ಆದಿತ್ಯನಾಥ್ ‘ಯೋಗಿಯೋ, ಭೋಗಿಯೋ’ಎಂದಿದ್ದ ಯುವಕನ ಬಂಧನ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳಕಾರಿ ಬರಹ ಪೋಸ್ಟ್ ಮಾಡಿದ್ದ ನೋಯ್ಡಾದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ನೋಯ್ಡಾ, ಮಾರ್ಚ್. 24 : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ ಯುವಕನನ್ನು ನೋಯ್ಡಾದಲ್ಲಿ ಬಂಧಿಸಲಾಗಿದೆ.
22 ವರ್ಷದ ರಾಹತ್ ಖಾನ್ ಬಂಧಿತ ಆರೋಪಿ. ವಿರೂಪಗೊಳಿಸಿದ ಸಿಎಂ ಆದಿತ್ಯನಾಥ್ ಅವರ ಭಾವ ಚಿತ್ರಗಳೊಂದಿಗೆ 'ಯೋಗಿಯೋ, ಭೋಗಿಯೋ'ಎಂದು ಬರೆದು ರಾಹತ್ ಖಾನ್ ಫೇಸ್ಬುಕ್ ಪುಟದಲ್ಲಿ ಪ್ರಕಟಿಸಿದ್ದ ಎನ್ನಲಾಗಿದೆ.[ಪೊಲೀಸ್ ಠಾಣೆಗೆ ಹಠಾತ್ ಭೇಟಿ ನೀಡಿದ ಯೋಗಿ ಆದಿತ್ಯನಾಥ್]
ಇದರಿಂದ ಕೆರಳಿದ್ದ ಸಿಎಂ ಆದಿತ್ಯನಾಥ ಸ್ಥಾಪಿಸಿರುವ 'ಹಿಂದು ಯುವ ವಾಹಿನಿ' ಯುವ ಸಮೂಹದ ಸದಸ್ಯರು ರಾಹತ್ ಖಾನ್ ವಿರುದ್ಧ ದನ್ ಕೌರ್ ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿದ್ದರು.
ದೂರಿನ ಮೇರೆಗೆ ಜನ್ ಸುವಿಧಾ ಕೇಂದ್ರ ನಡೆಸುವ ರಾಹತ್ ಖಾನ್ ನನ್ನು ಐಟಿ ಕಾಯ್ದೆ 66ಎ ಅಡಿಯಲ್ಲಿ ಗುರುವಾರ ಬಂಧಿಸಲಾಗಿದೆ. ನಮ್ಮ ಕುಟುಂಬ ಅನೇಕ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು, ಪ್ರಧಾನಿ ಮೋದಿ ಅವರಿಂದಲೂ ಪ್ರಶಂಸೆ ಪಡೆದಿದ್ದೇವೆ. ನನ್ನ ಮಗನ ಮೇಲೆ ಸುಳ್ಳು ಆರೋಪವರಿಸಲಾಗುತ್ತಿದೆ ಎಂದು ಖಾನ್ ತಾಯಿ ಆರೋಪಿಸಿದ್ದಾರೆ.
ಪ್ರಗತಿಪರ ಚಿಂತಕಿ ಪ್ರಭಾ ಬೆಳವಂಗಲ ಅವರೂ ಸಹ ಇತ್ತೀಚೆಗೆ ಯೋಗಿ ಆದಿತ್ಯನಾಥ್ ಅವರ ಅಶ್ಲೀಲ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಹಲವರ ಆಕ್ರೋಶಕ್ಕೆ ಕಾರಣರಾಗಿರುವುದನ್ನು ಇಲ್ಲಿ ಸ್ಮರಿಸಬಹುದು.