ಇದನ್ನು ಅದೃಷ್ಟವೆನ್ನುತ್ತೀರೋ, ದೈವಬಲವೆನ್ನುತ್ತೀರೋ?
ದುಬೈ, ಆಗಸ್ಟ್ 10 : ಇದನ್ನು ಅದೃಷ್ಟವೆನ್ನುತ್ತೀರೋ, ದೈವಬಲವೆನ್ನುತ್ತೀರೋ? ದುಬೈನಲ್ಲಿ ಕೆಲದಿನಗಳ ಹಿಂದೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಪವಾಡಸದೃಶವಾಗಿ, ಏನೂ ಗಾಯವಾಗದಂತೆ ಪಾರಾಗಿದ್ದ ಮಲಯಾಳಿ ವ್ಯಕ್ತಿಯೊಬ್ಬನಿಗೆ ಭಾರೀ ಮೊತ್ತದ ಲಾಟರಿ ಹೊಡೆದಿದ್ದಾರೆ.
ರಂಜಾನ್ ಹಬ್ಬದ ಸಮಯದಲ್ಲಿ ರಜಾ ಕಳೆಯಲೆಂದು ಕೇರಳಕ್ಕೆ ಬಂದಿದ್ದ 62 ವರ್ಷದ ಮೊಹಮ್ಮದ್ ಬಶೀರ್ ಅಬ್ದುಲ್ ಖಾದರ್ ಅವರು ಯಾವುದಕ್ಕೂ ಇರಲಿ ಅಂತ ತಿರುವನಂತಪುರದಲ್ಲಿ ಲಾಟರಿಯೊಂದನ್ನು ಕೊಂಡಿದ್ದರು. ರಜಾ ಮುಗಿಸಿ ದುಬೈಗೆ ಮರಳುತ್ತಿದ್ದಂತೆ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಅವರಿಗೆ ಅಚ್ಚರಿ ಕಾದಿತ್ತು. [ವಿಡಿಯೋ: ದುಬೈನಲ್ಲಿ ಎಮಿರೈಟ್ಸ್ ವಿಮಾನಕ್ಕೆ ಬೆಂಕಿ]
ಖಾದರ್ ಅವರು ಹತ್ತು ಲಕ್ಷ ಡಾಲರ್ (3.67 ಮಿಲಿಯನ್ ಧಿರಂ) ಮೊತ್ತಕ್ಕೆ ಅವರು ಒಡೆಯರಾಗಿದ್ದಾರೆ. ಅವರ ಲಾಟರಿ ಟಿಕೆಟ್ ನಂಬರ್ 0845 ಖಾದರ್ ಅವರ ಅದೃಷ್ಟದ ಬಾಗಿಲನ್ನೇ ತೆರೆದಿದೆ. ಹಿಂದೆ ಆರ್ಥಿಕವಾಗಿ ಸಾಕಷ್ಟು ಸಂಕಷ್ಟ ಅನುಭವಿಸಿರುವ ಅವರಿಗೆ ಈ ಮೊತ್ತ ಮತ್ತೊಂದು ಮರುಜನ್ಮ ನೀಡಿದಂತಾಗಿದೆ.
"EK521 ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿದ್ದರೂ ಪವಾಡಸದೃಶವಾಗಿ ಪಾರಾಗಿದ್ದೆ. ಅದಕ್ಕೆ ಅಲ್ಲಾಹುವಿಗೆ ಧನ್ಯವಾದ ಹೇಳುತ್ತೇನೆ. ಈಗ ಲಾಟರಿ ಟಿಕೆಟ್ ಗೆದ್ದಿರುವುದು ಗೊತ್ತಾದ ಕೂಡಲೆ ಮೊದಲು ನಂಬಿಕೆ ಬರಲಿಲ್ಲ. ನನ್ನ ಜೊತೆ ತಮಾಷೆ ಮಾಡುತ್ತಿರಬಹುದು ಅಂತ ಅಂದುಕೊಂಡೆ. ಆದರೆ, ಸಂಬಂಧಿಸಿದವರು ನನಗೆ ವಿವರಿಸಿ ಹೇಳಿದಾಗ ನಂಬದಿರಲು ಸಾಧ್ಯವೇ ಆಗಲಿಲ್ಲ" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ. [ಅಮ್ಮಾ ನಿನ್ನನ್ನು ಒಂದೇ ಸಾರಿ ತಬ್ಬಿಕೊಳ್ಳಲಾ?]
ಗಲ್ಫ್ ನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಖಾದರ್ ಅವರು, 1978ರಲ್ಲಿ ದುಬೈಗೆ ಜೀವನೋಪಾಯಕ್ಕೆಂದು ಬಂದಿದ್ದರು. ಸದ್ಯಕ್ಕೆ ಕಾರು ಡೀಲರ್ ಕಂಪನಿಯೊಂದರಲ್ಲಿ ಅಡ್ಮಿನ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಆರ್ಥಿಕವಾಗಿ ಸುರಕ್ಷಿತವಾಗಿರುವ ಅವರು ಅಷ್ಟು ಸ್ಥಿತಿವಂತರಾಗೇನೂ ಇರಲಿಲ್ಲ. ಅವರ 21 ವರ್ಷದ ಮಗ ಹದಿಮೂರು ದಿನದವನಿದ್ದಾಗ ಬಿದ್ದಿದ್ದರಿಂದ ದೈಹಿಕ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಗನಿಗಾಗಿ ಕೂಡ ಖಾದರ್ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾರೆ.
ಈಗ ದಕ್ಕಿರುವ ಭಾರೀ ಮೊತ್ತವನ್ನು ಹೇಗೆ ವ್ಯಯಿಸಬೇಕೆಂಬುದನ್ನು ಕೂಡ ಅವರು ನಿರ್ಧರಿಸಿದ್ದಾರೆ. ಕಷ್ಟವೇನೆಂಬುದನ್ನು ಅರಿತಿರುವ ಅವರು, ನಿವೃತ್ತರಾದ ನಂತರ ಕೇರಳಕ್ಕೆ ಮರಳಿ ಅಲ್ಲಿ ಕೃಷಿಭೂಮಿ ಕೊಳ್ಳಬೇಕೆಂದಿದ್ದಾರೆ ಮತ್ತು ಆರ್ಥಿಕವಾಗಿ ಬಡವಿರುವ ಮಕ್ಕಳಿಗಾಗಿ ಸಹಾಯ ಮಾಡಬೇಕೆಂಬ ಆಶಯ ಹೊಂದಿದ್ದಾರೆ. [ಆಕೆ ಕೊಟ್ಟ ಉತ್ತರ ಜೀವನದಲ್ಲಿ ಎಂದೂ ಮರೆಯಲಾಗದು]