ಕತ್ತೆ ಮೇಲೆ ಕೂರಿಸಿ ಮಹಿಳೆ ಬೆತ್ತಲೆ ಮೆರವಣಿಗೆ
ರಾಜಸ್ಥಾನ, ನ.11 : ಹತ್ತಿರದ ಸಂಬಂಧಿಯನ್ನು ಕೊಲೆ ಮಾಡಿದ್ದಾಳೆಂದು ಆರೋಪಿಸಿ 50 ವರ್ಷದ ಮಹಿಳೆಯನ್ನು ಕತ್ತೆ ಮೇಲೆ ಕೂರಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಸಂಗ ರಾಜಸ್ಥಾನದಲ್ಲಿ ವರದಿಯಾಗಿದೆ. ಗ್ರಾಮದ 'ಕಾಂಗರೂ ಕೋರ್ಟ್' ಇಂಥದ್ದೊಂದು ಕೆಟ್ಟ ತೀರ್ಮಾನ ನೀಡಿದ್ದು ಇದಕ್ಕೆ ಸಂಬಂಧಿಸಿ 39 ಜನರನ್ನು ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು ದಕ್ಷಿಣ ರಾಜಸ್ಥಾನದ ರಾಜ್ಸ್ ಮಂಡ್ ಜಿಲ್ಲೆಯಲ್ಲಿ ಶನಿವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಸ್ವಯಂ ಘೋಷಿತ ಕೋರ್ಟ್ ಈ ತೀರ್ಮಾನ ನೀಡಿದ್ದು ಆಕೆಯ ಕೂದಲನ್ನು ಕತ್ತರಿಸಿ ಕತ್ತೆ ಮೇಲೆ ಮೆರವಣಿಗೆ ಮಾಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆ ತನ್ನ ಭಾಮೈದ ನನ್ನು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[2 ಲಕ್ಷಕ್ಕೆ ಬೆಳಗಾವಿ ಮಗು ರಾಜಸ್ಥಾನದಲ್ಲಿ ಮಾರಾಟ]
ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಅತ್ತಿಗೆ ತನ್ನ ಗಂಡನನ್ನು ಕೊಲೆ ಮಾಡಲಾಗಿದೆ. ಇದಕ್ಕೆ ಮಹಿಳೆಯೆ ಕಾರಣ ಎಂದು ಕಾಂಗರೂ ಕೋರ್ಟ್ ಗೆ ದೂರು ನೀಡಿದ್ದಳು. ಇದನ್ನು ಗಣನೆಗೆ ತೆಗೆದುಕೊಂಡ ಒಂದು ಗುಂಪು ಮಹಿಳೆಯನ್ನು ದೋಷಿ ಎಂದು ತೀರ್ಮಾನಿಸಿ ಬೆತ್ತಲೆ ಮೆರವಣಿಗೆ ಮಾಡುವಂತೆ ಆದೇಶ ನೀಡಿದೆ. ಘಟನೆ ನಂತರ ಮಹಿಳೆ ಗಂಡ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಆಕೆಯ ಕುಟುಂಬದವರು ಸೇರಿದಂತೆ 39 ಜನರನ್ನು ಬಂಧಿಸಲಾಗಿದೆ.[ರಾಜಸ್ಥಾನದಲ್ಲಿ ಅತ್ಯಾಚಾರ, ಮುಂದೇನಾಯ್ತೆಂದರೆ..]
ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು ಅನೇಕರು ಕ್ರಿಮಿನಲ್ ಹಿನ್ನಲೆ ಉಳ್ಳವರಾಗಿದ್ದಾರೆ. ಭಾರತೀಯ ದಂಡ ಸಂಹಿತೆ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆ ಶಾಕ್ ಗೆ ಒಳಗಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಸುಧೀರ್ ಜೋಷಿ ತಿಳಿಸಿದ್ದಾರೆ.