ಮೊರಾ ಚಂಡಮಾರುತಕ್ಕೆ ಬಾಂಗ್ಲಾದೇಶ ತತ್ತರ, ಮೂರೂವರೆ ಲಕ್ಷ ಮಂದಿ ಸ್ಥಳಾಂತರ
ಢಾಕಾ, ಮೇ 30: ಮೊರಾ ಚಂಡಮಾರುತವು ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪಕ್ಕೆ ಮತ್ತು ಕಾಕ್ಸ್ ಬಜಾರ್ ನ ಟೆಕ್ನಾಫ್ ಗೆ ಅಪ್ಪಳಿಸಿದ್ದು, ಎರಡು ಲಕ್ಷ ಮಂದಿಯನ್ನು ಸ್ಥಳಾಂತರಿಸಲಾಗಿದೆ. ಇನ್ನು ಚಿತ್ತಗಾಂಗ್ ಜಿಲ್ಲೆಯಲ್ಲಿ ಒಂದೂವರೆ ಲಕ್ಷ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.
ಇನ್ನು ಮ್ಯಾನ್ಮಾರ್ ನಿಂದ ಗುಳೆ ಎದ್ದು ಬಂದು ಬಾಂಗ್ಲಾದೇಶದಲ್ಲಿ ಸೂರು ಕಂಡುಕೊಂಡಿದ್ದ ರೋಹಿಂಗ್ಯಾ ಮುಸ್ಲಿಮರಿಗೆ ಮತ್ತೊಂದು ಆಘಾತ ಆಗಿದೆ. ರೋಹಿಂಗ್ಯಾ ಮುಸ್ಲಿಮರ ನಾಯಕ ಶಂಸುಲ್ ಅಲಮ್ ಮಾತನಾಡಿ, ಬಲುಖಾಲಿ ಹಾಗೂ ಕುಟುಪಲಾಂಗ್ ನಲ್ಲಿದ್ದ ಹತ್ತು ಸಾವಿರ ನಿರಾಶ್ರಿತರ ಕ್ಯಾಂಪ್ ಗಳಿಗೆ ಹಾನಿಯಾಗಿದೆ.[ಕೇರಳಕ್ಕೆ 'ಮುಂಗಾರು', ಬಾಂಗ್ಲಾದೇಶಕ್ಕೆ 'ಮೋರಾ']
ತಾತ್ಕಾಲಿಕವಾಗಿ ನಿರ್ಮಿಸಿಕೊಂಡಿದ್ದ ಮನೆಗಳು ನಾಶವಾಗಿವೆ" ಎಂದು ಅಲಮ್ ತಿಳಿಸಿದ್ದಾರೆ. ಇನ್ನು ಕುಟುಪಲಾಂಗ್ ಕ್ಯಾಂಪ್ ನ ನಾಯಕ ಒಮರ್ ಫಾರೂಕ್ ಮಾತನಾಡಿ, ನಾವೀಗ ಬೀದಿಗೆ ಬಿದ್ದಿದ್ದೇವೆ ಎಂದಿದ್ದಾರೆ. ಇನ್ನು ಕಾಕ್ಸ್ ಬಜಾರ್ ಜಿಲ್ಲಾ ಮುಖ್ಯಸ್ಥ ಮಾತನಾಡಿ, ಕನಿಷ್ಠ ಹದಿನೈದು ಸಾವಿರ ಮನೆಗಳು ಜಿಲ್ಲೆಯಲ್ಲಿ ನಾಶವಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಏಳು ಅಡಿ ಎತ್ತರದ ಅಲೆ
ಚಿತ್ತಗಾಂಗ್ ನ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಗಂಟೆಗೆ ನೂರಾಮೂವತ್ತೈದು ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇನ್ನು ಕರಾವಳಿ ಪ್ರದೇಶದಲ್ಲಿ ಏಳು ಅಡಿ ಎತ್ತರಕ್ಕೆ ಅಲೆಗಳು ಏಳುತ್ತಿವೆ. ಈ ಪ್ರದೇಶದ ಎಲ್ಲ ವಿಮಾನ ಹಾರಾಟವನ್ನು ರದ್ದುಗೊಳಿಸಲಾಗಿದೆ.
ಮೂರೂವರೆ ಲಕ್ಷ ರೋಹಿಂಗ್ಯಾ ಮುಸ್ಲಿಮರು
ಕಳೆದ ಅಕ್ಟೋಬರ್ ನಲ್ಲಿ ಮ್ಯಾನ್ಮಾರ್ ಸೇನೆ ಕಾರ್ಯಾಚರಣೆ ನಡೆಸಿದ ನಂತರ ಅಂದಾಜು ಎಪ್ಪತ್ನಾಲ್ಕು ಸಾವಿರ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ವಲಸೆ ಬಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಲ್ಲಿಗೆ ಬಂದಿರುವ ಒಟ್ಟು ವಲಸಿಗರ ಸಂಖ್ಯೆ ಎರಡು ಲಕ್ಷಕ್ಕೂ ಹೆಚ್ಚಿದೆ. ಬಾಂಗ್ಲಾದೇಶ ಸರಕಾರ ಅಂದಾಜಿನ ಪ್ರಕಾರ ಆ ದೇಶದಲ್ಲೀಗ ಮೂರೂವರೆ ಲಕ್ಷ ರೋಹಿಂಗ್ಯಾ ಮುಸ್ಲಿಮರಿದ್ದಾರೆ.
ನಾಗರಿಕತ್ವ ನಿರಾಕರಣೆ
ಬೌದ್ಧರು ಹೆಚ್ಚಿನ ಸಂಖ್ಯೆಯಲ್ಲಿರುವ ಮ್ಯಾನ್ಮಾರ್ ನಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಅಧಿಕೃತ ನಾಗರಿಕತ್ವ ನೀಡಲು ನಿರಾಕರಿಸಲಾಗಿದೆ. ಅವರನ್ನು ಅನಧಿಕೃತ ವಲಸಿಗರು ಎಂದು ಪರಿಗಣಿಸಲಾಗುತ್ತದೆ. ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಅಲ್ಲಿ ನಡೆದ ಕೋಮು ಗಲಭೆ ನಂತರ ಅಲ್ಲಿಂದ ಹೊರಬಿದ್ದಿದ್ದರು.
ಅನಾಹುತದ ಅಂದಾಜು ಸಿಗ್ತಿಲ್ಲ
ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರ ಪ್ರಕಾರ, ಬಾಂಗ್ಲಾದೇಶದಲ್ಲಿರುವ ರೋಹಿಂಗ್ಯಾ ನಿರಾಶ್ರಿತರ ಶಿಬಿರಗಳಲ್ಲಿ ಆಗಿರುವ ಅನಾಹುತದ ಅಂದಾಜು ಸಿಗುತ್ತಿಲ್ಲ. ಏಕೆಂದರೆ ಆ ಸಂಖ್ಯೆ ಹೆಚ್ಚುತ್ತಲೇ ಇದೆ. ಗರ್ಭಿಣಿಯರನ್ನು ಕ್ಯಾಂಪ್ ಗಳಿಂದ ಸ್ಥಳಾಂತರಿಸಲಾಗಿದೆ.