ಕಾಶ್ಮೀರದ ಕನಸು ಮರೆತುಬಿಡಿ: ವಿಶ್ವಸಂಸ್ಥೆಯಲ್ಲಿ ಸುಷ್ಮಾ ಖಡಕ್ ಸಂದೇಶ
ವಿಶ್ವಸಂಸ್ಥೆ, ಸೆಪ್ಟೆಂಬರ್ 27: ಕಾಶ್ಮೀರದ ಕನಸನ್ನು ಮರೆತುಬಿಡಿ. ಜಮ್ಮು-ಕಾಶ್ಮೀರ ಭಾರತದ್ದು- ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಹೀಗೆ ಖಡಕ್ ಸಂದೇಶ ನೀಡಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ ಬಂದಿದೆ.
ಉಗ್ರ ಬುಹ್ರಾನ್ ವನಿ ಎನ್ ಕೌಂಟರ್ ನಂತರ ಕಣಿವೆ ರಾಜ್ಯದಲ್ಲಿ ನಡೆದ ಗಲಭೆಯಲ್ಲಿ 90 ಮಂದಿ ಸಾವನ್ನಪ್ಪಿ, ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರಕ್ಕೆ ಪಾಕಿಸ್ತಾನ ಕುಮ್ಮಕ್ಕು ನೀಡುತ್ತಿದೆ ಎಂದು ಭಾರತ ಆರೋಪಿಸಿದೆ.[ಸೈನಿಕರ ತ್ಯಾಗ ವ್ಯರ್ಥವಾಗಲ್ಲ, ಉರಿ ದಾಳಿ ಮರೆಯಲ್ಲ: ಮೋದಿ]
ಪಾಕಿಸ್ತಾನದೊಂದಿಗಿನ ಸಂಬಂಧ ಸುಧಾರಣೆಗೆ ಎರಡು ವರ್ಷದಿಂದ ಭಾರತ ಪ್ರಯತ್ನಿಸುತ್ತಲೇ ಇದೆ. ಆದರೆ ಪಾಕಿಸ್ತಾನದಿಂದ ನಿರಂತರ ಉಗ್ರರ ದಾಳಿಗಳಾಗುತ್ತಿವೆ ಎಂದು ಸಚಿವೆ ಆರೋಪಿಸಿದ್ದಾರೆ.
ಭಯೋತ್ಪಾದನೆ ಕೃತ್ಯ ಅತಿ ದೊಡ್ಡ ಮಟ್ಟದ ಮಾನವ ಹಕ್ಕುಗಳ ಉಲ್ಲಂಘನೆ. ಭಯೋತ್ಪಾದನೆ ಪ್ರೋತ್ಸಾಹಿಸುತ್ತಿರುವ ದೇಶ ಅದಕ್ಕೆ ಉತ್ತರಿಸಬೇಕಾಗುತ್ತದೆ ಎಂದು ಸುಷ್ಮಾ ಹೇಳಿದರು. ಉರಿಯಲ್ಲಿ ನಡೆದ ಸೇನಾ ದಾಳಿಯಲ್ಲಿ ಹದಿನೇಳು ಯೋಧರು ಹುತತ್ಮರಾದ ನಂತರ ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನವನ್ನು ಏಕಾಂಗಿಯನ್ನಾಗಿ ಮಾಡಲು ಅಭಿಯಾನ ಆರಂಭಿಸಿದೆ.[ಗಡಿಯಾಚೆಗಿನ ಕಾರ್ಯಾಚರಣೆ ನಡೆದಿಲ್ಲ: ಭಾರತೀಯ ಸೇನೆ]
ಉರಿ ಮೇಲಿನ ದಾಳಿ ಪಾಕಿಸ್ತಾನದಿಂದ ಆಗಿದ್ದಲ್ಲ. ಮಾತುಕತೆಗೆ ಮುನ್ನವೇ ಭಾರತ ಷರತ್ತುಗಳನ್ನು ವಿಧಿಸುತ್ತಿದೆ ಎಂದು ನವಾಜ್ ಷರೀಫ್ ಹೇಳಿದ್ದರು. ಯಾವ ಪೂರ್ವ ಷರತ್ತುಗಳು ಎಂಬುದನ್ನು ತಿಳಿಸಬೇಕು ಎಂದು ಸ್ವರಾಜ್ ಸವಾಲು ಹಾಕಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೆ ಷರೀಫ್ ಅವರನ್ನು ಮೋದಿ ಸ್ವಾಗತಿಸಿದರು. ಈದ್ ಶುಭಾಶಯ ಕಳಿಸಿದರು. ಹೃದಯ ಶಸ್ತ್ರಚಿಕಿತ್ಸೆ ನಂತರ ಷರೀಫ್ ಬೇಗ ಗುಣಮುಖರಾಗಲಿ ಎಂದು ಹಾರೈಸಿದರು.
ಈ ಎಲ್ಲದರ ಬದಲಿಗೆ ಭಾರತಕ್ಕೆ ಸಿಕ್ಕಿದ್ದೇನು? ಪಠಾಣ್ ಕೋಟ್, ಬಹಾದೂರ್ ಅಲಿ ಹಾಗೂ ಉರಿ ಮೇಲಿನ ಉಗ್ರಗಾಮಿಗಳ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಚಿವೆ ಸುಷ್ಮಾ ಸ್ವರಾಜ್. "ಈ ತಪ್ಪಿಗೆ ಶಿಕ್ಷೆ ಆಗದೆ ಬಿಡುವುದಿಲ್ಲ" ಎಂದು ನರೇಂದ್ರ ಮೋದಿ ಉರಿ ದಾಳಿಯ ನಂತರ ಘೋಷಣೆ ಮಾಡಿದ್ದಾರೆ.[ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಇಪ್ಪತ್ತು ಉಗ್ರರ ಹತ್ಯೆ?]
ಮಿಲಿಟರಿ ದಾಳಿಯ ಬಗ್ಗೆಯೇನೂ ಮೋದಿ ಅವರ ಮಾತಿನಲ್ಲಿ ಸೂಚನೆ ಇಲ್ಲದಿದ್ದರೂ ಪಾಕಿಸ್ತಾನಕ್ಕೆ ಸರಿಯಾದ ಎದುರೇಟು ಕೊಡುವ ಸೂಚನೆಯಂತೂ ನೀಡಿದ್ದಾರೆ. ಭಾರತದಿಂದ ಹರಿಯುತ್ತಿರುವ ನೀರು ನಿಲ್ಲಿಸುವ ಪ್ರಯತ್ನ ಆ ಸೂಚನೆಯ ಮೊದಲ ಕಂತಿನಂತೆ ಗೋಚರಿಸುತ್ತಿದೆ.