ಸಿಎಂ ಹುದ್ದೆಗೆ ಆಯ್ಕೆಯಾಗಿದ್ದು ಹೇಗೆ? ಯೋಗಿ ಆದಿತ್ಯನಾಥ್ ಬಿಚ್ಚಿಟ್ಟ ಸತ್ಯ
ಪ್ರಮಾಣವಚನ ಸ್ವೀಕರಿಸುವ ಒಂದು ದಿನದ ಮೊದಲೂ ನಾನು ಸಿಎಂ ಆಗಿ ಆಯ್ಕೆಯಾಗುತ್ತೇನೆ ಎಂದು ತಿಳಿದಿರಲಿಲ್ಲ, ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್
ಉತ್ತರಪ್ರದೇಶದ ಮುಖ್ಯಮಂತ್ರಿಗಳ ಅಭ್ಯರ್ಥಿಗಳ ರೇಸಿನಲ್ಲಿ ಯೋಗಿ ಆದಿತ್ಯನಾಥ್ ಹೆಸರು ಕೇಳಿ ಬರುತ್ತಿದ್ದರೂ, ಯೋಗಿಗಿಂತ ಇತರ ಮುಖಂಡರ ಹೆಸರು ಮಂಚೂಣಿಯಲ್ಲಿದ್ದವು. ಆದರೆ ಕೊನೆಗೆ, ಮೋದಿ ಮತ್ತು ಅಮಿತ್ ಶಾ ಅಂತಿಮಗೊಳಿಸಿದ್ದು ಯೋಗಿ ಆದಿತ್ಯನಾಥ್ ಹೆಸರನ್ನು.
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ ನೀಡಿರುವ ಯೋಗಿ, ಜನ ಮೆಚ್ಚುವ ಕೆಲಸವನ್ನು ಮಾಡುತ್ತಾ ಮುಂದೆ ಸಾಗುತ್ತಿದ್ದಾರೆ. ಈ ನಡುವೆ, ತಾನು ಹೇಗೆ ಸಿಎಂ ಆಗಿ ಆಯ್ಕೆಯಾದೆ ಎನ್ನುವ ವಿಚಾರವನ್ನು ಯೋಗಿ ಆದಿತ್ಯನಾಥ್ ವಿವರಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆ ನೀಡಿ ಎಂದು ವರಿಷ್ಠರ ಹಿಂದೆ ನಾನು ಬಿದ್ದವನಲ್ಲ, ಪ್ರಮಾಣವಚನ ಸ್ವೀಕರಿಸುವ ಒಂದು ದಿನದ ಮೊದಲೂ ನಾನು ಸಿಎಂ ಆಗಿ ಆಯ್ಕೆಯಾಗುತ್ತೇನೆ ಎಂದು ತಿಳಿದಿರಲಿಲ್ಲ ಎಂದು ಆದಿತ್ಯನಾಥ್ ಹೇಳಿದ್ದಾರೆ.
ಉತ್ತರಪ್ರದೇಶದ ಚುನಾವಣಾ ಫಲಿತಾಂಶದ ನಂತರ ವಿದೇಶ ಪ್ರವಾಸಕ್ಕೆ ತೆರಳಲು ಪ್ಲಾನ್ ನಡೆಸಿದ್ದ ಯೋಗಿಗೆ, ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆದು, ನಿಮ್ಮನ್ನು ಸಿಎಂ ಹುದ್ದೆಗೆ ಆಯ್ಕೆ ಮಾಡಿದ್ದೇವೆ ಅಂದಾಗಲೇ ನನಗೆ ವಿಷಯ ತಿಳಿದಿದ್ದು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇಂಡಿಯಾ ಟುಡೇ ಜೊತೆ ನಡೆಸಿದ ಸಂವಾದದಲ್ಲಿ ಮಾತನಾಡುತ್ತಿದ್ದ ಯೋಗಿ, ನಾನು ವಿದೇಶ ಪ್ರವಾಸಕ್ಕೆ ಹೋಗಬೇಕೆಂದಿದ್ದಾಗ ನನ್ನ ಪಾಸ್ಪೋರ್ಟ್ ಅನ್ನು ಪ್ರಧಾನಮಂತ್ರಿ ಕಾರ್ಯಾಲಯ ತಿರಸ್ಕರಿಸಿತ್ತು ಎನ್ನುವ ಮಾತನ್ನು ಯೋಗಿ ಹೇಳಿದ್ದಾರೆ. ಯೋಗಿ ಜೊತೆ ಸಂವಾದದ ಆಯ್ದ ಭಾಗಗಳು.
