ಊಟ ಬಡಿಸಲು ತಡಮಾಡಿದ ಪತ್ನಿಯನ್ನು ಗುಂಡಿಕ್ಕಿ ಕೊಂದ ಬಹದ್ದೂರ್ ಗಂಡ
ಗಾಜಿಯಾಬಾದ್ (ಉತ್ತರಪ್ರದೇಶ), ಜುಲೈ 10 : ಊಟ ಬಡಿಸಲು ತಡಮಾಡಿದ ಪತ್ನಿಯ ಮೇಲೆ ಪತಿ ಮಹಾಶಯನೊಬ್ಬ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಗಾಜಿಯಾಬಾದ್ ನಲ್ಲಿ ಶನಿವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
55 ವರ್ಷದ ಸುನೈನಾ ಎನ್ನುವರನ್ನು ಗುಂಡಿಕ್ಕಿ ಕೊಂದ ಪತಿ ಅಶೋಕ್ ಕುಮಾರ್ ನನ್ನು (60) ಪೊಲೀಸರು ಬಂಧಿಸಿದ್ದಾರೆ. ಟ್ರಕ್ ಚಾಲಕನಾಗಿರುವ ಅಶೋಕ್ ಶನಿವಾರ ರಾತ್ರಿ ಮನೆಗೆ ಬಂದ ಬಳಿಕ ಮದ್ಯಪಾನ ಮಾಡಿ ರಾತ್ರಿ 11 ಗಂಟೆ ಸುಮಾರಿಗೆ ಊಟ ಬಡಿಸುವಂತೆ ಪತ್ನಿಯನ್ನು ಕೇಳಿದ್ದಾನೆ. ಈ ವೇಳೆ ಊಟ ಬಡಿಸಲು ತಡ ಮಾಡಿದ ಕಾರಣಕ್ಕೆ ಪತ್ನಿಯೊಂದಿಗೆ ಆತ ಜಗಳ ತೆಗೆದಿದು ಬಳಿಕ ತನ್ನ ಬಳಿಯಿದ್ದ ಪಿಸ್ತೂಲ್ ನಿಂದ ಸುನೈನಾ ಅವರ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಗೆ ಗುಂಡು ಹೊಕ್ಕ ಸುನೈನಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅವರು ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ವೇಳೆ ಮನೆಯಲ್ಲಿ ಅಶೋಕ್ ಪುತ್ರ ರಿಂಕು, ರಿಂಕು ಪತ್ನಿ ಮತ್ತು ಮಕ್ಕಳು ಮನೆಯಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
'ಅಪ್ಪ-ಅಮ್ಮ ಜಗಳವಾಡುತ್ತಿದ್ದ ವೇಳೆ ನನ್ನ ಮಕ್ಕಳು ಮತ್ತೊಂದು ಕೋಣೆಯಲ್ಲಿ ಮಲಗಿದ್ದರು. ಕೈಯಲ್ಲಿ ಪಿಸ್ತೂಲ್ ಹಿಡಿದು ಅಮ್ಮನನ್ನು ಬೆದರಿಸುತ್ತಿದ್ದ ಅಪ್ಪನನ್ನು ಸಮಾಧಾನ ಮಾಡಲು ಪ್ರಯತ್ನಿಸಿದೆವು. ಆದರೆ, ನೋಡನೋಡುತ್ತಿದ್ದಂತೆ ಅಪ್ಪ ಅಮ್ಮನ ತಲೆಗೆ ಗುಂಡು ಹಾರಿಸಿದ' ಎಂದು ರಿಂಕು ಪೊಲೀಸರಿಗೆ ತಿಳಿಸಿದ್ದಾರೆ.