'ನನಗೆ ಉತ್ತರ ಬೇಕು' ಟ್ರಂಪ್ ಗೆ ಶ್ರೀನಿವಾಸ್ ಪತ್ನಿಯ ಬೇಡಿಕೆ
"ನಾವು ಇಲ್ಲಿಗೆ (ಅಮೆರಿಕಾ) ಸೇರಿದವರಾ?” ಎಂದು ಅಮೆರಿಕಾದಲ್ಲಿ ಕೊಲೆಯಾದ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಭೋತ್ಲಾ ಪತ್ನಿ ಸುನಾಯಾನಾ ದುಮಾಲ ಅಲ್ಲಿನ ಸರಕಾರವನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 24: "ನಾವು ಇಲ್ಲಿಗೆ (ಅಮೆರಿಕಾ) ಸೇರಿದವರಾ?" ಎಂದು ಅಮೆರಿಕಾದಲ್ಲಿ ಕೊಲೆಯಾದ ಭಾರತೀಯ ಮೂಲದ ಎಂಜಿನಿಯರ್ ಶ್ರೀನಿವಾಸ್ ಕುಚಿಭೋತ್ಲಾ ಪತ್ನಿ ಸುನಾಯಾನಾ ದುಮಾಲ ಅಲ್ಲಿನ ಸರಕಾರವನ್ನು ಪ್ರಶ್ನಿಸಿದ್ದಾರೆ.
'ನನಗೆ ಸರಕಾರದಿಂದ ಉತ್ತರ ಬೇಕು. ಈ ರೀತಿಯ ಅಪರಾಧಗಳನ್ನು ಸರಕಾರ ಹೇಗೆ ತಡೆಯಲಿದೆ ?' ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತಿ ಕೆಲಸ ಮಾಡುತ್ತಿದ್ದ ಜರ್ಮಿನ್ ಕಂಪೆನಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಅಮೆರಿಕಾದಲ್ಲಿ ಅಲ್ಪಸಂಖ್ಯಾತರು ಭಯದಿಂದ ವಾಸಿಸುತ್ತಿದ್ದಾರೆ ಎಂಬ ವರದಿಗಳಿವೆ. "ನನಗೂ ಅಮೆರಿಕಾದಲ್ಲಿ ಬದುಕುವ ಬಗ್ಗೆ ಗೊಂದಲಗಳಿದ್ದವು. ಆದರೆ ತನ್ನ ಗಂಡ ಅಮೆರಿಕಾದಲ್ಲಿ ಒಳ್ಳೆಯ ದಿನಗಳು ಬರಲಿವೆ ಎಂದಿದ್ದರು," ಎಂದು ಹೇಳಿದ್ದಾರೆ. ಆದರೆ ಇದೀಗ ಅವರ ಪತಿಯೇ ಸಾವನ್ನಪ್ಪಿದ್ದಾರೆ.
ಅರಬ್ ಎಂದು ತಪ್ಪು ತಿಳಿದು ಶ್ರೀನಿವಾಸ್ ರನ್ನು ಅಮೆರಿಕದ ಕನ್ಸಾಸ್ ನಲ್ಲಿ ಶುಕ್ರವಾರ ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಇದೇ ಶೂಟೌಟಿನಲ್ಲಿ ಮತ್ತೊಬ್ಬ ಭಾರತೀಯನಿಗೂ ಗಾಯವಾಗಿದೆ.
ಭಾರತೀಯನ ಮೇಲೆ ಗುಂಡು ಹಾರಿಸುವ ಮುನ್ನ "ನನ್ನ ದೇಶದಿಂದ ಹೊರಹೋಗು" ಎಂದು ಹತ್ಯೆ ಮಾಡಿದವ ಕಿರುಚಿದ್ದ ಎಂದು ಕನ್ಸಾಸ್ ಸ್ಟಾರ್ ವರದಿ ಮಾಡಿತ್ತು. ಇಬ್ಬರು ಭಾರತೀಯರನ್ನು ಕಾಣುತ್ತಿದ್ದಂತೆ ಜನಾಂಗೀಯ ನಿಂದನೆ ಆರಂಭಿಸಿದ ಆಡಂ ಪುರಿಂಟೋ ಎಂಬಾತ ಭಾರತೀಯರಿಬ್ಬರ ಮೇಲೆ ಗುಂಡು ಹಾರಿಸಿದ್ದ.
ಸದ್ಯ ಶ್ರೀನಿವಾಸ್ ಕುಟುಂಬದ ಸಹಾಯಕ್ಕೆ ಹೂಸ್ಟನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಧಾವಿಸಿದ್ದು ಕುಟುಂಬದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ಜತೆಗೆ ಅಲ್ಲಿರುವ ಇತರ ಭಾರತೀಯರಿಗೂ ಧೈರ್ಯ ತುಂಬುವಲ್ಲಿ ನಿರತರಾಗಿದ್ದಾರೆ.
ಇನ್ನು ಘಟನೆಯಲ್ಲಿ ಗಾಯಗೊಂಡಿದ್ದ ಅಲೋಕ್ ಮದನಾಸಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಂಡಿನ ದಾಳಿ ತಪ್ಪಿಸಲು ಹೋಗಿದ್ದ ಅಮೆರಿಕಾ ನಾಗರಿಕ ಇಯಾನ್ ಗರಿಲೋಟಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಗುಂಡಿನ ದಾಳಿಯಿಂದ ಅಮೆರಿಕಾದಲ್ಲಿ ಭಾರತೀಯರು ಬೆಚ್ಚಿಬಿದ್ದಿದ್ದಾರೆ ಎಂಬ ವರದಿಗಳು ಬರುತ್ತಿವೆ.
ಶ್ರೀನಿವಾಸ್ ಮೃತ ದೇಹವನ್ನು ಇಂದು ನ್ಯೂಜೆರ್ಸಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಒಂದು ದಿನ ಇಟ್ಟು ನಂತರ ಅಲ್ಲಿಂದ ಹೈದರಾಬಾದಿಗೆ ಬರಲಿದೆ.