ವಜಾಗೊಳಿಸಿದ್ದ ಭಾರತೀಯರನ್ನು ಮತ್ತೇ ನೇಮಿಸಿಕೊಂಡ ಚೀನಾ ಕಂಪನಿ!!
ತನ್ನ ಎಲ್ಲಾ ಭಾರತೀಯ ನೌಕರರನ್ನು ವಜಾಗೊಳಿಸಿದ್ದ ಇರಾನ್ ನ ಹುವಾಯ್ ಕಂಪನಿ. ಭಾರತೀಯ ಧೂತಾವಾಸದ ಮಧ್ಯ ಪ್ರವೇಶದ ನಂತರ ಎಲ್ಲರಿಗೂ ಮತ್ತೆ ನೌಕರಿ ನೀಡಿದ ಕಂಪನಿ.
ಟೆಹರಾನ್, ಆಗಸ್ಟ್ 19: ಇರಾನ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಚೀನಾದ ಹುವಾಯ್ ಟೆಲಿಕಾಂ ಕಂಪನಿ ಶಾಖೆಯು ತನ್ನಲ್ಲಿದ್ದ ಭಾರತೀಯ ನೌಕರರನ್ನು ಕೆಲಸದಿಂದ ಸಾಮೂಹಿಕವಾಗಿ ವಜಾಗೊಳಿಸಿ, ಆನಂತರ ಭಾರತ ಸರ್ಕಾರದ ಮಧ್ಯ ಪ್ರವೇಶದಿಂದ ಆ ನೌಕರರಿಗೆ ಮತ್ತೆ ಅದೇ ಕಂಪನಿಯಲ್ಲಿ ಕೆಲಸ ತೆಗೆದುಕೊಳ್ಳಲಾಗಿದೆ ಎಂದು ಎಂದು ಐಬಿಟಿ ವರದಿ ಮಾಡಿದೆ.
ಭಾರತ ಮತ್ತು ಚೀನಾ ದೇಶಗಳ ನಡುವೆ ಗಡಿ ಪ್ರದೇಶದಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವ ಹಿನ್ನೆಲೆಯಲ್ಲಿ ಹುವೈ ಕಂಪನಿಯು ತನ್ನಲ್ಲಿದ್ದ ಎಲ್ಲಾ ಭಾರತೀಯರನ್ನು ಸೇವೆಯಿಂದ ಏಕಾಏಕಿ ವಜಾಗೊಳಿಸಿತ್ತು. ಹೀಗೆ, ವಜಾಗೊಳಿಸುವ ಮುನ್ನ ಆ ಕಂಪನಿಯು ತನ್ನ ನೌಕರರಿಗೆ ಯಾವುದೇ ಸೂಚನೆಯನ್ನು ನೀಡಿರಲಿಲ್ಲ.
ಇತ್ತ, ಆಗಸ್ಟ್ 15ರಂದು ಭಾರತೀಯರು ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಮುಳುಗಿ ಹೋಗಿದ್ದಾಗ ಅಲ್ಲಿ ಸಾಮೂಹಿಕ ವಜಾ ಜಾರಿಗೊಂಡಿತ್ತು ಎಂದು ಕಂಪನಿಯ ಉದ್ಯೋಗಿಯೊಬ್ಬರು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದರು. ಈ ಟ್ವೀಟ್ ಗಳನ್ನು ಅವರು ಪ್ರಧಾನಿ ಕಚೇರಿ ಹಾಗೂ ಕೇಂದ್ರ ವಿದೇಶಾಂಗ ಇಲಾಖೆಯ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ತಲುಪುವಂತೆ ಮಾಡಿದ್ದರು. ಕೊನೆಗೂ ಅದು ಫಲ ಕೊಟ್ಟಿತ್ತು.
