ಪೊಲೀಸ್ ಠಾಣೆ ಒಳಹೊಕ್ಕರೂ ಆಕೆಯನ್ನು ಕೊಂದ ದುರುಳ
ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಹೋಯ್ತು ಮಹಿಳೆಯೊಬ್ಬಳ ಪ್ರಾಣ; ಪೊಲೀಸ್ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಿಎಂ ಯೋಗಿ ಆದಿತ್ಯನಾಥ್ ನಿರ್ಧಾರದ ಬೆನ್ನಲ್ಲೇ ನಡೆಯಿದು ಠಾಣೆಯಲ್ಲಿ ಕೊಲೆ!!
ಮೈನ್ ಪುರಿ, ಏಪ್ರಿಲ್ 18: ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಗಲಾಟೆಯೊಂದರಲ್ಲಿ ಸಿಲುಕಿ, ತನ್ನನ್ನು ಕೊಲ್ಲಲು ಬಂದ ಹಂತಕನಿಂದ ಪ್ರಾಣ ಉಳಿಸಿಕೊಳ್ಳಲು ಓಡಿದ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಹೊಕ್ಕರೂ ಆಕೆಗೆ ರಕ್ಷಣೆ ಸಿಗದಂಥ ಘಟನೆ ಮೈನ್ ಪುರಿಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮೈನ್ ಪುರಿಯ ಪೊಲೀಸ್ ಠಾಣೆಯ ಬಳಿಯಲ್ಲೇ ಇರುವ ಮಾರುಕಟ್ಟೆಯಲ್ಲಿನ ಜಾಗವೊಂದು ವಿವಾದದ ಕೇಂದ್ರ ಬಿಂದು. ಈ ಜಾಗಕ್ಕಾಗಿ ಎರಡು ಕುಟುಂಬದವರು ಮಂಗಳವಾರ ಪರಸ್ಪರ ಜಗಳವಾಡುತ್ತಿದ್ದರು.
ಆಗ, ಒಂದು ಗುಂಪಿನ ಮಹಿಳೆಯ ಮೇಲೆ ವಿರೋಧಿ ಗುಂಪಿನ ಯುವಕನೊಬ್ಬ ತನ್ನಲ್ಲಿದ್ದ ಪಿಸ್ತೂಲು ತೆಗೆದು ಗುಂಡು ಹಾರಿಸಲು ಮುಂದಾದ. ಆಗ, ಅಲ್ಲಿಂದ ಓಡಿದ ಆಕೆ, ಹತ್ತಿರದಲ್ಲೇ ಇದ್ದ ಪೊಲೀಸ್ ಠಾಣೆ ನುಗ್ಗಿ ಪೊಲೀಸರನ್ನು ರಕ್ಷಿಸಲು ಕೇಳಿಕೊಂಡಿದ್ದಾಳೆ.
ಹಾಗೆ ಮಹಿಳೆ ನುಗ್ಗಿದ್ದನ್ನು ನೋಡಿ ಕಕ್ಕಾಬಿಕ್ಕಿಯಾದ ಪೊಲೀಸರು ಮುಂದೇನು ಮಾಡಬೇಕೆನ್ನುವಷ್ಟರಲ್ಲಿ ಹಿಂದೆ ಓಡಿಬಂದ ಆ ಯುವಕ ಹಾಗೂ ಆತನ ಜತೆಯಲ್ಲೇ ಆಗಮಿಸಿದ ಕೆಲವಾರು ಮಂದಿ ಪೊಲೀಸರು ಕದಲದಂತೆ ಸುತ್ತುವರಿದಿದ್ದಾರೆ. ಅಷ್ಟರಲ್ಲಿ ಪಿಸ್ತೂಲು ಹಿಡಿದಿದ್ದ ಯುವಕ ಆಕೆಯ ಮೇಲೆ ಪಾಯಿಂಟ್ ಬ್ಲಾಂಕ್ ರೇಂಜ್ ನಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಿಯೇಬಿಟ್ಟಿದ್ದಾನೆ.
ಆದರೆ, ಈ ಇಡೀ ದೃಶ್ಯಕ್ಕೆಸಾಕ್ಷಿಯಾದ ಮಾರುಕಟ್ಟೆಯಲ್ಲಿದ್ದ ಜನರು ರೊಚ್ಚಿಗೆದ್ದು ಕೊಲೆಗಾರ ಹಾಗೂ ಆತ ಜತೆಗಿದ್ದ ಯುವಕರನ್ನು ಹಿಗ್ಗಾ ಮುಗ್ಗಾ ಥಳಿಸಿ, ಹಣ್ಣುಗಾಯಿ ನೀರುಗಾಯಿ ಮಾಡಿದ್ದಾರೆ. ಇದರ ಜತೆಯಲ್ಲೇ, ಪೊಲೀಸರು ತಮ್ಮನ್ನು ಜನ ಸುತ್ತುವರೆಯುತ್ತಲೇ ಸುಮ್ಮನಾಗಿದ್ದಕ್ಕೆ ಭಾರೀ ಪ್ರತಿಭಟನೆ ವ್ಯಕ್ತವಾಗಿದೆ.