ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?
ನೀರ ಮೇಲಿನ ಗುಳ್ಳೆ ನಿಜವಲ್ಲ ಹರಿಯೇ,,, ಎಂಬ ಹಾಡನ್ನು ಕೇಳಿಕೊಂಡು ಬೆಳೆದವರು ನಾವು. ಆದರೆ ಇಂದು ನೀರೆ ಶಾಶ್ವತವಲ್ಲ, ಜೀವ ಜಲವೇ ಎಲ್ಲಿ ಮರೆಯಾದೆ ಎಂದು ಹಾಡಬೇಕಾಗಿದೆ.
ಇದೆಲ್ಲ ನಾವೇ ಮಾಡಿಕೊಂಡ ಕರ್ಮ. ಅರಣ್ಯ ನಾಶ, ಟಾರು ರಸ್ತೆಗಳು, ಬಹುಮಹಡಿ ಕಟ್ಟಡಗಳ ನಿರ್ಮಾಣ ಹೇಳುತ್ತಾ ಹೋದರೆ ಮುಗಿಯುವುದಿಲ್ಲ. ಕೆರೆಗಳನ್ನು ನುಂಗಿ ನೀರು ಕುಡಿದ ನಮಗೆ ಇಂದು ಗುಟುಕು ನೀರಿಗೆ ಹಾಹಾಕಾರ ಶುರುವಾಗಿದೆ.
ಇಂದು ವಿಶ್ವ ಜಲದಿನ ಅಂಥ ಹೇಳಿದ ತಕ್ಷಣ ಮನೆಯ ಬಾತ್ ರೂಂ ನಲ್ಲಿ ಬಂದ್ ಮಾಡಿ ಬಂದಿದ್ದೇನೆಯೇ ಎಂದು ಮತ್ತೊಮ್ಮೆ ಫೋನ್ ಮಾಡಿ ಖಾತರಿ ಪಡಿಸಿಕೊಂಡೆ. ಇಷ್ಟಾದರೂ ಜಾಗ್ರತಿ ತೋರಿಸಿದೆನಲ್ಲ ಎಂಬ ಸಮಾಧಾನ ಮನಸಿಗೆ.[ಕುಡಿಯುವ ನೀರು ಕೇಳಿದ ರೈತರಿಗೆ ಲಾಠಿ ಏಟು]
ಕುಡಿಯಲು ನೀರಿಲ್ಲ, ಅನೇಕ ದೇಶಗಳು ನೀರಿನ ಸಮಸ್ಯೆ ಎದುರಿಸುತ್ತಿವೆ. ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ, ಅಣೆಕಟ್ಟು ನಿರ್ಮಾಣಕ್ಕೆ ಜನರ ಒತ್ತಾಯ, ಖಾಲಿ ಕೊಡ ಪ್ರದರ್ಶನ, ಕಡಿಮೆಯಾದ ನೀರಿನ ಮೂಲದ ಬಗ್ಗೆ ಸಮೀಕ್ಷೆ... ಈ ಬಗೆಯ ವರದಿಗಳು ಪ್ರತಿದಿನ ಪತ್ರಿಕೆಯಲ್ಲಿ ಸಾಮಾನ್ಯ. ಅದರ ಬಗ್ಗೆ ಚಿಂತಿಸುವುದು ಬೇಡ ಎನ್ನುವುದೇ ನನ್ನ ಅನಿಸಿಕೆ.['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
ನಮಗೆ ಕೊಳವೆ ಬಾವಿಗಳ ಕತೆ ಗೊತ್ತಿಲ್ಲ. 600 ಅಡಿ ತೆಗೆದರೂ ನೀರು ಬಂದಿಲ್ಲ, 1200 ಅಡಿ ತೆಗೆದರೂ ನೀರು ಬಂದಿಲ್ಲ ಎಂದು ಕೋಲಾರ, ಚಿಕ್ಕಬಳ್ಳಾಪುರದ ಸ್ನೇಹಿತರು ಹೇಳುತ್ತಿದ್ದದನ್ನು ಕೇಳಿ ಒಂದು ಕ್ಷಣ ದಿಗ್ಭ್ರಮೆಯಾಗುತ್ತಿತ್ತು. ನಮ್ಮ ಊರಿನಲ್ಲಿ ಮೊದಲೆಲ್ಲ 20 ರಿಂದ 25 ಅಡಿ (ಶಿರಸಿ) ಬಾವಿಯನ್ನೋ, ಕೆರೆಯನ್ನೋ ತೆಗೆದರೆ ಸಾಕಷ್ಟು ನೀರು ಉಕ್ಕುತ್ತಿತ್ತು. ಆದರೆ ಈಗ 40 ಅಡಿ ತೆಗೆಯಬೇಕಿದೆ.[ಬಂಗಾರಪೇಟೆಯ 4 ಗ್ರಾಮಗಳಿಗೆ ನೀರಿನ ತಲೆಬಿಸಿ ಇಲ್ಲ]
ಲೆಕ್ಕಹಾಕಿದರೆ ಅಂತರ್ಜಲ ಬರೋಬ್ಬರಿ 20 ಅಡಿ ಕೆಳಕ್ಕೆ ಜಾರಿದೆ. ಇದಕ್ಕೆ ಕಾರಣ ನಾವೇ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಮಲೆನಾಡಲ್ಲೇ ಇಂಥ ಕತೆಯಾದರೆ ಬಾಕಿಯವರ ಪರಿಸ್ಥಿತಿ? ನೆನೆಸಿಕೊಂಡರೆ ಭಯವಾಗುತ್ತದೆ. ಹೌದಲ್ಲ.. ಜೀವ ಜಲಕ್ಕೆ ಇಂಥ ಸ್ಥಿತಿ ಅದು ಹೇಗೆ ಬಂದು ಒದಗಿತು?
