ಜಲ್ಲಿಕಟ್ಟು ಜಂಗೀ ಕುಸ್ತಿಗೆ ಸಿಕ್ಕಿತು ಎ.ಆರ್. ರಹಮಾನ್ ಬೆಂಬಲ
ತಮಿಳುನಾಡಿನ ಜಲ್ಲಿಕಟ್ಟು ಕಾವು ಇದೀಗ ದೆಹಲಿ ಅಂಗಳಕ್ಕೂ ಮುಟ್ಟಿದೆ. ಆದರೆ ಸಮಸ್ಯೆ ಬಗ್ಗೆ ತಮಿಳುನಾಡಿನ ಜನತೆಗೆ ಸಮಾಧಾನ ತರುವಂಥ ಯಾವುದೇ ಬೆಳವಣಿಗೆ ನಡೆದಿಲ್ಲ.
ದಿನೇ ದಿನೇ ಜಲ್ಲಿಕಟ್ಟು ವಿವಾದ ಕಾವು ಪಡೆದುಕೊಳ್ಳುತ್ತಿದೆ. ಬೂದಿ ಮುಚ್ಚಿದ ಕೆಂಡದಂತಿದ್ದು ವಾರದ ಹಿಂದೆ ಹೊಗೆಯಾಡಲು ಆರಂಭಿಸಿದ್ದ ವಿವಾದ ಜನವರಿ 19ರ ಹೊತ್ತಿಗೆ ಧಗಧಗನೇ ಉರಿಯುತ್ತಿದೆ. ತಮಿಳುನಾಡಿದ ಎಲ್ಲಾ 32 ಜಿಲ್ಲೆಗಳಲ್ಲಿ ಈ ಧಗೆ ವ್ಯಾಪಿಸಿದ್ದು, ಇದರ ಕಾವು ಪ್ರಧಾನಿವರೆಗೂ ಹಬ್ಬಿದೆ.
ಇತ್ತ, ದೆಹಲಿಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಪನೀರ್ ಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪ್ರಧಾನಿಯವರೂ ಆತುರದ ಆಶ್ವಾಸನೆ ಕೊಟ್ಟಿಲ್ಲ. ಬೆಣ್ಣೆಯಲ್ಲಿ ಕೂದಲು ತೆಗೆದ ಹಾಗೆ, ಕಾನೂನು ಪರಿಧಿಯೊಳಗೆ ಬೇಕಾದ ಕ್ರಮಗಳನ್ನು ತಮಿಳುನಾಡು ಸರ್ಕಾರ ಕೈಗೊಂಡಲ್ಲಿ ಅದನ್ನು ಕೇಂದ್ರ ಬೆಂಬಲಿಸುತ್ತದೆ ಎಂಬ ಜಾಣ್ಮೆಯ ನುಡಿಗಳನ್ನಾಡಿದ್ದಾರೆ.[ಜಲ್ಲಿಕಟ್ಟು ದೀಪಾವಳಿಗಿಂತ ದೊಡ್ಡ ಹಬ್ಬ : ಶ್ರೀಶ್ರೀ ರವಿಶಂಕರ್ ಗುರೂಜಿ]
ಏಕೆಂದರೆ, ಎಷ್ಟಾದರೂ ಅವರು ಅನುಭವಿ ಹಾಗೂ ಕುಶಾಗ್ರಮತಿಯುಳ್ಳವರು. ಪ್ರಕರಣದ ಈಗಾಗಲೇ ನ್ಯಾಯಾಲಯದ ಚೌಕಟ್ಟಿನಲ್ಲಿರುವುದರಿಂದ ಪ್ರಧಾನಿಯಾಗಿ ಜವಾಬ್ದಾರಿಯುತವಾಗಿ ವರ್ತಿಸಬೇಕಾದ್ದು ಅವರ ಧರ್ಮ. ಹಾಗಾಗಿಯೇ, ಅವರು ವಿಚಾರವನ್ನು ಸೂಕ್ಷ್ಮವಾಗಿ ನಿಭಾಯಿಸಿದ್ದಾರೆ. ಆದರೂ, ತಮಿಳುನಾಡಿನ ಎಲ್ಲೆಲ್ಲೂ ಪ್ರತಿಭಟನೆಗಳು ಮುಂದುವರಿದಿವೆ.[ಮೋದಿ-ಪನ್ನೀರ್ ಸೆಲ್ವಂ ಭೇಟಿ; ಜಲ್ಲಿಕಟ್ಟು ನಿಷೇಧ ವಾಪಸ್ ಗೆ ಆಗ್ರಹ]
ರಹಮಾನ್ ಉಪವಾಸ ಸತ್ಯಾಗ್ರಹ
ಜಲ್ಲಿಕಟ್ಟು ಕ್ರೀಡೆಯನ್ನು ಕಾನೂನುಬದ್ಧಗೊಳಿಸಬೇಕೆಂದು ಆಗ್ರಹಿಸಿ ತಮಿಳುನಾಡಿನೆಲ್ಲೆಡೆ ನಡೆಯುತ್ತಿರುವ ಪ್ರತಿಭಟನೆಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಅವರು ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವುದಾಗಿ ತಿಳಿಸಿದ್ದಾರೆ. [ಗ್ಯಾಲರಿ : ಜಲ್ಲಿಕಟ್ಟುಗಾಗಿ ಪ್ರತಿಭಟನೆ, ತಮಿಳರ ಅರ್ಭಟ]
ಮರೀನಾ ಬೀಚ್ ನಲ್ಲಿ ಬೃಹತ್ ಪ್ರತಿಭಟನೆ
ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯಸಂಸ್ಕಾರ ನಡೆದ ನಂತರ, ಮರೀನಾ ಬೀಚ್ ನಲ್ಲಿ ಇಷ್ಟೊಂದು ಪ್ರಮಾಣದ ಜನ ಸೇರಿರಲಿಕ್ಕಿಲ್ಲ. ಜಲ್ಲಿಕಟ್ಟು ಕ್ರೀಡೆಗಾಗಿ ಬುಧವಾರವೂ ಇಲ್ಲಿ ಪ್ರತಿಭಟನೆ ನಡೆದಿದ್ದು, ಅದು ಗುರುವಾರವೂ ಮುಂದುವರಿದು ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟಿಸಿದರು.