ಸುಷ್ಮಾ ಸ್ವರಾಜ್ ಕರೆ ಮಾಡಿದ್ದು
ಸಂಸದೀಯ ಮಂಡಳಿಯ ಕೆಲವು ಸದಸ್ಯರು ಪೋರ್ಟ್ ಆಫ್ ಸ್ಪೇನ್ ದೇಶಕ್ಕೆ ಹೋಗಬೇಕು. ಅಲ್ಲಿಗೆ ಹೋಗುವ ಸದಸ್ಯರಲ್ಲಿ ನೀವು ಕೂಡಾ ಒಬ್ಬರು. ಮಾರ್ಚ್ ಹದಿನಾಲ್ಕರಂದು ದೆಹಲಿಯಂದ ಪ್ರಯಾಣ ಆರಂಭಿಸಬೇಕಾಗಿದೆ ಎಂದು ಸುಷ್ಮಾ ಸ್ವರಾಜ್ ಮೇಡಂ ನನಗೆ ಮಾರ್ಚ್ ಮೊದಲ ವಾರದಲ್ಲಿ ಕರೆ ಮಾಡಿ ಹೇಳಿದರು - ಯೋಗಿ ಆದಿತ್ಯನಾಥ್.
ನನ್ನ ಪಾಸ್ಪೋರ್ಟ್ ರಿಜೆಕ್ಟ್ ಆಯಿತು
ಹೇಗೂ ಮಾರ್ಚ್ ಹನ್ನೊಂದರಂದು ಚುನಾವಣಾ ಫಲಿತಾಂಶ ಹೊರಬೀಳುವುದರಿಂದ ವಿದೇಶಕ್ಕೆ ತೆರಳೋಣ ಎಂದು ವೀಸಾಗೆ ಅರ್ಜಿ ಸಲ್ಲಿಸಲು ನನ್ನ ಪಾಸ್ಪೋರ್ಟ್ ಅನ್ನು ಪಿಎಂ ಕಚೇರಿಗೆ ಕಳುಹಿಸಿದ್ದೆ. ಆದರೆ ನನ್ನ ಪಾಸ್ಪೋರ್ಟ್ ಅನ್ನು ಪಿಎಂ ಸಚಿವಾಲಯ ಮಾರ್ಚ್ ಹತ್ತರಂದು ವಾಪಸ್ ಕಳುಹಿಸಿತು. ಯಾಕೆ ಹೀಗಾಯಿತು ಎನ್ನುವ ಗೊಂದಲ ಮತ್ತು ಬೇಸರದಲ್ಲಿ ನಾನಿದ್ದೆ - ಯೋಗಿ ಆದಿತ್ಯನಾಥ್.
ನನ್ನ ಬದಲು ಮತ್ತೊಬ್ಬ ಸಂಸದ ವಿದೇಶಕ್ಕೆ
ನನ್ನ ಬದಲಿಗೆ ಮತ್ತೊಬ್ಬ ಸಂಸದರು ವಿದೇಶಕ್ಕೆ ತೆರಳುತ್ತಿದ್ದಾರೆಂದು ಪಿಎಂ ಸಚಿವಾಲಯದ ಅಧಿಕಾರಿಗಳು ನನಗೆ ತಿಳಿಸಿದರು. ಈ ಹಿಂದೆ ಎರಡು ಬಾರಿ ವಿದೇಶಕ್ಕೆ ತೆರಳುವ ಅವಕಾಶ ನನಗಿದ್ದರೂ, ನಾನು ಪ್ರತಿನಿಧಿಸುವ ಕ್ಷೇತ್ರದಲ್ಲಿ ತುರ್ತಾದ ಕೆಲಸ ಇದ್ದಿದ್ದರಿಂದ ಹೋಗಿರಲಿಲ್ಲ. ಅಂದೇ ನಾನು ದೆಹಲಿಯಿಂದ ಗೋರಖಪುರಕ್ಕೆ ವಾಪಸ್ ತೆರಳಿದೆ ಎಂದು ಯೋಗಿ, ಇಂಡಿಯಾ ಟುಡೇ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.
