7ತಿಂಗಳ ಬಂಧನದಿಂದ ಹೆಂಡತಿಯನ್ನು ಬಿಡಿಸಿ, ಸುಷ್ಮಾಗೆ ಬೆಂಗಳೂರಿಗನ ಮೊರೆ
ಇಲ್ಲಿಂದ ಹೋಗುವಾಗ ರಂಜಿತಾಗೆ ತಿಂಗಳಿಗೆ 30,000 ಸಂಬಳ ಎಂದು ಮಾತುಕತೆಯಾಗಿತ್ತು. ಆದರೆ ಸೌದಿ ಅರೇಬಿಯಾಕ್ಕೆ ಹೋದ ಮೇಲೆ ರಂಜಿತಾಗೆ ಒಂದು ರೂಪಾಯಿಯು ಸಂಬಳ ನೀಡಿಲ್ಲ. ಮಾತ್ರವಲ್ಲ ಆಕೆಗೆ ಹಿಂಸೆ ನೀಡಲಾಗುತ್ತಿತ್ತು.
ಬೆಂಗಳೂರು, ಮಾರ್ಚ್ 5: ಪ್ರಭಾಕರನ್ ಮತ್ತು ರಂಜಿತಾ ತಮಿಳುನಾಡು ಮೂಲದವರಾದರೂ ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. 2016ರ ಜೂನಿನಲ್ಲಿ ಮಗಳ ಮದುವೆಗೆಂದು ಬಡ್ಡಿ ವ್ಯಾಪಾರಿಯ ಬಳಿ ತೆಗೆದ ಸಾಲ ಇವರ ಬದುಕನ್ನೇ ಬರ್ಬಾದ್ ಮಾಡಿ ಹಾಕಿತು.
ಸಾಲ ತೀರಿಸಲಾಗದೆ ಕೊನೆಗೆ ಹೆಚ್ಚಿನ ಸಂಬಳದ ಉದ್ಯೋಗ ಅರಸಲು ಆರಂಭಿಸಿದರು. ಆಗ ಕಣ್ಣಿಗೆ ಕಂಡಿದ್ದು ವಿದೇಶಕ್ಕೆ ಹೋಗುವ ಆಲೋಚನೆ. ಬೆಂಗಳೂರಿನ ಯಾವುದೋ ಟ್ರಾವೆಲ್ ಏಜೆಂಟರ ಬಳಿ ಕೆಲಸ ಇದೆಯಾ ಎಂದು ಕೇಳಿದರು. ಮನೆ ಕೆಲಸಕ್ಕೆ ರಂಜಿತಾಗೆ ಸೌದಿ ಅರೇಬಿಯಾದಲ್ಲಿ ಕೆಲಸ ಸಿಕ್ಕಿದೆ ಎಂಬ ಸುದ್ದಿ ಗೊತ್ತಾಯಿತು. ರಂಜಿತಾ ಸೌದಿಗೆ ಹೊರಟು ನಿಂತರು.['ನಿನ್ನ ದೇಶಕ್ಕೆ ತೊಲಗು' ಎಂದು ಕಿರುಚಿ ಅಮೆರಿಕಾದಲ್ಲಿ ಭಾರತೀಯನಿಗೆ ಗುಂಡು]
ಬೆಂಗಳೂರಿನಿಂದ ದಂಪತಿಗಳಿಬ್ಬರೂ ದೆಹಲಿಗೆ ಹೋಗಿ ಅಲ್ಲಿಂದ ರಂಜಿತಾರನ್ನು ಆಗಸ್ಟ್ 12, 2016ರಂದು ಸೌದಿಗೆ ಕಳುಹಿಸಲಾಯಿತು. ಆಗ ದಂಪತಿಗಳಿಬ್ಬರ ಬಳಿ ಏಜೆಂಟರುಗಳು ಖಾಲಿ ಹಾಳೆಯ ಮೇಲೆ ಸಹಿ ಹಾಕಿಸಿಕೊಂಡರು.