ಪೆಟಾ ವಿರುದ್ಧ ಘೋಷಣೆ
ಜಲ್ಲಿಕಟ್ಟು ನಿಷೇಧಕ್ಕೆ ಕಾರಣವಾದ ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್ ಮೆಂಟ್ ಆಫ್ ಅನಿಮಲ್ಸ್ (ಪೆಟಾ) ಸಂಸ್ಥೆಯ ಭಾರತೀಯ ಶಾಖೆಯ ವಿರುದ್ಧ ಘೋಷಣೆಗಳು ಮೊಳಗಿದವು.
ಮೋದಿ ಭಾವಚಿತ್ರದ ಮೇಲೆ ಆಕ್ರೋಶ
ಕೇಂದ್ರ ಸರ್ಕಾರವು ಜಲ್ಲಿಕಟ್ಟು ಕ್ರೀಡೆಯನ್ನು ಕಾನೂನುಬದ್ಧಗೊಳಿಸಲು ಸುಗ್ರೀವಾಜ್ಞೆ ಹೊರಡಿಸಬೇಕೆಂದು ವಾರದಿಂದಲೂ ತಮಿಳು ನಾಡಿನ ರಾಜಕಾರಣಿಗಳು ಆಗ್ರಹಿಸುತ್ತಿದ್ದಾರೆ. ಆದರೆ, ಇದಕ್ಕೆ ಓಗೊಡುತ್ತಿಲ್ಲವೆಂಬ ಕಾರಣಕ್ಕೆ ಮಧುರೈನಲ್ಲಿ ಗುರುವಾರ ನಡೆದ ಪ್ರತಿಭಟನೆ ವೇಳೆ, ಮೋದಿ ಭಾವಚಿತ್ರದ ಮೇಲೆ ಪ್ರತಿಭಟನಾಕಾರರು ಗುರುವಾರ ತಮ್ಮ ಕೋಪ ಪ್ರದರ್ಶಿಸಿದ್ದಾರೆ.
ಪ್ರಧಾನಿ ನಿವಾಸದ ಮುಂದೆ ಅನ್ಬುಮಣಿ
ತಮಿಳುನಾಡಿನ ರಾಜಕಾರಣಿಯಾದ ಪಟ್ಟಾಳಿ ಮಕ್ಕಳ್ ಕಚ್ಚಿ ಪಕ್ಷದ ನಾಯಕ, ಮಾಜಿ ಕೇಂದ್ರ ಸಚಿವ ಅನ್ಬುಮಣಿ ರಾಮ್ ದಾಸ್ ಅವರು, ಜಲ್ಲಿ ಕಟ್ಟು ಕ್ರೀಡೆಗೆ ಇರುವ ಕಾನೂನು ತೊಡಕನ್ನು ನಿವಾರಣೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಕ್ರಮ ಕೈಗೊಳ್ಳಬೇಕೆಂದು ನರೇಂದ್ರ ಮೋದಿ ನಿವಾಸದ ಮುಂದೆ ಧರಣಿ ಕೂತಿದ್ದಾರೆ.
ಉರಿ ಒಲೆಯಂತಾಗಿ ಜನರ ಮನಸ್ಸು
ಇದು ಕೊಯಮತ್ತೂರಿನಲ್ಲಿ ನಡೆದ ಪ್ರತಿಭಟನೆಯ ಚಿತ್ರ. ಇಲ್ಲಿನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಬಹುತೇಕರು ವಿದ್ಯಾರ್ಥಿಗಳು. ತಮ್ಮ ಶಾಲಾ, ಕಾಲೇಜುಗಳನ್ನು ಬಹಿಷ್ಕರಿಸಿ ಬೀದಿಗಿಳಿದ ಇವರು ಜಲ್ಲಿಕಟ್ಟು ಕಾನೂನುಬದ್ಧಗೊಳಿಸುವಂತೆ ಒತ್ತಾಯಿಸಿದರು.