ತ್ರಿವಳಿ ತಲಾಖ್ ನೀಡಿದರೆ ಸಾಮಾಜಿಕ ಬಹಿಷ್ಕಾರ: ಮುಸ್ಲಿಂ ಕಾನೂನು ಮಂಡಳಿ
ತ್ರಿವಳಿ ತಲಾಖ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನಲ್ಲಿ ಸೋಮವಾರ ಹೊಸ ಅಫಿಡವಿಟ್ ಸಲ್ಲಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತ್ರಿಪಲ್ ತಲಾಖ್ ನೀಡುವವರಿಗೆ ಸಮಾಜದಿಂದ ಬಹಿಷ್ಕಾರ ಹಾಕುವುದಾಗಿ ತಿಳಿಸಿದೆ.
ನವದೆಹಲಿ, ಮೇ 22: ತ್ರಿವಳಿ ತಲಾಖ್ ವಿಚಾರಣೆ ವೇಳೆ ಸುಪ್ರೀಂ ಕೋರ್ಟಿನಲ್ಲಿ ಸೋಮವಾರ ಹೊಸ ಅಫಿಡವಿಟ್ ಸಲ್ಲಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತ್ರಿಪಲ್ ತಲಾಖ್ ನೀಡುವವರಿಗೆ ಸಮಾಜದಿಂದ ಬಹಿಷ್ಕಾರ ಹಾಕುವುದಾಗಿ ತಿಳಿಸಿದೆ.
ಇನ್ನು ಮದುಮಗನಿಗೆ ತ್ರಿವಳಿ ತಲಾಖ್ ನೀಡದಂತೆ ಸೂಚಿಸಲು ಖ್ವಾಜಿಗಳಿಗೆ ಸಲಹೆ ನೀಡುತ್ತೇವೆ. ಇದಲ್ಲದೆ ತ್ರಿವಳಿ ತಲಾಖ್ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಇದಕ್ಕಾಗಿ ವೆಬ್ಸೈಟ್ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುವುದು ಎಂದೂ ಹೇಳಿದೆ.
ಒಂದೊಮ್ಮೆ ದಾಂಪತ್ಯದಲ್ಲಿ ಬಿರುಕು ಬಿಟ್ಟಾಗ ಮೂರು ಬಾರಿ ತಲಾಕ್ ಹೇಳದಂತೆ ಮದುವೆ ಸಂದರ್ಭದಲ್ಲೇ ವರನಿಗೆ ಬುದ್ದಿ ಹೇಳಲಾಗುವುದು ಎಂದು ಹೇಳಿರುವ ಕಾನೂನು ಮಂಡಳಿ ಇದು ಶರಿಯತ್ ವಿರುದ್ಧವಾಗಿದೆ ಎಂದೂ ಅಫಿಡವಿಟ್ ನಲ್ಲಿ ತಿಳಿಸಿದೆ.
ಆದರೆ ಇದೊಂದು 'ಕಣ್ಣೊರೆಸುವ ತಂತ್ರ' ಎಂದು ಮುಸ್ಲಿಂ ಮಹಿಳಾ ಸಂಘಟನೆಗಳು ಹೇಳಿವೆ. ಮಾತ್ರವಲ್ಲ ಇದೊಂದು 'ವ್ಯರ್ಥ ಪ್ರಯತ್ನ' ಎಂದೂ ಅವು ಹೇಳಿವೆ.
ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠ ವಾದ ವಿವಾದಗಳನ್ನು ಆಲಿಸಿದ್ದು ತ್ರಿವಳಿ ತಲಾಖ್ ವಿಚಾರವಾಗಿ ತನ್ನ ತೀರ್ಪನ್ನು ಇನ್ನೂ ಕಾಯ್ದಿರಿಸಿದೆ. ಕೇಂದ್ರ ಸರಕಾರ ತ್ರಿವಳಿ ತಲಾಖ್ ವಿರೋಧಿಸಿರುವುದರಿಂದ ಸುಪ್ರೀಂ ಕೋರ್ಟ್ ನೀಡುವ ತೀರ್ಮಾನವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.
ಇನ್ನು ಭಾನುವಾರವಷ್ಟೇ ಕೇಂದ್ರ ಸರಕಾರ ಅಗತ್ಯಬಿದ್ದರೆ ತ್ರಿವಳಿ ತಲಾಕ್ ನಿಷೇಧಕ್ಕೆ ಕಾನೂನು ತಿದ್ದುಪಡಿ ತರಲಾಗುವುದು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.