ಪಾಕ್ ನಲ್ಲಿ ಭಯೋತ್ಪಾದನೆ ಕೃತ್ಯಕ್ಕೆ ಚೀನಾ, ರಷ್ಯಾ ಕುಮ್ಮಕ್ಕು: ಹಫೀಜ್
ಲಾಹೋರ್, ಜನವರಿ 23: ಪಾಕಿಸ್ತಾನದೊಳಗಿನ ಭಯೋತ್ಪಾದನೆಯಲ್ಲಿ ಚೀನಾ ಹಾಗೂ ರಷ್ಯಾ ಕೈವಾಡವಿದೆ ಎಂದು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ, ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಆರೋಪಿಸಿದ್ದಾನೆ.
ಚೀನಾ, ರಷ್ಯಾ ಮತ್ತಿತರ ದೇಶಗಳ ಮೇಲೆ ಒತ್ತಡ ಹೇರಿ ಭಾರತವು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಭಯೋತ್ಪಾದನೆಗೆ ತಡೆಹಾಕಬೇಕು ಎಂದು ಜಮಾತ್ ಉದ್ ದವಾ ಸಂಘಟನೆಯ ಕೇಂದ್ರ ಕಚೇರಿಯಲ್ಲಿ ಪತ್ರಕರ್ತರಿಗೆ ಹಫೀಜ್ ಸಯೀದ್ ಹೇಳಿದ್ದಾನೆ.
ಸಭೆಯ ನಂತರ ಮಾತನಾಡಿದ ಆತ, ಪಾಕಿಸ್ತಾನ ಸರಕಾರವು ಭಾರತದ ಮೇಲೆ ಒತ್ತಡ ಹೇರಿ, ಚೀನಾ, ರಷ್ಯಾ ಮೂಲಕ ಭಯೋತ್ಪಾದನಾ ಕೃತ್ಯ ಎಸಗುತ್ತಿರುವ ಭಾರತವನ್ನು ತಡೆಯಬೇಕು ಎಂದು ಆತ ಹೇಳಿದ್ದಾನೆ. ಆದರೆ ಆ ನಂತರ ಸಂಘಟನೆಯ ಅಹ್ಮದ್ ನದೀಮ್ ಮಾತನಾಡಿ, ಪಾಕಿಸ್ತಾನದಲ್ಲಿ ಭಯೋತ್ಪಾದನೆ ವಿಚಾರವಾಗಿ ಚೀನಾ ಹೆಸರನ್ನು ತಪ್ಪಾಗಿ ಹೇಳಿದ್ದಾರೆ ಎಂದಿದ್ದಾನೆ.
"ಪಾಕಿಸ್ತಾನ ಸರಕಾರ ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಅನ್ನು ಕಾಶ್ಮೀರದ ಸ್ವಾತಂತ್ರ್ಯದೊಂದಿಗೆ ತಳಕು ಹಾಕಿ, ಚೀನಾ ಮತ್ತು ರಷ್ಯಾ ಇತರ ದೇಶಗಳು ಸೇರಿ ಭಾರತವು ಪಾಕಿಸ್ತಾನದಲ್ಲಿ ನಡೆಸುತ್ತಿರುವ ಭಯೋತ್ಪದನಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಒತ್ತಡ ಹೇರಬೇಕು" ಅಂತ ಹಫೀಜ್ ಅಂದುಕೊಂಡಿದ್ದು ಎಂದು ನದೀಮ್ ಹೇಳಿದ್ದಾನೆ.
ಭಯೋತ್ಪಾದಕ ಸಯೀದ್ ತಲೆಗೆ ಹತ್ತು ಲಕ್ಷ ಅಮೆರಿಕನ್ ಡಾಲರ್ ಬಹುಮಾನ ಇಡಲಾಗಿದೆ. ಕಾಶ್ಮೀರದ ವಿಷಯ ಬಗೆಹರಿಯುವ ತನಕ ಪಾಕಿಸ್ತಾನವು ಭಾರತದ ಜೊತೆಗಿನ ಎಲ್ಲ ವ್ಯವಹಾರವನ್ನು ನಿಲ್ಲಿಸಬೇಕು ಎಂದು ಆತ ಪಾಕ್ ಪ್ರಧಾನಿಗೆ ಒತ್ತಾಯಿಸಿದ್ದಾನೆ.