ಇಲ್ಲಿಂದ ಹೋಗುವಾಗ ರಂಜಿತಾಗೆ ತಿಂಗಳಿಗೆ 30,000 ಸಂಬಳ ಎಂದು ಮಾತುಕತೆಯಾಗಿತ್ತು. ಆದರೆ ಸೌದಿ ಅರೇಬಿಯಾಕ್ಕೆ ಹೋದ ಮೇಲೆ ರಂಜಿತಾಗೆ ಒಂದು ರೂಪಾಯಿಯು ಸಂಬಳ ನೀಡಿಲ್ಲ. ಮಾತ್ರವಲ್ಲ ಆಕೆಗೆ ಹಿಂಸೆ ನೀಡಲಾಗುತ್ತಿತ್ತು. ಅಲ್ಲಿ ಆಕೆಗೆ ಮೂರು ದಿನಕ್ಕೆ ಒಂದು ಬ್ರೆಡ್ ಅಷ್ಟೆ ನೀಡುತ್ತಿದ್ದರು. ಇಡೀ ದಿನ ಕೆಲಸ ಮಾಡಿಸುತ್ತಿದ್ದರು. ಎನ್ನುತ್ತಾರೆ ಪ್ರಭಾಕರನ್
ಹೀಗೆ ಕಳೆದ 7 ತಿಂಗಳಿನಿಂದ ರಂಜಿತಾ ಮನೆಯೊಂದರಲ್ಲಿ ಬಂಧಿಯಾಗಿದ್ದರು.
ಎರಡೇ ಎರಡು ದಿನದ ಹಿಂದೆ ಆಕೆ ಅದು ಹೇಗೋ ತಾನು ಬಂಧಿಯಾಗಿದ್ದ ಮನೆಯಿಂದ ತಪ್ಪಿಸಿಕೊಂಡು ಸೌದಿ ಅರೇಬಿಯಾದಲ್ಲಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಹೀಗೆ ತನ್ನ ಬಂಧನದಿಂದ ತಪ್ಪಿಸಿಕೊಂಡಿದ್ದಾರೆ. ಆದರೆ ಭಾರತಕ್ಕೆ ವಾಪಸ್ ಬರಲು ಆಕೆಯ ಬಳಿ ಹಣವಿಲ್ಲ. ಬರುವ ದಾರಿಯೂ ಆಕೆಗೆ ಗೊತ್ತಿಲ್ಲ. ಆಕೆಯನ್ನು ಕರೆದುಕೊಂಡು ಹೋದವರದ್ದಂತೂ ಪತ್ತೆಯೇ ಇಲ್ಲ.[ಸಹಾಯಹಸ್ತ ಚಾಚುವಲ್ಲಿ ಸುಷ್ಮಾರನ್ನು ಮೀರಿಸುವವರೇ ಇಲ್ಲ!]
ಈ ಹಂತದಲ್ಲಿ ಇದೀಗ ಬೆಂಗಳೂರಿನ ಹಿರಿಯ ವಕೀಲ ಬಿ.ಟಿ ವೆಂಕಟೇಶ್ ಸಹಾಯದಿಂದ ಹೆಂಡತಿಯನ್ನು ಕರೆಸಿಕೊಳ್ಳಲು ಸಹಾಯ ಮಾಡುವಂತೆ ಸುಷ್ಮಾ ಸ್ವರಾಜ್ ಗೆ ಪ್ರಭಾಕರನ್ ಮನವಿ ಮಾಡಿದ್ದಾರೆ. ಹಲವು ದೃಷ್ಟಾಂತಗಳಲ್ಲಿ ಸಹಾಯ ಮಾಡಿರುವ ಸುಷ್ಮಾ ಸ್ವರಾಜ್ ತಮ್ಮ ಹೆಂತಿಯನ್ನು ಕರೆ ತರುತ್ತಾರೆ ಎಂದು ಪ್ರಭಾಕರನ್ ಕಾಯುತ್ತಿದ್ದಾರೆ.