ಬುಲಂದ್ ಶಹರ್ ನಲ್ಲಿ ಬಿಜೆಪಿ ನಾಯಕರಿಗೆ ಬಿಸಿ ತಾಗಿಸಿದ ಲೇಡಿ ಆಫೀಸರ್
ಬುಲಂದ್ ಶಹರ್ (ಉತ್ತರಪ್ರದೇಶ), ಜೂನ್ 26: ರಾಜಕಾರಣಿಗಳು ಹಾಗೂ ಅವರ ನಿಕಟವರ್ತಿಗಳಿಗೆ ಕಾನೂನು ಲಾಗೂ ಆಗಲ್ಲ ಎಂಬುದು ಜನ ಸಾಮಾನ್ಯರ ಮಧ್ಯೆ ಇರುವ ನಂಬಿಕೆ. ಆದರೆ ಅಂಥ ನಂಬಿಕೆಗೆ ವಿರುದ್ಧವಾದ ಘಟನೆಗಳು ಸಂಭವಿಸುತ್ತಿರುತ್ತವೆ. ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ನಡೆದ ಈ ಘಟನೆಯನ್ನೇ ಉದಾಹರಣೆಗೆ ತೆಗೆದುಕೊಳ್ಳಿ.
ಇಲ್ಲಿನ ಪೊಲೀಸ್ ಅಧಿಕಾರಿ ಶ್ರೇಷ್ಠ ಠಾಕೂರ್ ಜತೆಗೆ ವಾಗ್ವಾದಕ್ಕಿಳಿದ ಬಿಜೆಪಿ ಮುಖಂಡರ ವಿಡಿಯೋವೊಂದು ಬಹಳ ಚರ್ಚೆಯಾಗುತ್ತಿದೆ. ಸರಿಯಾದ ದಾಖಲೆ ಇಲ್ಲದೆ ಮೋಟಾರ್ ಬೈಕ್ ಸಹಿತ ಸಿಕ್ಕಿಬಿದ್ದ ಪ್ರಮೋದ್ ಲೋಧಿ ಎಂಬ ಮುಖಂಡ ಅಧಿಕಾರಿ ಶ್ರೇಷ್ಠ ಸೇರಿದ ಹಾಗೆ ಇತರ ಅಧಿಕಾರಿಗಳ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ.
ಬಂಟ್ವಾಳದ ಕ್ರಿಮಿನಲ್ ಗಳಿಗೆ ಭಯಹುಟ್ಟಿಸಿದ ಎಸ್ಪಿ ಅಣ್ಣಾಮಲೈ
ತಕ್ಷಣ ಆತನನ್ನು ಬಂಧಿಸಿ, ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಆದರೆ ಬಿಜೆಪಿ ನಾಯಕರು ಹೇಳುವ ಪ್ರಕಾರ ಲೋಧಿಗೆ ಪೊಲೀಸರು ಹದಿನೈದು ಬಾರಿ ಕಪಾಳಕ್ಕೆ ಹೊಡೆದಿದ್ದಾರೆ. ಕೋರ್ಟ್ ನ ಹೊರಗೆ ಸೇರಿದ ಬಿಜೆಪಿ ಕಾರ್ಯಕರ್ತರು ಶ್ರೇಷ್ಠ ಠಾಕೂರ್ ಜತೆಗೆ ವಾಗ್ವಾದ ನಡೆಸಿದ್ದಾರೆ.
ನೀವು ಸಿಎಂ ಕಚೇರಿಗೆ ಹೋಗಿ, ಅಲ್ಲಿಂದ ಲಿಖಿತ ಆದೇಶ ತಂದುಬಿಡಿ. ಪೊಲೀಸರು ಆಗ ನಿಮ್ಮ ವಾಹನಗಳ ತಪಾಸಣೆ ಮಾಡುವುದಿಲ್ಲ. ಆಗ ಅದು ನಮ್ಮ ಕೆಲಸ ಅಲ್ಲ ಅಂದುಕೊಂಡು ಸುಮ್ಮನಾಗ್ತೀವಿ ಎಂದು ಆಕೆ ಬಿಜೆಪಿ ಕಾರ್ಯಕರ್ತರಿಗೆ ಹೇಳಿದ್ದಾರೆ. ಸಾರ್ವಜನಿಕವಾಗಿ ಅನುಚಿತ ವರ್ತನೆ ಮಾಡಿದರೆ ನಿಮ್ಮ ವಿರುದ್ಧವೂ ದೂರು ದಾಖಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ದಕ್ಷ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಲ್ಲಿ ಉಳಿಗಾಲವಿಲ್ಲವೇ?
ಲೋಧಿ ಬಳಿ ಎರಡು ಸಾವಿರ ಲಂಚ ಕೇಳಿದ್ದಾರೆ. ಕೊಡದಿದ್ದಾಗ ಬಂಧಿಸಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಅದಕ್ಕೆ ಉತ್ತರಿಸಿದ ಶ್ರೇಷ್ಠ, ಅದೇ ರೀತಿ ಸಾವಿರಾರು ಜನರ ವಾಹನಗಳ ದಾಖಲೆ ಪರಿಶೀಲನೆ ಮಾಡಲಾಗಿದೆ. ಅವರ್ಯಾರಿಗೂ ಆಗದ ಸಮಸ್ಯೆ ಲೋಧಿಗೆ ಹೇಗಾಯಿತು ಎಂದು ಪ್ರಶ್ನಿಸಿದ್ದಾರೆ.