ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಗುರಿ: ಯೋಗಿ ಆದಿತ್ಯನಾಥ್
ಮುಖ್ಯಮಂತ್ರಿಯಾದ ನಂತರ, ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಗೋರಖ್ ಪುರಕ್ಕೆ ಆಗಮಿಸಿದ ಅವರು, ಅಲ್ಲಿ ನಡೆದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಗೋರಖ್ ಪುರ (ಉತ್ತರ ಪ್ರದೇಶ), ಮಾರ್ಚ್ 25: ಬಿಜೆಪಿ ಪಕ್ಷದ ಸಂಸದೀಯ ಮಂಡಳಿಯು ತಮಗೆ ಗುರುತರ ಜವಾಬ್ದಾರಿಯನ್ನು ನೀಡಿದ್ದು ಮುಂದಿನ ದಿನಗಳಲ್ಲಿ ನಾನು ನನ್ನ ಜೀವನವನ್ನು ಉತ್ತರ ಪ್ರದೇಶ ವಿಕಾಸಕ್ಕಾಗಿ ಮುಡುಪಾಗಿಡಲಿದ್ದೇನೆ ಎಂದು ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಘೋಷಿಸಿದ್ದಾರೆ.
ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಧ್ಯೇಯವಾಕ್ಯದೊಡನೆ ಸರ್ಕಾರ ನಡೆಸುವುದಾಗಿ ಅವರು ಆಶ್ವಾಸನೆ ನೀಡಿದರು.
ಮುಖ್ಯಮಂತ್ರಿಯಾದ ನಂತರ, ಇದೇ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಗೋರಖ್ ಪುರಕ್ಕೆ ಆಗಮಿಸಿದ ಅವರು, ಅಲ್ಲಿ ನಡೆದ ಬೃಹತ್ ಅಭಿನಂದನಾ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ಇದೇ ವೇಳೆ, ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತವನ್ನು ನೀಡುವುದಾಗಿ ಅವರು ಜನರಿಗೆ ವಾಗ್ದಾನ ಮಾಡಿದರು.
ಉತ್ತರ ಪ್ರದೇಶದಲ್ಲಿ ಇನ್ನು ಗೂಂಡಾ ರಾಜ್ ಸಂಸ್ಕೃತಿ ನಿಲ್ಲಲಿದೆ. ಈ ಹಿಂದೆ, ಗೋರಖ್ ಪುರ ಕ್ಷೇತ್ರವು ಇಂಥ ಕ್ರಿಮಿನಲ್ ಘಟನೆಗಳಿಗೆ ಪ್ರಯೋಗಾಲಯ ಎಂಬಂತಾಗಿತ್ತು. ಇನ್ನು, ಇದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.
ರೈತರು ಕಾರ್ಮಿಕರ ಪರವಾಗಿ ಯಾರೂ ಗಮನ ಹರಿಸಿರಲಿಲ್ಲ. ಇನ್ನು ಮುಂದೆ ನಾನು ಅತ್ತ ಗಮನ ಹರಿಸುತ್ತೇನೆ ಎಂದು ಅವರು ಹೇಳಿದರು.