೌದಿ ಅರೇಬಿಯಾದಲ್ಲಿ ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಸಂಕಷ್ಟ ಪಡುತ್ತಿರುವ 10 ಸಾವಿರ ಜನರನ್ನು ದೇಶಕ್ಕೆ ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಕೇಂದ್ರ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಸೋಮವಾರ ಸುಷ್ಮಾ ಸ್ವರಾಜ್ ಈ ವಿಷಯ ತಿಳಿಸಿದ್ದಾರೆ. ಸಚಿವ ವಿಕೆ ಸಿಂಗ್ ಸೌದಿ ಅರೇಬಿಯಾಕ್ಕೆ ಮಂಗಳವಾರ ಭೇಟಿ ನೀಡಲಿದ್ದು ಭಾರತೀಯರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.[ಅಳಲು ತೋಡಿಕೊಂಡ ಕನ್ನಡಿಗನಿಗೆ ಸೌದಿಯಲ್ಲಿ ಜೈಲುವಾಸ]
ಸೌದಿ ಅರೇಬಿಯಾದಲ್ಲಿರುವ ಯಾವ ಭಾರತೀಯರು ಹಸಿವಿನಿಂದ ಸಾಯಬಾರದು. ವಿವಿಧ ಕ್ಯಾಂಪ್ ಗಳಾಗಿ ಭಾರತೀಯರನ್ನು ವಿಂಗಡಿಸಿ ಆಹಾರ ವಿತರಿಸಲಾಗುವುದು ಎಂದು ತಿಳಿಸಿದರು.
ಆದರೆ ಇದು ಶಾಶ್ವತ ಪರಿಹಾರವಲ್ಲ. ಭಾರತೀಯರು ಇದ್ದ ಕಂಪನಿಗಳಿಗೆ ಬಾಗಿಲು ಹಾಕಿರುವ ಮಾಲೀಕರು ಬೇರೆಡೆಗೆ ತೆರಳಿದ್ದಾರೆ. ಭಾರತೀಯರನ್ನೆಲ್ಲ ದೇಶಕ್ಕೆ ಹಿಂದೆ ಕರೆತಂದರೆ ಮಾತ್ರ ಶಾಶ್ವತ ಪರಿಹಾರ ಸಿಕ್ಕಂತೆ ಆಗುತ್ತದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದ ಪರಿಣಾಮ ಸೌದಿ ಅರೇಬಿಯಾದ ಮೇಲಾಗಿದ್ದು ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಇದರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.