ಉ.ಪ್ರ ಫಲಿತಾಂಶ, ಭಾರತದಲ್ಲೇ ಇರಲು ಸೂಚನೆ
ನನ್ನ ಕಚೇರಿಗೆ ವಾಪಸ್ ಬಂದಾಗ ಸುಷ್ಮಾ ಮೇಡಂ ಫೋನ್ ಮಾಡಿ, ಉತ್ತರಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುವುದರಿಂದ ನೀವು ಭಾರತದಲ್ಲೇ ಇರಬೇಕೆಂದು ಪ್ರಧಾನಿ ಸೂಚಿಸಿದ್ದಾರೆ. ಈ ಕಾರಣಕ್ಕಾಗಿ ನಿಮ್ಮ ಪಾಸ್ಪೋರ್ಟ್ ವಾಪಸ್ ಕಳುಹಿಸಲಾಗಿದೆ ಎಂದು ಮೇಡಂ ಹೇಳಿದರು - ಯೋಗಿ ಆದಿತ್ಯನಾಥ್.
ಹಬ್ಬದ ನಂತರ ದೆಹಲಿಗೆ ತೆರಳಿದೆ
ಹೋಳಿ ಹಬ್ಬದ ಆಚರಣೆಯ ನಂತರ ಬಿಜೆಪಿ ಸಂಸದೀಯ ಮಂಡಳಿಯ ಸಭೆಗೆ ಹಾಜರಾಗಲು ಮಾರ್ಚ್ ಹದಿನಾಲ್ಕು ಮತ್ತು ಹದಿನೈದರಂದು ದೆಹಲಿಗೆ ತೆರಳಿದೆ. ಆ ಸಮಯದಲ್ಲಿ ಬಿಜೆಪಿಯ ಹಲವು ಹಿರಿಯ ಮುಖಂಡರನ್ನು ಭೇಟಿಯಾಗುವ ಅವಕಾಶ ನನಗೆ ಸಿಕ್ಕಿತು. ನಮ್ಮ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಬಂದು ಭೇಟಿಯಾಗುವಂತೆ ಸೂಚಿಸಿದರು - ಯೋಗಿ ಆದಿತ್ಯನಾಥ್.
ದೆಹಲಿಗೆ ಬರುವಂತೆ ಸೂಚನೆ
ನಮ್ಮ ಅಧ್ಯಕ್ಷರ ಜೊತೆ ಚುನಾವಣೆಗೆ ಸಂಬಂಧಿಸಿದಂತೆ ಮಾತುಕತೆ ನಡೆಯಿತು. ಆ ನಂತರ ನಾನು ಗೋರಖಪುರಕ್ಕೆ ತೆರಳಿದೆ. ಮಾರ್ಚ್ ಹದಿನೇಳರಂದು ಬೆಳಗ್ಗೆ ಮತ್ತೆ ಅಮಿತ್ ಶಾ ಕರೆಮಾಡಿ ತಕ್ಷಣ ದೆಹಲಿಗೆ ಬರುವಂತೆ ಸೂಚಿಸಿದರು. ದೆಹಲಿಗೆ ಬರಲು ಅನುಕೂಲವಾಗುವಂತೆ ಹೆಲಿಕಾಪ್ಟರ್ ಅನ್ನು ಪಕ್ಷ ಕಳುಹಿಸಿತ್ತು.
ಸಿಎಂ ಆದ ಹಿಂದಿನ ಕಥೆ
ಅಮಿತ್ ಶಾ ಅವರನ್ನು ನಾನು ಭೇಟಿಯಾದಾಗ ಈ ತಕ್ಷಣವೇ ಲಕ್ನೋಗೆ ತೆರಳಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಎಂದು ಅಮಿತ್ ಶಾ ಸೂಚಿಸಿದರು. ಒಂದು ಜೊತೆ ಹೆಚ್ಚುವರಿ ಬಟ್ಟೆ ಕೂಡಾ ನನ್ನಲ್ಲಿರಲಿಲ್ಲ. ಲಕ್ನೋದಲ್ಲಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಭಾಗವಹಿಸಿ, ಮರುದಿನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದೆ ಎಂದು ಯೋಗಿ ಆದಿತ್ಯನಾಥ್ ಕೆಲವು ತಿಂಗಳ ಹಿಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.