ಕೇಂದ್ರ ಸರ್ಕಾರಕ್ಕೆ ಟ್ವೀಟ್
ಆ ಟ್ವೀಟ್ ನಲ್ಲಿ ಕಂಪನಿಯ ದೌರ್ಜನ್ಯವನ್ನು ಬಣ್ಣಿಸಿದ್ದ ಅವರು, ನೌಕಕರಿಂದ ಯಾವುದೇ ಪ್ರಮಾದವಾಗಿಲ್ಲ ಹಾಗೂ ಕಂಪನಿಯು ನಷ್ಟದಲ್ಲಿಯೂ ಇಲ್ಲ. ಆದರೂ, ಎಲ್ಲಾ ಭಾರತೀಯ ನೌಕರರನ್ನು ಅದು ಕೆಲಸದಿಂದ ತೆಗೆದು ಹಾಕಿದೆ. ಇದು, ಭಾರತ ಹಾಗೂ ಚೀನಾ ನಡುವಿನ ವಿರಸದ ಪ್ರತಿಫಲವಲ್ಲದೆ ಮತ್ತೇನೂ ಅಲ್ಲ ಎಂದು ಕಂಪನಿಯಿಂದ ಹೊರಹಾಕಲ್ಪಟ್ಟಿದ್ದ ರೋಹಿತ್ ಎಂಬುವರು ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದರು.
ಸುಷ್ಮಾ ಸ್ವರಾಜ್ ಗೆ ಟ್ಯಾಗ್
ಕಂಪನಿಯ ಮತ್ತೊಬ್ಬ ನೌಕರಸ್ಥ ವಿಕ್ರಾಂತ್ ಸಿಂಗ್ ಅವರು ಪ್ರಧಾನಿ ಕಚೇರಿ ಹಾಗೂ ಸುಷ್ಮಾ ಸ್ವರಾಜ್ ಅವರಿಗೆ ಟ್ಯಾಗ್ ಮಾಡಿ, ''ಟೆಹರಾನ್ ನಲ್ಲಿರುವ ಹುವಾಯ್ ಟೆಲಿಕಾಂ ಕಂಪನಿಯ ಎಲ್ಲಾ ಭಾರತೀಯ ನೌಕರರು ಈಗ ಬೀದಿಗೆ ಬಿದ್ದಿದ್ದಾರೆ'' ಎಂದು ಅಳಲು ತೋಡಿಕೊಂಡಿದ್ದರು.
ಸ್ಪಂದಿಸಿದ ಕೇಂದ್ರ ಸರ್ಕಾರ
ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ವಿದೇಶಾಂಗ ಇಲಾಖೆಯು, ಇರಾನ್ ನಲ್ಲಿರುವ ತನ್ನ ರಾಯಭಾರ ಕಚೇರಿಗೆ ಹುವಾಯ್ ಕಂಪನಿಯ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಸೂಚಿಸಿತು.
ಎಲ್ಲರಿಗೂ ಸಿಕ್ಕಿತು ಮತ್ತೆ ಕೆಲಸ
ವಿದೇಶಾಂಗ ಇಲಾಖೆಯ ಸೂಚನೆಯ ಮೇರೆಗೆ, ಹುವಾಯ್ ಕಂಪನಿಯ ಅಧಿಕಾರಿಗಳೊಂದಿಗೆ ಧೂತಾವಾಸದ ಅಧಿಕಾರಿಗಳು ಮಾತುಕತೆ ನಡೆಸಿದರು. ಇದರ ಫಲವಾಗಿ, ಕೆಲಸದಿಂದ ತಗೆದುಹಾಕಲ್ಪಟ್ಟಿದ್ದ ಎಲ್ಲಾ ಭಾರತೀಯ ನೌಕರರನ್ನು ಕಂಪನಿಯು ಪುನಃ ಕೆಲಸಕ್ಕೆ ತೆಗೆದುಕೊಂಡಿದೆ. ಅಲ್ಲಿನ ಭಾರತೀಯ ನೌಕರರು ಭಾರತೀಯ ವಿದೇಶಾಂಗ ಇಲಾಖೆಯ ಈ ಕಾರ್ಯವನ್ನು ತುಂಬು ಹೃದಯದಿಂದ ಸ್ಮರಿಸುತ್ತಿದ್ದಾರೆ.