ಕರ್ನಾಟಕದ 126 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಈಗಾಗಲೇ ಸರ್ಕಾರವೇ ವರದಿ ನೀಡಿದೆ. ಕೋಲಾರ-ಚಿಕ್ಕಬಳ್ಳಾಪುರದ ರೈತರು ಕುಡಿವ ನೀರಿಗೆ ಆಗ್ರಹಿಸಿ ರಾಜಧಾನಿಗೆ ಬಂದು ಪೊಲೀಸರಿಂದ ಲಾಠಿ ಏಟನ್ನು ತಿಂದಿದ್ದಾರೆ. ಅತ್ತ ಕಳಸಾ ಬಂಡೂರಿಗಾಗಿ ನಿರಂತರ ಹೋರಾಟ ನಡೆಯುತ್ತಿದೆ. ಮೂರನೇ ಮಹಾಯುದ್ಧವಾದರೆ ಅದು ಕುಡಿಯುವ ನೀರಿಗಾಗಿಯೇ ಎಂದು ಹೇಳಿದ್ದು ಎಷ್ಟು ಸತ್ಯ ಅಲ್ಲವೇ?[ಬೇಸಿಗೆ ದಾಹ ನೀಗಿಸುವ ಕೋಲ್ಡ್ ಪ್ರಿಯರ ಮಣ್ಣಿನ ಫ್ರಿಡ್ಜ್..!]
ಕುಡಿಯುವ ನೀರಿನ ಹಾಹಾಕಾರವನ್ನು ನಿಲ್ಲಿಸಲು ಒಂದು ದಿನದಲ್ಲಿ ಸಾಧ್ಯವಿಲ್ಲ. ಬೆಂಗಳೂರಲ್ಲಿ ಅಳಿದುಳಿದ ಕರೆಗಳಿಗೆ ಮರುಪೂರಣ ಆಗಬೇಕು. ಮಳೆ ನೀರು ಕೊಯ್ಲು ಕಡ್ಡಾಯವಾಗಬೇಕು. ಈ ಕ್ರಮಗಳು ನಗರದಲ್ಲಿ ಚಾಚೂ ತಪ್ಪದೆ ಜಾರಿಯಾಗಬೇಕು.[ಕೆಆರ್ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ!]
ಇನ್ನು ಗ್ರಾಮೀಣ ಭಾಗದಲ್ಲಿ ಇಂಗುಗುಂಡಿಗಳ ನಿರ್ಮಾಣ ಆಗಬೇಕು. ನಿಜವಾಗಿ ಸರ್ಕಾರ ನೀಡಿದ ಯೋಜನೆಗಳ ಅನುಷ್ಠಾನ ಯಾವ ಹಂತದಲ್ಲಿದೆ ಎಂಬುದನ್ನು ಲೆಕ್ಕ ಹಾಕಬೇಕು . ಹೊಸದಾಗಿ ಹೇಳುವುದು ಏನು ಉಳಿದಿಲ್ಲ. ಇರುವ ಅರಣ್ಯ ಕಾಪಾಡಿಕೊಂಡರೆ ಮಾತ್ರ ಮಳೆ, ಮಳೆಯಾದರೆ ಮಾತ್ರ ,ಜೀವ ಜಲ. ನೀರಿಗಾಗಿ ಮೂರನೇ ಹಾಯುದ್ಧ ಆಗದಂತೆ ತಡೆಯವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