ಭಾರತ ಭೂಪಟ ತಪ್ಪಾಗಿ ಪ್ರಕಟಿಸಿದರೆ ಶಿಕ್ಷೆಯಂತೆ, ಏಕೆ?
ನವದೆಹಲಿ, ಮೇ 06: ಭಾರತದ ನಕಾಶೆಯಲ್ಲಿ ಸ್ವಲ್ಪವೂ ಲೋಪವಾಗದಂತೆ ಪ್ರಕಟಿಸುವುದು ಎಲ್ಲರ ಕರ್ತವ್ಯವಾಗಿದೆ. ವಿವಾದಿತ ತಾಣಗಳೆಂದು ಪರಿಗಣಿಸಿರುವ ಪ್ರದೇಶಗಳನ್ನು ನಕಾಶೆಯಿಂದ ತೆಗೆದು ಹಾಕಿದರೆ ದಂಡಾರ್ಹ ಅಪರಾಧವಾಗುತ್ತದೆ. ನಕಾಶೆ ತಿದ್ದಿದ್ದರೆ ಅಂಥ ವ್ಯಕ್ತಿ ಅಥವಾ ಸಂಸ್ಥೆಗೆ ನೂರು ಕೋಟಿ ರು ತನಕ ದಂಡ ಹಾಗೂ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇಂಥದ್ದೊಂದು ಕಾನೂನನ್ನು ಕೇಂದ್ರ ಸರ್ಕಾರ ರೂಪಿಸಿದೆ.
ಕೇಂದ್ರ ಸರ್ಕಾರ ಭೌಗೋಳಿಕ ಮಾಹಿತಿ ನಿಯಂತ್ರಣ ಮಸೂದೆ (ಜಿಯೋ ಸ್ಪೇಷಿಯಲ್ ಇನ್ಪಾಮೇಷನ್ ರೆಗ್ಯುಲೇಟರಿ ಬಿಲ್) ಕರಡು ಪ್ರತಿಯನ್ನು ಸಿದ್ಧವಾಗಿದ್ದು, ಈ ಮಸೂದೆಗೆ ಸಂಸತ್ನಲ್ಲಿ ಅಂಗೀಕಾರ ದೊರೆಯಬೇಕಿದೆ.
ಒಮ್ಮೆ ಕಾನೂನು ಜಾರಿಗೊಂಡರೆ ಭಾರತದ ಭೂಪಟವನ್ನು ತಪ್ಪಾಗಿ ಮುದ್ರಿಸುವ, ಪ್ರಕಟಿಸುವ ಹಾಗೂ ಪ್ರಸರಣಗೊಳಿಸುವ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಈ ಮಸೂದೆ ಪ್ರಿಂಟ್ ಮಾಧ್ಯಮ ಮಾತ್ರವಲ್ಲದೆ ಅಂತರ್ಜಾಲ, ಸಾಮಾಜಿಕ ಜಾಲ ತಾಣಗಳಿಗೂ ಅನ್ವಯಿಸುತ್ತದೆ. ಲೋಪವಿರುವ ನಕಾಶೆಯನ್ನು ಹಂಚಿದರೂ ಸೈಬರ್ ಕ್ರೈಮ್ ಪೊಲೀಸರ ಕಣ್ಣಿಗೆ ಬೀಳುತ್ತೀರಿ ಎಚ್ಚರ!
ಏಕೆ ಇಷ್ಟು ಕಠಿಣ ಕ್ರಮ: ಇತ್ತೀಚೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ಲೋಕೇಶನ್ನಲ್ಲಿ ಜಮ್ಮು-ಕಾಶ್ಮೀರದ ಕೆಲ ಭಾಗಗಳು ಪಾಕಿಸ್ತಾನಕ್ಕೆ ಸೇರಿದ್ದು ಎಂದು ತೋರಿಸಲಾಗಿತ್ತು. ಈ ಪ್ರಮಾದವನ್ನು ಸಾರ್ವಜನಿಕರು ಟ್ವಿಟ್ಟರ್ ಗಮನಕ್ಕೆ ತಂದು ಸರಿಪಡಿಸಿದ್ದರು. ಅರುಣಾಚಲ ಪ್ರದೇಶವನ್ನು ಒಳಗೊಂಡ ಚೀನಾ ಭೂಪಟದ ಚಿತ್ರ ಕೂಡಾ ಅಂತರ್ಜಾಲದಲ್ಲಿ ಹರಿದಾಡಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಇದಲ್ಲದೆ, ಉಪಗ್ರಹದಿಂದ ಬಂದ ಚಿತ್ರ, ವಿಮಾನ, ಬಲೂನ್, ಡ್ರೋನ್ ಅಥವಾ ಬಾಹ್ಯಾಕಾಶ ನೌಕೆಯಿಂದ ಭಾರತದ ಯಾವುದೇ ಭಾಗದ ಫೋಟೋ, ನಕ್ಷೆಗಳನ್ನು ಸಂಗ್ರಹಿಸುವುದಕ್ಕೂ ಕೇಂದ್ರ ಸರ್ಕಾರ ಕಡಿವಾಣ ಹಾಕಲು ಮುಂದಾಗಿದೆ.