3 ವರ್ಷ ಪೂರೈಸಿದ ಮೋದಿಗೆ ಕಾಂಗ್ರೆಸ್ ವಿಶೇಷ ಉಡುಗೊರೆ!
ನವದೆಹಲಿ, ಮೇ 16 : ನರೇಂದ್ರ ಮೋದಿ ಸರಕಾರ ಮೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ಅದೇನೆಂದರೆ, ಮೋದಿ ಅವರ ಮೇಲೆ ವೈಯಕ್ತಿಕ ದಾಳಿ ಮಾಡದಿರುವುದು.
ಇದು ನಿಜಕ್ಕೂ ಸ್ವಾಗತಾರ್ಹ ನಿರ್ಧಾರ. ಏಕೆಂದರೆ, ನರೇಂದ್ರ ಮೋದಿ ಅವರ ಮೇಲೆ ವೈಯಕ್ತಿಕ ದಾಳಿ ಮಾಡಿದ್ದರಿಂದ ಕಳೆದ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಭಾರೀ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ ನಡೆಸಲಾದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಬದಲಾಗಿ, ಈ ಮೂರು ವರ್ಷಗಳಲ್ಲಿ ಮೋದಿ ಸರಕಾರ ತೆಗೆದುಕೊಂಡಿರುವ ನಿರ್ಣಯಗಳು, ವಿಫಲಗೊಂಡಿರುವ ಯೋಜನೆಗಳು, ಜನರನ್ನು ತೊಂದರೆಗೆ ಸಿಲುಕಿಸಿರುವ ನೀತಿಗಳ ವಿರುದ್ಧ ಟೀಕಾಪ್ರಹಾರ ಮಾಡಲು ಒಗ್ಗಟ್ಟಿನಿಂದ ನಿರ್ಧಾರಕ್ಕೆ ಬಂದಿದೆ. [ಯಾವ ಸಾಧನೆಗೆ ಈ ಸಂಭ್ರಮ?: ಕೇಂದ್ರಕ್ಕೆ ರಾಹುಲ್ ಪ್ರಶ್ನೆ]
ಇತ್ತೀಚೆಗೆ ನಡೆದ ಉತ್ತರಪ್ರದೇಶ ಸೇರಿದಂತೆ 5 ರಾಜ್ಯಗಳಿಗೆ ನಡೆಸಲಾಗಿದ್ದ ಚುನಾವಣೆಯಲ್ಲಿ ಮೋದಿಯವರ ಮೇಲೆ ಕಾಂಗ್ರೆಸ್ ನಾಯಕರು ಹಲವಾರು ಬಾರಿ ವೈಯಕ್ತಿಕ ದಾಳಿ ನಡೆಸಿದ್ದರು. ಆದರೆ, ಎಲ್ಲವೂ ತಿರುಗುಬಾಣವಾಗಿ ಉತ್ತರಪ್ರದೇಶ ಮತ್ತು ಉತ್ತರಾಖಂಡ್ ದಲ್ಲಿ ಭಾರೀ ಸೋಲು ಅನುಭವಿಸಬೇಕಾಯಿತು ಎಂಬುದು ಅವರ ಅರಿವಿಗೆ ಬಂದಿದೆ.
2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಮತ್ತು ಏರುತ್ತಿರುವ ನರೇಂದ್ರ ಮೋದಿ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ಮೊದಲಿನ ಲಯಕ್ಕೆ ಬರಲು ಹಲವಾರು ಯೋಜನೆಗಳನ್ನು, ತಂತ್ರಗಾರಿಕೆಯನ್ನು ರೂಪಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಮೋದಿಯವರ ಜನಪ್ರಿಯತೆಯ ಗ್ರಾಫ್ ದಿನದಿಂದ ದಿನಕ್ಕೆ ಮೇಲೇರುತ್ತಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಅವರು ಸರ್ವಮಾನ್ಯ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಕಾಂಗ್ರೆಸ್ಸಿಗೆ ಇದು ಭರಿಸಲಾಗದ ತಲೆನೋವಾಗಿದ್ದರೆ, ರಾಹುಲ್ ಗಾಂಧಿ ಅವರ ಕುಗ್ಗುತ್ತಿರುವ ಜನಪ್ರಿಯತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. [ತಾವೂ ಮುಳುಗಿ ಎಸ್ಪಿಯನ್ನೂ ಮುಳುಗಿಸಿದ ರಾಹುಲ್!]
ಹೀಗಾಗಿ, ಕಾಂಗ್ರೆಸ್ ಮಾಧ್ಯಮ ಕೇಂದ್ರದ ಮುಖ್ಯಸ್ಥ ರಣದೀಪ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್ ಸೇರಿದಂತೆ ಯುವನೇತಾರರ ಪಡೆಯನ್ನು ರಚಿಸಲಾಗಿದೆ. ಈ ತಂಡದಲ್ಲಿ ಇತ್ತೀಚೆಗೆ ಸೋಷಿಯಲ್ ಮೀಡಿಯಾ ಹೆಡ್ ಆಗಿರುವ ಮಾಜಿ ಸಂಸದೆ ರಮ್ಯಾ ಅವರು ಕೂಡ ಸೇರಿಕೊಂಡಿದ್ದಾರೆ.
ಮೋದಿಯನ್ನು ಕಟ್ಟಿಹಾಕುವುದು ಹೇಗೆ ಎಂಬ ಚಿಂತನೆಯಲ್ಲಿ ತೊಡಗಿದ್ದಾರೆ. ಇತರ ವಿರೋಧ ಪಕ್ಷಗಳೊಂದಿಗೆ ಕೈಜೋಡಿಸುವ ಕಾಯಕದಲ್ಲಿಯೂ ಮುಳುಗಿದ್ದಾರೆ ಕಾಂಗ್ರೆಸ್ ನಾಯಕರು. ಸದ್ಯಕ್ಕೆ ಕಾಂಗ್ರೆಸ್ಸಿಗೆ ಎದುರಾಗಿರುವ ಸವಾಲೇನೆಂದರೆ ರಾಷ್ಟ್ರಪತಿ ಚುನಾವಣೆ. [ಇವರನ್ನು ರಾಷ್ಟ್ರಪತಿ ಹುದ್ದೆಗೆ ಮೋದಿ ಏಕೆ ಆರಿಸಲಿಕ್ಕಿಲ್ಲ?]
{promotion-urls}