ಚಿನ್ನಸ್ವಾಮಿ ಸ್ಫೋಟ ಪ್ರಕರಣ: ಮತ್ತೊಬ್ಬ ಸಿಕ್ಕಿಬಿದ್ದ
ಬಂಧಿತ ಉಗ್ರ ಅಬ್ದುಲ್ ವಹೀದ್ ಭಟ್ಕಳ Indian Mujahideen ಸಂಘಟನೆಯ ಸದಸ್ಯ. ಇವನ ವಿರುದ್ಧ Interpol red corner ನೋಟಿಸ್ ಜಾರಿಯಾಗಿತ್ತು. ಹಾಗಾಗಿ ಅಬು ಧಾಬಿ ಪೊಲೀಸರು ಕಳೆದ ವಾರ ಇವನನ್ನು ಬಂಧಿಸಿದ್ದಾರೆ.
ವಿಷಯ ತಿಳಿದ ಭಾರತದ ಪೊಲೀಸರು ಉಗ್ರ ಅಬ್ದುಲ್ ವಹೀದ್ ಭಟ್ಕಳ ಅಲಿಯಾಸ್ ಸಿದ್ದಿಬಾಪನನ್ನು ಕರೆತರಲು ಅಬು ಧಾಬಿಗೆ ತೆರಳಿದ್ದಾರೆ. 32 ವರ್ಷದ ಅಬ್ದುಲ್ ವಹೀದ್ ಭಟ್ಕಳ, ರಿಯಾಜ್ ಮತ್ತು ಯಾಸಿನ್ ಭಟ್ಕಳನಿಂದ ಪಡೆದ ಹಣವನ್ನು ಉಗ್ರರಿಗೆ ಹಸ್ತಾಂತರಿಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇವನು ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರಾದ ರಿಯಾಜ್ ಮತ್ತು ಯಾಸಿನ್ ಭಟ್ಕಳನ ದೂರದ ಸಂಬಂಧಿ ಎನ್ನಲಾಗಿದೆ. ರಿಯಾಜ್ ಭಟ್ಕಳ ಇನ್ನೂ ನಾಪತ್ತೆಯಾಗಿದ್ದು, ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ ಸಾಧ್ಯತೆಯಿದೆ ಎಂದು NIA ತಿಳಿಸಿದೆ.
2006ರ ಜುಲೈ ಮುಂಬೈ ಬಾಂಬ್ ಸ್ಫೋಟ ಪ್ರಕರಣ, 2008ರ ದೆಹಲಿ ಸ್ಫೋಟ ಮತ್ತು 2010ರಲ್ಲಿ ಚಿನ್ನಸ್ವಾಮಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಅಬ್ದುಲ್ ವಹೀದ್ ಭಟ್ಕಳ ಅಲಿಯಾಸ್ ಸಿದ್ದಿಬಾಪ ಭಾಗಿಯಾಗಿರುವ ಶಂಕೆಯಿದೆ.